ಚಿನ್ನಕಳ್ಳಸಾಗಣೆ ಪ್ರಕರಣ: ಸ್ವಪ್ನ ಸುರೇಶ್ ನಿರೀಕ್ಷಣಾ ಜಾಮೀನು ರದ್ದು
ತಿರುವನಂತಪುರಂ, ಜೂನ್ 9: ಕೇರಳದಲ್ಲಿ ಭಾರಿ ಸಂಚಲನ ಮೂಡಿಸಿದ ಚಿನ್ನದ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸ್ವಪ್ನ ಸುರೇಶ್ ನಿರೀಕ್ಷಣಾ ಜಾಮೀನು ರದ್ದುಗೊಳಿಸಲಾಗಿದೆ. ಕೇರಳ ಹೈಕೋರ್ಟ್ ಇಂದು ಪಿ.ಎಸ್ ಸರಿತ್ ಹಾಗೂ ಸ್ವಪ್ನ ಅವರ ನಿರೀಕ್ಷಣಾ ಜಾಮೀನು ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಕೇರಳ ಹೈಕೋರ್ಟ್ ವಿಭಾಗೀಯ ಪೀಠವು 2021ರ ನವೆಂಬರ್ ತಿಂಗಳಲ್ಲಿ ಸ್ವಪ್ನ ಸುರೇಶ್ ಹಾಗೂ ಇನ್ನಿತರ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಸಿ, ಏಳು ಮಂದಿಗೆ ಜಾಮೀನು ಮಂಜೂರು ಮಾಡಿತ್ತು. ಜಸ್ಟೀಸ್ ಕೆ ವಿನೋದ್ ಚಂದ್ರನ್, ಜಸ್ಟೀಸ್ ಕೆ ಜಯ ಚಂದ್ರನ್ ಅವರಿದ್ದ ನ್ಯಾಯಪೀಠವು ಎರ್ನಾಕುಲಂ ಎನ್ಐಎ ಪೀಠವು ಜಾಮೀನು ಅರ್ಜಿ ತಿರಸ್ಕರಿಸಿ ನೀಡಿದ್ದ ಆದೇಶವನ್ನು ರದ್ದುಗೊಳಿಸಿತ್ತು.
ಸ್ವಪ್ನ ಸುರೇಶ್, ಪಿ.ಎಸ್ ಸರೀತ್ ಅಲ್ಲದೆ ಮೊಹಮ್ಮದ್ ಶಫಿ ಪಿ, ಜಲಾಲ್ ಎ. ಎಂ ಹಮ್ಮದ್, ರಮೀಸ್ ಕೆ.ಟಿ, ಶರಾಫುದ್ದೀನ್ ಕೆ, ಮೊಹಮ್ಮದ್ ಅಲಿ ಎಂಬುವರಿಗೂ ಜಾಮೀನು ಸಿಕ್ಕಿತ್ತು. ಆದರೆ, ಮಾಜಿ ಸಚಿವ ಕೆಟಿ ಜಲೀಲ್ ವಿರುದ್ಧ ಆರೋಪ ಮಾಡಿದ್ದ ಸ್ವಪ್ನಗೆ ಮತ್ತೆ ಸಂಕಷ್ಟ ಎದುರಾಗಿದೆ.
ವಿಜಯನ್ ವಿರುದ್ಧ ತಿರುಗಿ ಬಿದ್ದ ಸ್ವಪ್ನ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಆರ್ ಪಿಸಿ ಸೆಕ್ಷನ್ 164ರಂತೆ ತಾವು ನೀಡಿರುವ ಹೇಳಿಕೆಯನ್ನು ಬದಲಾಯಿಸುವಂತೆ ಒತ್ತಡ ಹೇರಲಾಗುತ್ತಿದೆ. ಸಿಎಂ ವಿಜಯನ್ ಈ ಪ್ರಕರಣದಲ್ಲಿ ತಮ್ಮ ಪಾಲುದಾರಿಕೆ ಬಗ್ಗೆ ಏಕೆ ಬಹಿರಂಗಪಡಿಸುತ್ತಿಲ್ಲ, ನಮ್ಮನ್ನು ಏಕೆ ಸಿಕ್ಕಿಸುತ್ತಿದ್ದಾರೆ ಎಂದು ಸ್ವಪ್ನ ಪ್ರಶ್ನಿಸಿದ್ದರು. ಈ ನಡುವೆ ಸ್ವಪ್ನ, ಸರಿತ್ ವಿರುದ್ಧ ಮಾಜಿ ಸಚಿವ ಕೆಟಿ ಜಲೀಲ್ ದೂರು ನೀಡಿದ್ದು, ಪ್ರಕರಣ ಮತ್ತೊಂದು ಮಗ್ಗಲಿಗೆ ತಿರುಗಿದೆ. ಸಿಎಂ ವಿಜಯನ್ ಆಪ್ತ ಶಾಜಿ ಕಿರಣ್ ಎಂಬಾತ ನನ್ನ ಕಚೇರಿಗೆ ಬಂದು ಬೆದರಿಕೆ ಹಾಕಿದ್ದರಿಂದ ನಾನು ಹೇಳಿಕೆ ನೀಡಬೇಕಾಯಿತು. ನನ್ನ ಕುಟುಂಬದ ರಕ್ಷಣೆ ನನಗೆ ಮುಖ್ಯವಾಗಿತ್ತು ಎಂದು ಸ್ವಪ್ನ ಮಾಧ್ಯಮಗಳ ಮುಂದೆ ಹೇಳಿದ್ದರು.
ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ
ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ವಿಶೇಷ ನ್ಯಾಯಾಲಯವು ತನ್ನನ್ನು ಸೇರಿದಂತೆ ಪ್ರಕರಣದ ಇತರ ಏಳು ಆರೋಪಿಗಳಿಗೆ ಜಾಮೀನು ನಿರಾಕರಿಸಿದ್ದ ಆದೇಶವನ್ನು ಪ್ರಶ್ನಿಸಿ ಪ್ರಮುಖ ಆರೋಪಿ ಸ್ವಪ್ನ ಸುರೇಶ್ ಕೇರಳ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಅಕ್ರಮ ಹಣವರ್ಗಾವಣೆ, ರಾಜತಾಂತ್ರಿಕ ಮಾರ್ಗದ ಮೂಲಕ ಚಿನ್ನ ಕಳ್ಳಸಾಗಣೆ, ಕಾನೂನು ಬಾಹಿರ ಆರ್ಥಿಕ ವ್ಯವಹಾರ ಮುಂತಾದ ಆರೋಪಗಳನ್ನು ಹೊತ್ತುಕೊಂಡಿರುವ ಸ್ವಪ್ನ ಸುರೇಶ್ ಹಾಗೂ ಇತರೆ ಆರೋಪಿಗಳನ್ನು ಜಾರಿ ನಿರ್ದೇಶನಾಲಯವು ಕಳೆದ ವರ್ಷ ಜುಲೈನಲ್ಲಿ ಬಂಧಿಸಿತ್ತು. ಕಾನೂನು ಬಾಹಿರ ಆರ್ಥಿಕ ವ್ಯವಹಾರ UAPA ಕಾಯ್ದೆ ಉಲ್ಲಂಘನೆ ಮಾಡಿದ್ದ ಆರೋಪದ ಮೇಲೆ ಸೆಕ್ಷನ್ 16, 17, 18 ಹಾಗೂ 20ರ ಅಡಿ ಪ್ರಕರಣ ದಾಖಲಾಗಿತ್ತು.
UAPA ಕಾಯ್ದೆ ಉಲ್ಲಂಘನೆ?
ರಾಜತಾಂತ್ರಿಕ ರಕ್ಷಣೆ ಹೊಂದಿರುವ ''ಡಿಪ್ಲೊಮ್ಯಾಟಿಕ್ ಬ್ಯಾಗೇಜ್'' ನಲ್ಲಿದ್ದ 30 ಕೆಜಿ ಚಿನ್ನವನ್ನು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶ ಪಡಿಸಿಕೊಂಡಿದ್ದರು. ಸುಮಾರು 15 ಕೋಟಿ ರೂಪಾಯಿ ಮೌಲ್ಯದ ಈ ಚಿನ್ನ ಅಕ್ರಮ ಸಾಗಣೆಯ ಆರೋಪಿ ರಾಜತಾಂತ್ರಿಕ ಕಚೇರಿಯ ಮಾಜಿ ಸಿಬ್ಬಂದಿ ಸ್ವಪ್ನ ಸುರೇಶ್ ಎಂದು ಆರೋಪಿಸಲಾಗಿದೆ. ಯುಎಇ ಕಾನ್ಸುಲೇಟ್ ಅಧಿಕಾರಿಯಾಗಿದ್ದ ಪಿಎಸ್ ಸರೀತ್, ಮಾಜಿ ಉದ್ಯೋಗಿ ಸ್ವಪ್ನ ಸುರೇಶ್, ಸಂದೀಪ್ ನಾಯರ್, ಫೈಜಲ್ ಫರೀದ್ ಅವರ ವಿರುದ್ಧ Unlawful Activities (Prevention) Act ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಎನ್ಐಎ ತನಿಖೆ ಮುಂದುವರೆಸಿದೆ. ಆದರೆ, ಚಿನ್ನದ ಸ್ಮಗಲಿಂಗ್ ಮೇಲಿನ ದೋಷಾರೋಪಣ ಪಟ್ಟಿಯು ಕಸ್ಟಮ್ಸ್ ಕಾಯ್ದೆಯಡಿ ಬರುವುದರಿಂದ UAPA ಕಾಯ್ದೆ ಉಲ್ಲಂಘನೆ ಎಂದು ಸುಳ್ಳು ಆರೋಪ ಮಾಡಲಾಗಿದೆ ಎಂದು ಸ್ವಪ್ನ ಪರ ವಕೀಲರು ವಾದಿಸಿದರು.
ಎನ್ಐಎಗೆ ವರದಿ
2020ರ ಅಕ್ಟೋಬರ್ನಲ್ಲಿ ಸೆಂಟ್ರಲ್ ಬ್ಯೂರೋ ಆಫ್ ಎಕನಾಮಿಕ್ ಇಂಟೆಲಿಜೆನ್ಸ್ ಎನ್ಐಎಗೆ ವರದಿಯನ್ನು ಸಲ್ಲಿಸಿದೆ. ವರದಿಯನ್ನು ಎನ್ಐಎ ನ್ಯಾಯಾಲಯದ ಮುಂದಿಡಲಾಯಿತು. I ಈ ಪ್ರಕರಣದ 5ನೇ ಆರೋಪಿ ಕೆಟಿ ರಮೀಸ್ ಹಾಗೂ 13ನೇ ಆರೋಪಿ ಷರಾಫುದ್ದೀನ್ ಇಬ್ಬರು ತಾಂಜೇನಿಯಾಕ್ಕೆ ಹಲವು ಬಾರಿ ಭೇಟಿ ನೀಡಿದ್ದಾರೆ. ಅಲ್ಲಿ ದಾವೂದ್ ಜಾಲಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನು ಸಂಪರ್ಕಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ ಎಂದು ಎನ್ಐಎ ಹೇಳಿದೆ. ದಾವೂದ್ ಇಬ್ರಾಹಿಂ ಕುರಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಬಂಧ ಸಮಿತಿ ಬಿಡುಗಡೆ ಮಾಡಿದ ಪತ್ರ ಮತ್ತು ಯುಎಸ್ ಖಜಾನೆ ಇಲಾಖೆ ಪ್ರಕಟಿಸಿದ ಪರಿಶೀಲನಾ ವರಿಯಂತೆ ಡಿ ಗ್ಯಾಂಗ್ ಆಫ್ರಿಕಾದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಎನ್ಐಎ ನ್ಯಾಯಾಲಯಕ್ಕೆ ತಿಳಿಸಿದೆ. ದಾವೂದ್ ಆಪ್ತ ಫಿರೋಜ್ ಎಂಬ ವ್ಯಕ್ತಿ ತಾಂಜೇನಿಯಾದಲ್ಲಿ ವಜ್ರ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದಾನೆ ಆತನ ಜೊತೆ ರಮೀಸ್ ಸಂಪರ್ಕ ಹೊಂದಿದ್ದಾನೆ.
ಯುಎಇ ಕಾನ್ಸುಲೇಟ್ ಅಧಿಕಾರಿಯಾಗಿದ್ದ ಪಿಎಸ್ ಸರೀತ್
ಯುಎಇ ಕಾನ್ಸುಲೇಟ್ ಅಧಿಕಾರಿಯಾಗಿದ್ದ ಪಿಎಸ್ ಸರೀತ್, ಮಾಜಿ ಉದ್ಯೋಗಿ ಸ್ವಪ್ನ ಸುರೇಶ್, ಸಂದೀಪ್ ನಾಯರ್, ಫೈಜಲ್ ಫರೀದ್ ಅವರ ವಿರುದ್ಧ Unlawful Activities (Prevention) Act ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಎನ್ಐಎ ತನಿಖೆ ಮುಂದುವರೆಸಿದೆ. 2019ರಿಂದ ಇಲ್ಲಿ ತನಕ ಸುಮಾರು 200 ಕೆ.ಜಿಗೂ ಅಧಿಕ ಚಿನ್ನವನ್ನು ಈ ರೀತಿ ಅಕ್ರಮವಾಗಿ ರವಾನೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ವಪ್ನ ಪ್ರಭ ಸುರೇಶ್, ಫಾಜೀಲ್ ಫರೀದ್, ಸಂದೀಪ್ ನಾಯರ್ ಹಾಗೂ ಸರೀತ್ ಕುಮಾರ್ ಅವರ ವಿಚಾರಣೆಗೆ ಅಗತ್ಯವಿದೆ ಎಂದು ಎನ್ಐಎ ಅಧಿಕಾರಿಗಳು ಚಾರ್ಜ್ ಶೀಟ್ ನಲ್ಲಿ ಹೇಳಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಸ್ವಪ್ನ ಸುರೇಶ್ ಅವರಿಗೆ ಸಿಎಂ ಸಚಿವಾಲಯದ ಅಧೀನದ ಐಟಿ ಇಲಾಖೆಯಲ್ಲಿ ಗುತ್ತಿಗೆ ಆಧಾರಿತ ಹುದ್ದೆಯನ್ನು ಕೊಡಿಸುವಲ್ಲಿ ಶಿವಶಂಕರ್ ಮಹತ್ವದ ಪಾತ್ರ ವಹಿಸಿದ್ದರು ಎಂದು ಆರೋಪ ಕೇಳಿ ಬಂದಿದೆ. ಆರೋಪ ಕೇಳಿ ಬಂದ ಬಳಿಕ ಸಿಎಂ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಶಿವಶಂಕರ್ ಅವರನ್ನು ತೆಗೆದು ಹಾಕಲಾಗಿತ್ತು. ಜೊತೆಗೆ ಸಿಎಂ ಪಿಣರಾಯಿ ವಿಜಯನ್ ಅವರಿಗೂ ಕ್ಲೀನ್ ಚಿಟ್ ಸಿಕ್ಕಿದೆ.