ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿದರೆ 5 ವರ್ಷ ಜೈಲು: ವಿವಾದ ಸೃಷ್ಟಿಸಿದ ಕಾನೂನು
ತಿರುವನಂತಪುರಂ, ನವೆಂಬರ್ 23: ಕೇರಳ ಸರ್ಕಾರದ ಹೊಸ ಕಾನೂನು ಭಾರಿ ವಿವಾದ ಸೃಷ್ಟಿಸಿದೆ. ಸಾಮಾಜಿಕ ಜಾಲತಾಣದಲ್ಲಿ ನಿಂದನಾತ್ಮಕ ಪೋಸ್ಟ್ಗಳನ್ನು ಮಾಡಿದರೆ ಜೈಲು ಶಿಕ್ಷೆ ವಿಧಿಸುವಂತಹ ಕಠಿಣ ಕಾನೂನನ್ನು ಜಾರಿಗೆ ತರಲಾಗಿದೆ.
'ನಿಂದನಾತ್ಮಕ' ಅಥವಾ ಬೆದರಿಕೆ ಹಾಕುವಂತಹ ಯಾವುದೇ ಸಾಮಾಜಿಕ ಮಾಧ್ಯಮ ಅಥವಾ ಸೈಬರ್ ಪೋಸ್ಟ್ಗಳನ್ನು ಮಾಡಿದರೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವಂತೆ ಕೇರಳ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರುವ ಎಲ್ಡಿಎಫ್ ಸರ್ಕಾರದ ಸುಗ್ರೀವಾಜ್ಞೆಗೆ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅನುಮೋದನೆ ನೀಡಿದ್ದಾರೆ.
ಸಿದ್ದಿಕಿ ಪತ್ರಕರ್ತನಲ್ಲ, ಪಿಎಫ್ಐ ಸಕ್ರಿಯ ಸದಸ್ಯ: ಉತ್ತರ ಪ್ರದೇಶ ಸರ್ಕಾರ
ಕೇರಳ ಪೊಲೀಸ್ ಕಾಯ್ದೆಗೆ ಹೊಸ 118 (ಎ) ಸೆಕ್ಷನ್ ಅಳವಡಿಸುವ ಸುಗ್ರೀವಾಜ್ಞೆಗೆ ಖಾನ್ ಅವರು ಸಹಿ ಹಾಕಿದ್ದಾರೆ ಎಂದು ರಾಜ್ಯಪಾಲರ ಕಚೇರಿ ಖಚಿತಪಡಿಸಿದೆ. ಇದರ ಪ್ರಕಾರ, ಯಾವುದೇ ವ್ಯಕ್ತಿ ಯಾವುದೇ ಸ್ವರೂಪದ ಸಂವಹನದ ಮೂಲಕ ಅಪರಾಧಕ್ಕೆ ಪೂರಕವಾದ ಯಾವುದೇ ಮಾಹಿತಿಯನ್ನು ಸೃಷ್ಟಿಸಿದರೆ ಅಥವಾ ರವಾನಿಸಿದರೆ ಅಥವಾ ಮತ್ತೊಬ್ಬ ವ್ಯಕ್ತಿಯನ್ನು ನಿಂದಿಸುವ ಅಥವಾ ಬೆದರಿಸುವ ಉದ್ದೇಶ ಹೊಂದಿದ್ದರೆ ಆತ ಐದು ವರ್ಷಗಳ ಜೈಲು ಶಿಕ್ಷೆ ಅಥವಾ 10,000 ರೂ. ದಂಡ ಅಥವಾ ಎರಡನ್ನೂ ಎದುರಿಸಬಹುದು. ಮುಂದೆ ಓದಿ.
ಪೊಲೀಸರಿಗೆ ಹೆಚ್ಚಿನ ಅಧಿಕಾರ
ಈ ಕಾನೂನು ಕೇರಳದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಪೊಲೀಸರಿಗೆ ಮತ್ತಷ್ಟು ಅಧಿಕಾರ ನೀಡಿದಂತಾಗುತ್ತದೆ ಮತ್ತು ಮಾಧ್ಯಮ ಸ್ವಾತಂತ್ರ್ಯವನ್ನು ನಿರ್ಬಂಧಿಸಲಾಗುತ್ತದೆ ಎಂಬ ಆತಂಕ ಸೃಷ್ಟಿಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ದಾಳಿ
ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಗಳನ್ನ ಗುರಿಯನ್ನಾಗಿರಿಸಿ ನಡೆಯುವ ದಾಳಿಗಳು ಹೆಚ್ಚುತ್ತಿರುವುದರಿಂದ ಅವುಗಳನ್ನು ತಡೆಯಲು ಈ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ನಾಗರಿಕರ ಘನತೆಯ ರಕ್ಷಣೆ
'ಈ ಹೊಸ ತಿದ್ದುಪಡಿಯು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪಕ್ಷಪಾತರಹಿತ ಪತ್ರಿಕೋದ್ಯಮಕ್ಕೆ ಯಾವುದೇ ರೀತಿ ಧಕ್ಕೆ ಉಂಟುಮಾಡುವುದಿಲ್ಲ. ಇದರ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಮಾಧ್ಯಮ ಸ್ವಾತಂತ್ರ್ಯವನ್ನು ಖಾತರಿಪಡಿಸುವುದರ ಜತೆಗೆ, ಸಂವಿಧಾನವು ನೀಡಿರುವ ನಾಗರಿಕರ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಘನತೆಯನ್ನು ಎತ್ತಿಹಿಡಿಯುವ ಜವಾಬ್ದಾರಿಯನ್ನು ಕೂಡ ಸರ್ಕಾರ ಹೊಂದಿದೆ' ಎಂದು ಪಿಣರಾಯಿ ಹೇಳಿದ್ದಾರೆ.
ಟೀಕಿಸುವವರ ವಿರುದ್ಧ ಬಳಕೆಯ ಅಸ್ತ್ರ
ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ 118 (ಡಿ) ವಿರುದ್ಧ 2015ರಲ್ಲಿ ಸುಪ್ರೀಂಕೋರ್ಟ್ನಲ್ಲಿ ಹೋರಾಟ ನಡೆಸಿ ಗೆದ್ದಿದ್ದ ಕೇರಳ ಮೂಲದ ವಕೀಲ ಅನೂಪ್ ಕುಮಾರನ್ ಅವರು, 118 (ಎ) ಸೆಕ್ಷನ್ ಸುಗ್ರೀವಾಜ್ಞೆ ವಿರುದ್ಧ ಹೈಕೋರ್ಟ್ನಲ್ಲಿ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ. ಈ ತಿದ್ದುಪಡಿ ನಿಯಮವು ಸಾಮಾಜಿಕ ಮಾಧ್ಯಮ ನಿಂದನೆಗಳಿಂದ ಜನರನ್ನು ರಕ್ಷಿಸಲು, ಮುಖ್ಯವಾಗಿ ಮಹಿಳೆಯರ ಪರವಾಗಿ ಇದೆ ಎಂದು ಹೇಳಲಾಗುತ್ತಿದೆ. ಆದರೆ ವಾಸ್ತವವಾಗಿ ತಮ್ಮನ್ನು ಟೀಕಿಸುವ ಜನರ ವಿರುದ್ಧವಾಗಿ ಅಧಿಕಾರಿಗಳು ಮತ್ತು ಸರ್ಕಾರ ಈ ಕಾನೂನನ್ನು ಬಳಸಲಿದೆ ಎಂದು ಅವರು ಆರೋಪಿಸಿದ್ದಾರೆ.