ಗರ್ಭಿಣಿಯನ್ನು ದಾಖಲಿಸಿಕೊಳ್ಳಲು ಆಸ್ಪತ್ರೆಗಳ ನಿರಾಕರಣೆ: ಅವಳಿ ಮಕ್ಕಳ ಸಾವು
ತಿರುವನಂತಪುರಂ, ಸೆಪ್ಟೆಂಬರ್ 30: ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದ ಗರ್ಭಿಣಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದ ಕಾರಣ ಅವಳಿ ಮಕ್ಕಳನ್ನು ಕಳೆದುಕೊಂಡಿರುವ ಘಟನೆ ಕೇರಳದಲ್ಲಿ ನಡೆದಿದ್ದು, ಸರ್ಕಾರವು ತನಿಖೆಗೆ ಆದೇಶಿಸಿದೆ.
ಈ ಘಟನೆಯು ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ, ಆಸ್ಪತ್ರೆ ಆಡಳಿತ ಹಾಗೂ ಆರೋಗ್ಯ ಇಲಾಖೆ ವಿರುದ್ಧ ಕುಟುಂಬದವರು ಪ್ರತಿಭಟನೆ ನಡೆಸಿದ್ದಾರೆ.
ತಾಯಿ ಹಾಗೂ ಗರ್ಭಿಣಿ ಮಗಳ ಶವ 4 ದಿನ ರಸ್ತೆಯಲ್ಲೇ ಅನಾಥವಾಗಿ ಬಿದ್ದಿತ್ತು
ಈ ಕುರಿತು ಸಚಿವೆ ಶೈಲಜ ಮಾತನಾಡಿದ್ದು, ಈ ಘಟನೆ ಅತ್ಯಂತ ದುಃಖಕರವಾಗಿದೆ. ಮತ್ತು ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಹಾಗೆಯೇ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಶೀಘ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಆಕೆ 9 ತಿಂಗಳ ತುಂಬು ಗರ್ಭಿಣಿಯಾಗಿದ್ದಳು, ಪರೀಕ್ಷೆಗೆ ಬಂದಿದ್ದಾಗ ಕೊರೊನಾ ಟೆಸ್ಟ್ ಮಾಡಿಸಲಾಗಿತ್ತು, ಪಾಸಿಟಿವ್ ಬಂದಿತ್ತು. ಮಂಜೇರಿಯ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಸೆಪ್ಟೆಂಬರ್ 15 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದರು. ಪರೀಕ್ಷೆಯಲ್ಲಿ ನೆಗೆಟಿವ್ ಬಂದ ಬಳಿಕವೇ ಡಿಸ್ಚಾರ್ಜ್ ಮಾಡಲಾಗಿತ್ತು.
ಸೆಪ್ಟೆಂಬರ್ 18ರಂದು ಹೊಟ್ಟೆನೋವು ಕಾಣಿಸಿಕೊಂಡಿತ್ತು. ಆಕೆ ಆಸ್ಪತ್ರೆಗೆ ಮತ್ತೆ ದಾಖಲಾಗಿದ್ದಳು, ಆದರೆ ಆ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳಲು ಭಯವಾಗುತ್ತಿದೆ, ಕಳೆದ ಬಾರಿ ತುಂಬಾ ಕೆಟ್ಟದಾಗಿ ನಡೆಸಿಕೊಂಡಿದ್ದರು ಎಂದು ಆಕೆ ಹೇಳಿದ್ದಳು.
ನಾಲ್ಕು ಆಸ್ಪತ್ರೆಗಳಲ್ಲಿ ಆಕೆಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು.ಆಕೆಯ ಬಳಿ ಕೊರೊನಾ ನೆಗೆಟಿವ್ ಸರ್ಟಿಫಿಕೇಟ್ ಕೂಡ ಇತ್ತು.
ಇಡೀ ದಿನ ಸುತ್ತಾಡಿ ಬಳಿಕ ಕೋಳಿಕ್ಕೋಡ್ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಯಿತು. ರಕ್ತಸ್ರಾವ ವಿಪರೀತವಾಗಿತ್ತು, ಮಕ್ಕಳನ್ನು ರಕ್ಷಿಸುವಲ್ಲಿ ಆಸ್ಪತ್ರೆ ಯ ವೈದ್ಯರು ವಿಫಲರಾದರು.
ಮಹಿಳೆ ಈಗಲೂ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವಳಿ ಮಕ್ಕಳು ಸತ್ತಿರುವ ಬಗ್ಗೆ ಅವರಿಗೆ ಹೇಳುವುದು ಹೇಗೆ ಎಂದು ಪತಿ ಬೇಸರ ವ್ಯಕ್ತಪಡಿಸಿದ್ದಾರೆ.
Recommended Video