ಶಬರಿಮಲೆ ಯಾತ್ರಿಕರಿಗೆ ಚಂಡಮಾರುತದ ಭೀತಿ
ತಿರುವನಂತಪುರಂ, ಡಿಸೆಂಬರ್ 1: ಕೊರೊನಾ ವೈರಸ್ ಸೋಂಕಿನ ಭೀತಿಯ ನಡುವೆಯೂ ಪರಂಪರೆಯ ಭಕ್ತಿಯ ಚಟುವಟಿಕೆಯನ್ನು ತಡೆಯಲಾಗದೆ ಪರದಾಡುತ್ತಿರುವ ಶಬರಿಮಲೆ ಸ್ವಾಮಿ ಅಯ್ಯಪ್ಪನ ಭಕ್ತರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಆನ್ಲೈನ್ನಲ್ಲಿ ಕಷ್ಟಪಟ್ಟು ಟಿಕೆಟ್ ಕಾಯ್ದಿರಿಸಿ ಶಬರಿಮಲೆ ಯಾತ್ರೆಗೆ ತೆರಳುವ ಭಕ್ತರು ಮಳೆಯ ರುದ್ರ ರೂಪವನ್ನು ಎದುರಿಸಬೇಕಾದ ಅಪಾಯದ ಎಚ್ಚರಿಕೆ ನೀಡಲಾಗಿದೆ.
ಬಂಗಾಳ ಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತದಿಂದ ಮತ್ತೊಂದು ಚಂಡಮಾರುತದ ಸನ್ನಿವೇಶ ಏರ್ಪಡುತ್ತಿದ್ದು, ಡಿ. 2 ಮತ್ತು 3ರಂದು ಕೇರಳದ ಅನೇಕ ಭಾಗಗಳಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಶಬರಿಮಲೆಗೆ ತೆರಳಲು ಸಾಧ್ಯವಾಗದ ಭಕ್ತರಿಗೆ ಪರ್ಯಾಯ ಆಯ್ಕೆ
ಮುಖ್ಯವಾಗಿ ತಿರುವನಂತಪುರಂ, ಕೊಲ್ಲಂ, ಪಟ್ನಂತಿಟ್ಟ ಮತ್ತು ಅಳಪ್ಪುಳ ಜಿಲ್ಲೆಗಳಲ್ಲಿ ಡಿ. 3ರಂದು 20 ಸೆಂ.ಮೀ.ಗೂ ಅಧಿಕ ಮಳೆ ಬೀಳಬಹುದು ಎಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಕೊಟ್ಟಾಯಂ, ಎರ್ನಾಕುಲಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ 6-11 ಸೆಂಮೀ ಮಳೆ ಬೀಳಲಿದ್ದು, ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಹಾಗೆಯೇ ಡಿ. 2ರಂದು ಅಳಪ್ಪುಳ ಮತ್ತು ಎರ್ನಾಕುಲಂ ಸೇರಿದಂತೆ ಮೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇದರಿಂದ ಶಬರಿಮಲೆ ಯಾತ್ರಿಕರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಎರಡು ದಿನ ಧಾರಾಕಾರ ಮಳೆ ಸುರಿಯಲಿದೆ. ಇದರಿಂದ ಯಾತ್ರಿಕರು ಅಯ್ಯಪ್ಪನ ದರ್ಶನಕ್ಕೆ ತೆರಳುವಾಗ ಗಾಳಿ ಮಳೆಯಿಂದ ಸಂಕಷ್ಟಕ್ಕೆ ಎದುರಾಗಬಹುದು. ಸ್ವಾಮಿ ಸನ್ನಿಧಿಗೆ ಹೋಗುವಾಗ ಅಯ್ಯಪ್ಪನ ಭಕ್ತರು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ.
ಶಬರಿಮಲೆಗೆ ಭಕ್ತರ ಸಂಖ್ಯೆ ಹೆಚ್ಚಳ ಮಾಡಲು ತೀರ್ಮಾನ
ಈಗಾಗಲೇ ಶಬರಿಮಲೆ ಸನ್ನಿಧಿಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಪೊಲೀಸರು ಮತ್ತು ದೇವಸ್ಥಾನದ ಕೆಲವು ಸಿಬ್ಬಂದಿಯಲ್ಲಿಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಅಲ್ಲಿ ತೀವ್ರ ನಿಗಾವಹಿಸಲಾಗಿದೆ. ವಾರದ ದಿನಗಳಲ್ಲಿ 1,000 ಮತ್ತು ವಾರಾಂತ್ಯದ ರಜಾ ದಿನಗಳಲ್ಲಿ 2,000 ಭಕ್ತರ ಪ್ರವೇಶಕ್ಕೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಈಗ ಚಂಡಮಾರುತದ ಅಬ್ಬರ ಶುರುವಾದರೆ ದೇವಸ್ಥಾನ ಸಿಬ್ಬಂದಿ, ಪೊಲೀಸರು ಮತ್ತು ಭಕ್ತರು ಪರದಾಡುವ ಸ್ಥಿತಿ ನಿರ್ಮಾಣವಾಗಬಹುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಲಾಗಿದೆ.