ಕೇರಳ: ಬಿಷಪ್ ವಿರುದ್ಧ ಪ್ರತಿಭಟಿಸಿದ್ದ ಕ್ರೈಸ್ತ ಸನ್ಯಾಸಿನಿಯರ ವರ್ಗಾವಣೆ
ತಿರುವನಂತಪುರಂ, ಜನವರಿ 16: ಅತ್ಯಾಚಾರ ಆರೋಪ ಹೊತ್ತಿರುವ ಕ್ಯಾಥೊಲಿಕ್ ಬಿಷಪ್ ಜಲಂಧರ್ ಫ್ರಾಂಕೊ ಮುಳಕ್ಕಲ್ ಅವರ ವಿರುದ್ಧ ಪ್ರತಿಭಟನೆ ಮಾಡಿದ್ದ ನಾಲ್ವರು ಕ್ರೈಸ್ತ ಸನ್ಯಾಸಿನಿಯರನ್ನು ಬೇರೆ ಚರ್ಚ್ಗೆ ವರ್ಗಾವಣೆ ಮಾಡಲಾಗಿದೆ.
ಕ್ಯಾಥೊಲಿಕ್ ಚರ್ಚ್ ಆ ನಾಲ್ಕು ಕ್ರೈಸ್ತ ಸನ್ಯಾಸಿನಿಯರನ್ನು ತನ್ನ ಕುರವಿಲಂಗದ್ ಚರ್ಚ್ನಿಂದ ವರ್ಗಾವಣೆ ಮಾಡಿದೆ. ಇದೇ ಅತ್ಯಾಚಾರ ವಿರುದ್ಧ ಪ್ರತಿಭಟನೆಯಲ್ಲಿ ಮುನ್ನೆಲೆಯಲ್ಲಿರುವ ಕ್ರೈಸ್ತ ಸನ್ಯಾಸಿನಿ ಲ್ಯೂಸಿ ಕಲಪುರ ಅವರಿಗೆ ಎಚ್ಚರಿಕೆ ನೀಡಿದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ.
ಕೇರಳ ಅತ್ಯಾಚಾರ: ಪ್ರಮುಖ ಸಾಕ್ಷಿಯಾಗಿದ್ದ ಫಾದರ್ ಶವ ಪಂಜಾಬ್ನಲ್ಲಿ ಪತ್ತೆ
ಕ್ರೈಸ್ತ ಸನ್ಯಾಸಿನಿ ಅಲ್ಪಿ ಪಲ್ಲಸೆರ್ಲಿ, ಅನುಪಮಾ ಕೆಲಮಂಗಲತುವೇಲಿಯಿಲ್, ಜೋಸೆಫೈನ್ ವೆಲ್ಲೂನಿಕ್ಕಲ್, ಅಂಕಿತಾ ಉರಂಬಿಲ್ ಅವರುಗಳು ಕಳೆದ ವರ್ಷ ಕೇರಳ ಹೈಕೋರ್ಟ್ ಎದುರು ಫ್ರಾಂಕೊ ಮುಲಕ್ಕಲ್ ವಿರುದ್ಧ ಪ್ರತಿಭಟನೆ ಮಾಡಿ ಅವರ ಬಂಧನಕ್ಕೆ ಒತ್ತಾಯಿಸಿದ್ದರು.
ಬಿಷಪ್ ಫ್ರಾಂಕೊ ಮುಲಕ್ಕಲ್ ವಿರುದ್ಧ ಪ್ರತಿಭಟನೆಯಲ್ಲಿ ಮುನ್ನಲೆಯಲ್ಲಿರುವ ಲ್ಯೂಸಿ ಕಲಪುರ ಅವರಿಗೆ ಕೆಲವು ದಿನಗಳ ಹಿಂದಷ್ಟೆ ಕ್ಯಾಥೊಲಿಕ್ ಚರ್ಚ್ ಎಚ್ಚರಿಕೆ ನೀಡಿತ್ತು. ಅವರು ಈ ಪ್ರಕರಣದ ಬಗ್ಗೆ ಟಿವಿ ಚರ್ಚೆಯಲ್ಲಿ ಭಾಗವಹಿಸಿದ್ದರು, ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದರು. ಹಾಗಾಗಿ ಅವರಿಗೆ ಚರ್ಚ್ ಎಚ್ಚರಿಕೆ ರವಾನಿಸಿತ್ತು.
ಅನುಪಮ ಅವರನ್ನು ಪಂಜಾಬ್ಗೆ ಹೋಗಲು ನಿರ್ದೇಶನ ನೀಡಲಾಗಿದೆ. ಅಂಕಿತಾ ಅವರಿಗೆ ಕಣ್ಣೂರಿಗೆ ವರ್ಗಾಯಿಸಲಾಗಿದೆ , ಆಲ್ಫಿ ಅವರನ್ನು ಬಿಹಾರಕ್ಕೆ, ಜೊಸೆಫೈನ್ ಅವರನ್ನು ಜಾರ್ಖಂಡ್ಗೆ ವರ್ಗ ಮಾಡಲಾಗಿದೆ. ಫ್ರಾಂಕೊ ಮುಲಕ್ಕಲ್ ವಿರುದ್ಧದ ದನಿಗಳನ್ನು ಹತ್ತಿಕ್ಕಲು ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಅತ್ಯಾಚಾರ ಆರೋಪಿ ಬಿಷಪ್ ಫ್ರಾಂಕೋ ಮುಳಕ್ಕಲ್ ಗೆ ಜಾಮೀನು
ಬಿಷಪ್ ಫ್ರಾಂಕೊ ಮುಲಕ್ಕಲ್ ಅವರು 2014 ರಿಂದ 2016 ರವರೆಗೆ ಕ್ರೈಸ್ತ ಸನ್ಯಾಸಿನಿ ಒಬ್ಬರ ಮೇಲೆ ಸತತ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ಇದೆ. ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವರು ಮೂರು ವಾರಗಳ ಕಾಲ ಜೈಲು ವಾಸ ಸಹ ಅನುಭವಿಸಿ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.
ಈ ಪ್ರಕರಣವು ಕೇರಳ ಸೇರಿದಂತೆ ರಾಷ್ಟ್ರದಾದ್ಯಂತ ಚರ್ಚೆ ಹುಟ್ಟುಹಾಕಿತ್ತು. ಕೇರಳದಲ್ಲಿ ಬಿಷಪ್ ಫ್ರಾಂಕೊ ಪರ ಮತ್ತು ವಿರೋಧ ಪ್ರತಿಭಟನೆಗಳು ನಡೆದಿದ್ದವು.