ಬಜೆಟ್ ಅಧಿವೇಶನದಲ್ಲಿ ಭಾಗವಹಿಸಿದ್ದ ನಾಲ್ವರು ಶಾಸಕರಿಗೆ ಕೊರೊನಾ ಸೋಂಕು
ತಿರುವನಂತಪುರಂ, ಜನವರಿ 18: ಬಜೆಟ್ ಅಧಿವೇಶನದಲ್ಲಿ ಭಾಗಿಯಾಗಿದ್ದ ಕೇರಳದ ನಾಲ್ವರು ಶಾಸಕರಿಗೆ ಹಾಗೂ ಒಬ್ಬ ಪತ್ರಕರ್ತರಿಗೆ ಕೊರೊನಾ ಸೋಂಕು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ಸಿಪಿಯಂನ ಶಾಸಕರಾದ ಆಂದೋಲನ್, ಕೆ ದಾಸನ್ ಅವರಿಗೆ ಮೊದಲು ಕೊರೊನಾ ಸೋಂಕು ಪತ್ತೆಯಾಗಿತ್ತು. ನಂತರ ಇವರನ್ನು ತಿರುವನಂತಪುರಂನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆನಂತರ ಸಿಪಿಎಂ ಬೆಂಬಲಿತ, ನಟ ಎಂ ಮುಖೇಶ್ ಹಾಗೂ ಸಿಪಿಐನ ಇಎಸ್ ಬಿಜಿಮೋಳ್ ಅವರಲ್ಲಿ ಸೋಮವಾರ ಸೋಂಕು ಇರುವುದು ದೃಢಪಟ್ಟಿದೆ. ಈ ಸೋಂಕಿನ ಮೂಲದ ಕುರಿತು ಪತ್ತೆಯಾಗಿಲ್ಲ. ಅಧಿವೇಶನದ ಆರಂಭಕ್ಕೂ ಮುನ್ನ ಎಲ್ಲರಿಗೂ ಕೊರೊನಾ ಪರೀಕ್ಷೆ ನಡೆಸಲಾಗಿತ್ತು.
ವರ್ಕ್ ಫ್ರಂ ಹೋಂಗೆ ಆದ್ಯತೆ, 20 ಲಕ್ಷ ಉದ್ಯೋಗ ಸೃಷ್ಟಿ ಗುರಿ ಹೊತ್ತ ಕೇರಳ ಬಜೆಟ್
ಜನವರಿ 8ರಿಂದ ಕೇರಳದ ಬಜೆಟ್ ಅಧಿವೇಶನ ಆರಂಭಗೊಂಡಿದ್ದು, ಮುಖೇಶ್ ಹಾಗೂ ಬಿಜಿಮೋಳ್ ಅವರು ಜನವರಿ 15ರಂದು ಅಧಿವೇಶನದಲ್ಲಿ ಪಾಲ್ಗೊಂಡಿದ್ದರು. ಅಧಿವೇಶನದಲ್ಲಿ ಇವರ ಸಂಪರ್ಕಕ್ಕೆ ಬಂದ ಹಾಗೂ ಇವರ ಸುತ್ತಮುತ್ತ ಕುಳಿತಿದ್ದವರಿಗೆ ಕ್ವಾರಂಟೈನ್ ಇರಲು ಸೂಚಿಸಲಾಗಿದೆ.
ಕೊರೊನಾದಿಂದಾಗಿ ಅಧಿವೇಶನದ ದಿನಗಳನ್ನು ಮೊಟಕುಗೊಳಿಸಲಾಗಿದೆ. ಜನವರಿ 28ರವರೆಗೂ ಇದ್ದ ಅಧಿವೇಶನವನ್ನು ಜನವರಿ 22ರವರೆಗೆ ಸೀಮಿತಗೊಳಿಸಲಾಗಿದೆ. ಅಧಿವೇಶನದ ಹಾಲ್ ಹವಾನಿಯಂತ್ರಕವಾಗಿದ್ದು, ಕೊರೊನಾ ಹರಡಲು ಸೂಕ್ತ ವಾತಾವರಣವಾಗಿದೆ. ಜೊತೆಗೆ ಅಧಿವೇಶನದಲ್ಲಿ ಶೇ.50ಕ್ಕೂ ಹೆಚ್ಚು ಜನ 60 ವರ್ಷ ಮೇಲ್ಪಟ್ಟವರಾಗಿದ್ದಾರೆ. ಹೀಗಾಗಿ ಕೊರೊನಾ ಸೋಂಕು ಹರಡುವ ಸಾಧ್ಯತೆಯೂ ವ್ಯಾಪಕವಾಗಿದೆ.