ಕೇರಳ ಹೈಕೋರ್ಟ್ನ ಇಬ್ಬರು ನಿವೃತ್ತ ನ್ಯಾಯಮೂರ್ತಿಗಳು ಬಿಜೆಪಿ ಸೇರ್ಪಡೆ
ಕೊಚ್ಚಿ, ಮಾರ್ಚ್ 1: ಕೇರಳ ವಿಧಾನಸಭೆ ಚುನಾವಣೆ ಸಮೀಪದಲ್ಲಿಯೇ ಇಬ್ಬರು ನಿವೃತ್ತ ನ್ಯಾಯಮೂರ್ತಿಗಳು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಕಳೆದ ವರ್ಷ ನಿವೃತ್ತ ಸಿಜೆಐ ರಂಜನ್ ಗೊಗೊಯ್ ಅವರನ್ನು ಬಿಜೆಪಿ ಸರ್ಕಾರ ರಾಜ್ಯಸಭೆಗೆ ಆಯ್ಕೆ ಮಾಡಿತ್ತು. ಅದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈಗ ಕೇರಳ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿಗಳಾದ ಪಿಎನ್ ರವೀಂದ್ರನ್ ಮತ್ತು ವಿ. ಚಿತಂಬರೇಶ್ ಅವರು ಕಮಲ ಪಾಳೆಯಕ್ಕೆ ಸೇರಿಕೊಂಡಿದ್ದಾರೆ.
ಕೇರಳದ ತ್ರಿಪ್ಪುನಿಥುರದಲ್ಲಿ ಭಾನುವಾರ ನಡೆದ ಬಿಜೆಪಿಯ ವಿಜಯ ಯಾತ್ರೆಯ ಸಂದರ್ಭದಲ್ಲಿ ಪಿಎನ್ ರವೀಂದ್ರನ್ ಮತ್ತು ವಿ. ಚಿತಂಬರೇಶ್ ಮತ್ತು ಮಹಿಳಾ ಕಾಂಗ್ರೆಸ್ನ ಕೆಲವು ಕಾರ್ಯಕರ್ತೆಯರು ಸೇರಿದಂತೆ 18 ಮಂದಿ ಇತರರು ಬಿಜೆಪಿ ಸೇರಿಕೊಂಡರು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ ಸುರೇಂದ್ರನ್ ಸಮ್ಮುಖದಲ್ಲಿ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು.
ಎಲ್ಡಿಎಫ್, ಯುಡಿಎಫ್ ಬಗ್ಗೆ ಬೇಸತ್ತ ಕೇರಳದಲ್ಲಿ ಬಿಜೆಪಿಯತ್ತ ಒಲವು!
ನಿವೃತ್ತ ನ್ಯಾ. ರವೀಂದ್ರನ್ ಅವರು 2007 ರಿಂದ 2018ರ ವರೆಗೆ ಕೇರಳ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದರು. ನ್ಯಾ. ಚಿತಂಬರೇಶ್ ಅವರು 2011ರಲ್ಲಿ ಕೇರಳ ಹೈಕೋರ್ಟ್ಗೆ ಪದೋನ್ನತಿ ಪಡೆದಿದ್ದು, 2019ರ ವರೆಗೆ ಕರ್ತವ್ಯ ನಿರ್ವಹಿಸಿದ್ದರು.
ಸಮೀಕ್ಷೆ: ಕೇರಳದಲ್ಲಿ ಮತ್ತೆ LDF ಸರ್ಕಾರ, ಬಿಜೆಪಿಗೆ ಉಪ್ಪು ಖಾರ
ಎಬಿವಿಪಿ ಸದಸ್ಯ
ಚಿತಂಬರೇಶ್ ಅವರು ದೆಹಲಿಯಲ್ಲಿದ್ದ ಕಾರಣ ಕಾರ್ಯಕ್ರಮದಲ್ಲಿ ಹಾಜರಿರಲಿಲ್ಲ. 'ಲವ್ ಜಿಹಾದ್' ಕಾನೂನಿನ ಪರವಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಬರೆದಿದ್ದ ಪತ್ರಕ್ಕೆ ಸಹಿ ಮಾಡಿದ್ದ ಕಾರಣಕ್ಕೆ ಇಬ್ಬರೂ ನ್ಯಾಯಮೂರ್ತಿಗಳು ಸುದ್ದಿಯಲ್ಲಿದ್ದರು. ಚಿತಂಬರೇಶ್ ಅವರು ಪಾಲಕ್ಕಾಡ್ನ ವಿಕ್ಟೋರಿಯಾ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ಸಕ್ರಿಯ ಎಬಿವಿಪಿ ಸದಸ್ಯರಾಗಿದ್ದಾಗಿ ಹೇಳಿಕೊಂಡಿದ್ದಾರೆ.
ಬಿಜೆಪಿ ಜತೆ ಪಯಣಿಗ
'ನಾನು ಬಿಜೆಪಿಯ ಜತೆಗಿನ ಪಯಣಿಗನಾಗಿದ್ದೆ. ಈಗ ನಾನು ಅಧಿಕೃತವಾಗಿ ಪಕ್ಷ ಸೇರ್ಪಡೆಯಾಗಿದ್ದೇನೆ. ನಾನು ದೆಹಲಿಯಲ್ಲಿರುವ ಕಾರಣ ಕೊಚ್ಚಿಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ' ಎಂದು ಚಿತಂಬರೇಶ್ ತಿಳಿಸಿದ್ದಾರೆ.
ಡಿಜಿಪಿ, ಅಡ್ಮಿರಲ್ ಬಿಜೆಪಿಗೆ
ಮಾಜಿ ಡಿಜಿಪಿ ವೇಣುಗೋಪಾಲ್ ನಾಯರ್, ಅಡ್ಮಿರಲ್ ಬಿಆರ್ ಮೆನನ್ ಮತ್ತು ಬಿಪಿಸಿಎಲ್ನ ಮಾಜಿ ಪ್ರಧಾನ ವ್ಯವಸ್ಥಾಪಕ ಸೋಮಚೂಡನ್ ಅವರು ಈ ವೇಳೆ ಬಿಜೆಪಿ ಸೇರಿಕೊಂಡರು. ಮಹಿಳಾ ಕಾಂಗ್ರೆಸ್ನ ಮಾಜಿ ಮುಖಂಡೆ ಶಿಜಿ ರಾವ್ ಹಾಗೂ ಇತರೆ 12 ಕಾಂಗ್ರೆಸ್ ಕಾರ್ಯಕರ್ತರು ಸಹ ಬಿಜೆಪಿ ಸೇರಿಕೊಂಡಿದ್ದಾರೆ ಎಂದು ಬಿಜೆಪಿ ವಕ್ತಾರರು ತಿಳಿಸಿದ್ದಾರೆ.
ನಿವೃತ್ತ ನ್ಯಾಯಮೂರ್ತಿ ಕೇಮಲ್ ಪಾಷಾ
ಕಳೆದ ತಿಂಗಳು ಕೇರಳ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಬಿ ಕೇಮಲ್ ಪಾಷಾ ಅವರು ಕೇರಳ ನೇತೃತ್ವದ ಯುಡಿಎಫ್ ಕಡೆಗೆ ಮುಖಮಾಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅವಕಾಶ ಕಲ್ಪಿಸಿದರೆ ಎರ್ನಾಕುಲಂನಿಂದ ಸ್ಪರ್ಧೆ ಮಾಡುವುದಾಗಿ ಅವರು ಹೇಳಿದ್ದರು. ಪಾಷಾ ಅವರು 2013-2018 ಅವಧಿಯಲ್ಲಿ ಕೇರಳ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದರು.