ಶಬರಿಮಲೆ ಕುರಿತ ಸುಪ್ರೀಂ ತೀರ್ಪು ಸ್ವಾಗತಿಸಿದ ರಾಹುಲ್ ಈಶ್ವರ್
ನವದೆಹಲಿ, ನವೆಂಬರ್ 14: ಕೇರಳದ ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಕುರಿತ ಅರ್ಜಿ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿ ಸುಪ್ರೀಂಕೋರ್ಟ್ ಇಂದು ನೀಡಿದ ನಿರ್ದೇಶನವನ್ನು ಸಾಮಾಜಿಕ ಕಾರ್ಯಕರ್ತ ರಾಹುಲ್ ಈಶ್ವರ್ ಅವರು ಸ್ವಾಗತಿಸಿದ್ದಾರೆ.
ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧವನ್ನು ತೆರವುಗೊಳಿಸಿದ್ದ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಲಾದ 66 ಮೇಲ್ಮನವಿ ಅರ್ಜಿ ಪ್ರಕರಣವನ್ನು ಸಪ್ತ ನ್ಯಾಯಮೂರ್ತಿಗಳ ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ.
ಶಬರಿಮಲೆ ತೀರ್ಪು: ಸಪ್ತಸದಸ್ಯರ ವಿಸ್ತೃತ ಪೀಠಕ್ಕೆ ವರ್ಗಾವಣೆ
2018 ರ ಸೆಪ್ಟೆಂಬರ್ 28ರಂಡು ಸುಪ್ರೀಂ ಕೋರ್ಟ್ ಶಬರಿಮಲೆಗೆ ಮಹಿಳೆಯರು ಪ್ರವೇಶಿಸಲು ಅನುಮತಿ ನೀಡಿತ್ತು. ಆದರೆ ಈ ತೀರ್ಪನ್ನು ಮರುಪರಿಶೀಲಿಸಬೇಕು ಎಂದು ಒಟ್ಟು 66 ಅರ್ಜಿಗಳು ಸಲ್ಲಿಕೆಯಾಗಿದ್ದವು. ಅವೆಲ್ಲವುಗಳ ವಿಚಾರಣೆಯನ್ನು ಕೋರ್ಟು ಮುಗಿಸಿದೆ. ಆದರೆ ಇಂದು ತೀರ್ಪು ನೀಡದೆ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ.
"ನ್ಯಾಯಾಲಯದ ಇತಿಹಾಸದಲ್ಲಿ ಹೀಗೆ ತೀರ್ಪಿನ ಮರುಪರಿಶೀಲನೆ ನಡೆದಿರುವುದು ಬಹು ಅಪರೂಪ, ಆದರೆ ಶಬರಿಮಲೆ ವಿಷಯದಲ್ಲಿ ನ್ಯಾಯಾಲಯವು ಮರುಪರಿಶೀಲನಾ ಅರ್ಜಿ ವಿಚಾರಣೆ ನಡೆಸುವುದಾಗಿ ಹೇಳಿರುವುದು ಐತಿಹಾಸಿಕ ಮತ್ತು ಇದು ನಮಗೆ ಅರ್ಧ ಗೆಲುವು ತಂದುಕೊಟ್ಟಿತ್ತು. ಈ ಹಿಂದಿನ ಆದೇಶವನ್ನು ರದ್ದು ಮಾಡಿದರೆ ಪೂರ್ಣ ಜಯ ಲಭಿಸಲಿದೆ"ಎಂದು ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.
ಸುಪ್ರೀಂಕೋರ್ಟ್ ಆದೇಶದಂತೆ ಶಬರಿಮಲೆಗೆ ಮಹಿಳೆ ಪ್ರವೇಶಕ್ಕೆ ಸರ್ಕಾರ ಅನುವು ಮಾಡಿಕೊಟ್ಟಿತ್ತು. ಆದರೆ, ಅಯ್ಯಪ್ಪ ಧರ್ಮ ಸೇನಾ ಇದಕ್ಕೆ ವಿರೋಧ ವ್ಯಕ್ತಪಡಿಸಿ, ದೇಗುಲದ ರಕ್ಷಣೆಗೆ ನಿಂತುಕೊಂಡಿತ್ತು. ಪ್ರಗತಿಪರರು ಹಾಗೂ ಧರ್ಮಸೇನಾ ನಡುವಿನ ಸಂಘರ್ಷದ ನಡುವೆ ಉಂಟಾದ ಘರ್ಷಣೆಗೆ ರಾಹುಲ್ ಈಶ್ವರ್ ಅವರನ್ನು ಹೊಣೆ ಮಾಡಲಾಗಿತ್ತು.
ಶಬರಿಮಲೆ ದೇವಳಕ್ಕೆ ಮಹಿಳೆಯರ ಪ್ರವೇಶ ನಿಷೇಧಕ್ಕೆ ಕಾರಣ ಗೊತ್ತೆ?
ಶಬರಿಮಲೆ ದೇಗುಲ ಪರ ನಿಂತಿದ್ದ ಬಲಪಂಥೀಯ ಸಂಘಟನೆ ಅಯ್ಯಪ್ಪ ಧರ್ಮ ಸೇನಾ ಮುಖಂಡ ರಾಹುಲ್ ಈಶ್ವರ್ ಅವರು ಬಂಧನ ಭೀತಿ ಎದುರಿಸಿದ್ದರು.
ದೇವಸ್ಥಾನದ ಆಡಳಿತ ಮಂಡಳಿಯ ನಿಯಮಾವಳಿ ಪ್ರಕಾರ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರು ದೇವಸ್ಥಾನದ ಆವರಣಕ್ಕೆ ಭೇಟಿ ನೀಡಲು ಅವಕಾಶವಿರಲಿಲ್ಲ. ಋತುಮತಿಯಾಗುವ ವಯಸ್ಸಿನ ಹೆಣ್ಣುಮಕ್ಕಳು ದೇವಾಲಯದ ಆವರಣಕ್ಕೆ ಪ್ರವೇಶಿಸಿದರೆ ಮಂದಿರದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂಬುದು ದೇವಾಲಯದ ಆಡಳಿತ ಮಂಡಳಿಯ ವಾದವಾಗಿತ್ತು. ಆದರೆ 2018 ರ ಸೆಪ್ಟೆಂಬರ್ ನಲ್ಲಿ ಈ ನಿಷೇಧವನ್ನು ತೆರವುಗೊಳಿಸಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಮಹಿಳೆಯರು ದೇವಾಲಯ ಪ್ರವೇಶಿಸಬಹುದು ಎಂದಿತ್ತು.