ಡಾಲರ್ ಸ್ಮಗಲಿಂಗ್: ಐಎಎಸ್ ಅಧಿಕಾರಿ ಶಿವಶಂಕರ್ ಜೈಲಿನಿಂದ ಹೊರಕ್ಕೆ
ತಿರುವನಂತಪುರಂ, ಫೆಬ್ರವರಿ 03: ಕೇರಳ ಸಿಎಂ ಮಾಜಿ ಕಾರ್ಯದರ್ಶಿ, ಐಎಎಸ್ ಅಧಿಕಾರಿ ಎಂ ಶಿವಶಂಕರ್ ಅವರಿ 98 ದಿನಗಳ ಜೈಲುವಾಸದ ನಂತರ ಜೈಲಿನಿಂದ ಹೊರ ಬಂದಿದ್ದಾರೆ. ಡಾಲರ್ ಸ್ಮಗಲಿಂಗ್ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಬುಧವಾರದಂದು ಜಾಮೀನು ದೊರೆತಿದ್ದರಿಂದ ಮಧ್ಯಾಹ್ನದ ವೇಳೆ ಕಾಕ್ಕನಾಡ್ ಉಪ ಕಾರಾಗೃಹದಿಂದ ಹೊರ ನಡೆದರು.
ಕೇರಳದ ಪಿಣರಾಯಿ ಸರ್ಕಾರವನ್ನು ಅಲ್ಲಾಡಿಸಿದ ಚಿನ್ನದ ಸ್ಮಗಲಿಂಗ್ ಕೇಸ್ ನಲ್ಲಿ ಸಿಲುಕಿದ್ದ ಶಿವಶಂಕರ್ ಅವರಿಗೆ ಕಳೆದ ತಿಂಗಳೇ ಜಾಮೀನು ಸಿಕ್ಕಿತ್ತು. ಆದರೆ, ಡಾಲರ್ ಸ್ಮಗಲಿಂಗ್ ಕೇಸಿನಲ್ಲಿ ಜಾಮೀನು ವಿಚಾರಣೆ ಬಾಕಿಯಿತ್ತು. ಆರ್ಥಿಕ ಅಪರಾಧಗಳ ಹೆಚ್ಚುವರಿ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು ಇಂದು ಜಾಮೀನು ನೀಡಿದರು. 2 ಲಕ್ಷ ರು ವೈಯಕ್ತಿಕ ಬಾಂಡ್, ಇಬ್ಬರ ಶ್ಯೂರಿಟಿ, ತನಿಖೆಗೆ ಸಹಕರಿಸಬೇಕು, ಪ್ರತಿ ಸೋಮವಾರ ತನಿಖಾಧಿಕಾರಿ ಮುಂಚೆ ಹಾಜರಾಗಬೇಕು ಮುಂತಾದ ಷರತ್ತುಗಳನ್ನು ವಿಧಿಸಲಾಗಿದೆ.
ಚಿನ್ನ ಸ್ಮಗಲಿಂಗ್: ಜಾಮೀನು ಸಿಕ್ಕರೂ ಜೈಲಿನಲ್ಲೇ ಶಿವಶಂಕರ
ಜಾರಿ ನಿರ್ದೇಶನಾಲಯ, ಕಸ್ಟಮ್ಸ್ ಅಧಿಕಾರಿಗಳ ವಿಚಾರಣೆ ಎದುರಿಸಿದ್ದ ಶಿವಶಂಕರ್ ಅವರ ಮೇಲೆ 1,90,000 ಯುಎಸ್ ಡಾಲರ್ ಸ್ಮಗಲಿಂಗ್ (ಸುಮಾರು 1.30 ಕೋಟಿ) ಮಾಡಿದ ಆರೋಪ ಹೊರೆಸಲಾಗಿತ್ತು. ತಿರುವನಂತಪುರಂನಲ್ಲಿರುವ ಯುಎಇ ರಾಯಭಾರ ಕಚೇರಿಯ ಆರ್ಥಿಕ ವಿಭಾಗದ ಮುಖ್ಯಸ್ಥರಿಂದ ಒಮಾನ್ ನ ಮಸ್ಕತ್ಗೆ ಅಕ್ರಮವಾಗಿ ರವಾನೆ ಮಾಡಲು ಸಹಕರಿಸಿದ ಆರೋಪ ಹೊತ್ತುಕೊಂಡಿದ್ದರು. ಆದರೆ, ಸೂಕ್ತ ಸಾಕ್ಷಿ ಆಧಾರಗಳು ಸಿಕ್ಕಿರಲಿಲ್ಲ, ಕ್ಯಾನ್ಸರ್ ನಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳುತ್ತಿರುವ ಶಿವಶಂಕರ್ ಅವರ ಹೆಚ್ಚಿನ ವಿಚಾರಣೆ ಅಗತ್ಯವಿಲ್ಲ ಎಂದು ತನಿಖಾ ಸಂಸ್ಥೆಗಳು ವರದಿ ನೀಡಿದ್ದರಿಂದ ಕೋರ್ಟ್ ಜಾಮೀನು ನೀಡಿದೆ.
ಸ್ವಪ್ನಗೆ ನೆರವಾದ ಆರೋಪದ ಮೇಲೆ ಅಮಾನತು
ಪ್ರಕರಣದ ಪ್ರಮುಖ ಆರೋಪಿ ಸ್ವಪ್ನ ಸುರೇಶ್ ಅವರಿಗೆ ಸಿಎಂ ಸಚಿವಾಲಯದ ಅಧೀನದ ಐಟಿ ಇಲಾಖೆಯಲ್ಲಿ ಗುತ್ತಿಗೆ ಆಧಾರಿತ ಹುದ್ದೆಯನ್ನು ಕೊಡಿಸುವಲ್ಲಿ ಶಿವಶಂಕರ್ ಮಹತ್ವದ ಪಾತ್ರ ವಹಿಸಿದ್ದರು ಎಂದು ಆರೋಪವಿದೆ. ಆರೋಪ ಕೇಳಿ ಬಂದ ಬಳಿಕ ಸಿಎಂ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಶಿವಶಂಕರ್ ಅವರನ್ನು ತೆಗೆದು ಹಾಕಲಾಗಿದೆ. ಜೊತೆಗೆ ಸಿಎಂ ಪಿಣರಾಯಿ ವಿಜಯನ್ ಅವರಿಗೂ ಕ್ಲೀನ್ ಚಿಟ್ ಸಿಕ್ಕಿತ್ತು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ತಂಡ(ಎನ್ಐಎ), ಕಸ್ಟಮ್ಸ್ ಅಧಿಕಾರಿಗಳು ಹಾಗೂ ಇನ್ನೊಮ್ಮೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ಪೂರೈಸಿವೆ.
ರಾಜತಾಂತ್ರಿಕ ರಕ್ಷಣೆ ದುರುಪಯೋಗ
ರಾಜತಾಂತ್ರಿಕ ರಕ್ಷಣೆ ಹೊಂದಿರುವ ''ಡಿಪ್ಲೊಮ್ಯಾಟಿಕ್ ಬ್ಯಾಗೇಜ್'' ನಲ್ಲಿದ್ದ 30 ಕೆಜಿ ಚಿನ್ನವನ್ನು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶ ಪಡಿಸಿಕೊಂಡಿದ್ದರು. ಸುಮಾರು 15 ಕೋಟಿ ರೂಪಾಯಿ ಮೌಲ್ಯದ ಈ ಚಿನ್ನ ಅಕ್ರಮ ಸಾಗಣೆಯ ಆರೋಪಿ ರಾಜತಾಂತ್ರಿಕ ಕಚೇರಿಯ ಮಾಜಿ ಸಿಬ್ಬಂದಿ ಸ್ವಪ್ನ ಸುರೇಶ್ ಎಂದು ಆರೋಪಿಸಲಾಗಿದೆ. ಡಾಲರ್ ಸ್ಮಗಲಿಂಗ್ ಪ್ರಕರಣದಲ್ಲೂ ಇದೇ ವಿಧಾನವನ್ನು ಬಳಸಿ ಸ್ಮಗಲಿಂಗ್ ಮಾಡಲು ನೆರವಾದ ಆರೋಪ ಹೊತ್ತುಕೊಂಡಿದ್ದಾರೆ.
ಎನ್ಐಎ ತನಿಖೆ ಮುಂದುವರೆಸಿದೆ
ಯುಎಇ ಕಾನ್ಸುಲೇಟ್ ಅಧಿಕಾರಿಯಾಗಿದ್ದ ಪಿಎಸ್ ಸರೀತ್, ಮಾಜಿ ಉದ್ಯೋಗಿ ಸ್ವಪ್ನ ಸುರೇಶ್, ಸಂದೀಪ್ ನಾಯರ್, ಫೈಜಲ್ ಫರೀದ್ ಅವರ ವಿರುದ್ಧ Unlawful Activities (Prevention) Act ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಎನ್ಐಎ ತನಿಖೆ ಮುಂದುವರೆಸಿದೆ. 2019ರಿಂದ ಇಲ್ಲಿ ತನಕ ಸುಮಾರು 200 ಕೆ.ಜಿಗೂ ಅಧಿಕ ಚಿನ್ನವನ್ನು ಈ ರೀತಿ ಅಕ್ರಮವಾಗಿ ರವಾನೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ವಪ್ನ ಪ್ರಭ ಸುರೇಶ್, ಫಾಜೀಲ್ ಫರೀದ್, ಸಂದೀಪ್ ನಾಯರ್ ಹಾಗೂ ಸರೀತ್ ಕುಮಾರ್ ಅವರ ವಿಚಾರಣೆಗೆ ಅಗತ್ಯವಿದೆ ಎಂದು ಎನ್ಐಎ ಅಧಿಕಾರಿಗಳು ಚಾರ್ಜ್ ಶೀಟ್ ನಲ್ಲಿ ಹೇಳಿದ್ದಾರೆ.
ಸಿಎಂ ಪಿಣರಾಯಿಗೆ ಕ್ಲೀನ್ ಚಿಟ್
ಈ ಚಿನ್ನದ ಸ್ಮಗಲಿಂಗ್ ಪ್ರಕರಣಕ್ಕೂ ಸಿಎಂ ಕಚೇರಿಗೂ ನೇರ ಸಂಬಂಧವಿದೆ ಎಂದು ವಿಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಆರೋಪಿಸಿದ್ದವು. ಸರಣಿ ಪ್ರತಿಭಟನೆ ಮೂಲಕ ಸಿಎಂ ಪಿಣರಾಯಿ ರಾಜೀನಾಮೆಗೆ ಆಗ್ರಹಿಸಲಾಗಿತ್ತು. ಸಿಎಂ ಕಾರ್ಯದರ್ಶಿಯಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಎಂ ಶಿವಶಂಕರ್ ಅವರನ್ನು ಅಮಾನತು ಮಾಡಲಾಯಿತು. ಸಿಪಿಎಂ ನೇತೃತ್ವದ ಎಲ್ ಡಿ ಎಫ್ ಸರ್ಕಾರದ ವಿರುದ್ಧ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅವಿಶ್ವಾಸ ನಿಲುವಳಿ ಮಂಡಿಸಿತ್ತು. ಆದರೆ, ಪಿಣರಾಯಿ ವಿಶ್ವಾಸಮತ ಗಳಿಸಿದ್ದರು. ಇದರ ಜೊತೆಗೆ ಈ ಪ್ರಕರಣದಲ್ಲಿ ಎನ್ಐಎ ಕ್ಲೀನ್ ಚಿಟ್ ಕೊಟ್ಟಿತ್ತು.