ಕೇರಳ ಸಮೀಪಿಸಿದ ಬುರೇವಿ ಚಂಡಮಾರುತ: ರಾಜ್ಯದಲ್ಲಿಯೂ ಮಳೆ
ತಿರುವನಂತಪುರಂ, ಡಿಸೆಂಬರ್ 3: ಬುರೇವಿ ಚಂಡಮಾರುತದ ಬಿರುಗಾಳಿ ತಮಿಳುನಾಡು ಕರಾವಳಿಗೆ ಸಮೀಪಿಸಿದೆ. ಭಾರತೀಯ ಹವಾಮಾನ ಇಲಾಖೆಯು ಗುರುವಾರ ಬೆಳಿಗ್ಗೆ ನೀಡಿರುವ ಮಾಹಿತಿ ಪ್ರಕಾರ ಬುರೇವಿ ಚಂಡಮಾರುತವು ಪೂರ್ವ-ವಾಯವ್ಯ ದಿಕ್ಕಿನ ಕಡೆಗೆ ಚಲಿಸುವ ಸಾಧ್ಯತೆ ಇದ್ದು, ಮುಂದಿನ ಮೂರು ಗಂಟೆಗಳಲ್ಲಿ ಮನ್ನಾರ್ ಕರಾವಳಿ ಸಮೀಪದ ಗಲ್ಫ್ ಆಫ್ ಮನ್ನಾರ್ಗೆ ಪ್ರವೇಶಿಸುವ ನಿರೀಕ್ಷೆಯಿದೆ.
Recommended Video
ಬುರೇವಿ ಚಂಡಮಾರುತದ ಬಿರುಗಾಳಿಯು ಬೆಳಿಗ್ಗೆ 5.30ರ ಸುಮಾರಿಗೆ ಶ್ರೀಲಂಕಾದ ಲ್ಯಾಟ್ ಸಮೀಪ ಕೇಂದ್ರೀಕರಿಸಿತ್ತು. ಇದು ಕೇರಳದ ಮನ್ನಾರ್ನಿಂದ ಸುಮಾರು 40 ಕಿಮೀ ದೂರದಲ್ಲಿದ್ದು, ಪಂಬನ್ನ 120 ಕಿಮೀ ಪೂರ್ವ-ಆಗ್ನೇಯದ 120 ಕಿಮೀ ಮತ್ತು ಕನ್ಯಾಕುಮಾರಿಯ ಪೂರ್ವ-ಈಶಾನ್ಯ ದಿಕ್ಕಿನ 320 ಕಿಮೀ ದೂರದಲ್ಲಿದೆ ಎಂದು ಅದು ತಿಳಿಸಿದೆ.
ಕರ್ನಾಟಕದಲ್ಲಿ ಡಿಸೆಂಬರ್ 3ರಿಂದ ಎರಡು ದಿನ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
ಚಂಡಮಾರುತದ ಗಾಳಿಯ ವೇಗವು ಪ್ರತಿ ಗಂಟೆಗೆ 70-80 ಕಿಮೀಯಷ್ಟಿದ್ದು, 90 ಕಿಮೀ ವೇಗದಲ್ಲಿ ಸುರುಳಿ ಸುತ್ತುತ್ತಿದೆ. ಡಿಸೆಂಬರ್ 3ರ ಮಧ್ಯಾಹ್ನದ ಸುಮಾರಿಗೆ ಅದು ಪಂಬನ್ ಸಮೀಪಿಸಲಿದೆ. ಗುರುವಾರ ರಾತ್ರಿ ಅಥವಾ ಶುಕ್ರವಾರ ಬೆಳಿಗ್ಗೆ ಪಂಬನ್ ಮತ್ತು ಕನ್ಯಾಕುಮಾರಿ ನಡುವೆ ದಕ್ಷಿಣ ತಮಿಳುನಾಡನ್ನು ಕ್ರಮಿಸುವ ಸಾಧ್ಯತೆ ಇದೆ.
ಅಪ್ಪಳಿಸಲಿದೆ ಬುರೆವಿ ಚಂಡಮಾರುತ: ಡಿ.3ರಂದು ಕೇರಳಕ್ಕೆ ರೆಡ್ ಅಲರ್ಟ್
ಸೈಕ್ಲೋನ್ ಭೂಸ್ಪರ್ಶ ಮಾಡುವ ಮೊದಲೇ ಅಗತ್ಯ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ನಡೆಸಲು ವಾಯುಪಡೆ ಮತ್ತು ನೌಕಾಪಡೆಯ ಸಿಬ್ಬಂದಿ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಎಂಟು ತಂಡಗಳನ್ನು ನಿಯೋಜಿಸಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಮುಂದೆ ಓದಿ...
26 ಎನ್ಡಿಆರ್ಎಫ್ ತಂಡಗಳು
ತಮಿಳುನಾಡು ಮತ್ತು ಕೇರಳದಲ್ಲಿ ಒಟ್ಟು 26 ಪರಿಹಾರ ತಂಡಗಳನ್ನು ನಿಯೋಜಿಸಲಾಗಿದ್ದು, ಇನ್ನು ಒಂದು ತಂಡ ಪುದುಚೆರಿಗೆ ಮೀಸಲಿಡಲಾಗಿದೆ ಎಂದು ಎನ್ಡಿಆರ್ಎಫ್ ತಿಳಿಸಿದೆ. ಸುಮಾರು 175 ಕುಟುಂಬಗಳ 700 ಮಂದಿಯನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ಕೇರಳದಲ್ಲಿ ರೆಡ್ ಅಲರ್ಟ್
ಡಿಸೆಂಬರ್ 3ರಂದು ತಿರುವನಂತಪುರಂ, ಕೊಲ್ಲಂ, ಪಟ್ಟಣಂತಿಟ್ಟ ಮತ್ತು ಅಳಪ್ಪುಳ ಜಿಲ್ಲೆಗಳಲ್ಲಿ ಬುರೇವಿ ಚಂಡಮಾರುತದ ಕಾರಣದಿಂದ ಭಾರಿ ಮಳೆಯ ಸಂಭವವಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.
ರಾಜ್ಯದಲ್ಲಿಯೂ ಮಳೆ ಸಂಭವ
ಚಂಡಮಾರುತದ ಪರಿಣಾಮವಾಗಿ ಕರ್ನಾಟಕದ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಹಾಸನ, ಕೊಡಗು, ತುಮಕೂರು, ಮೈಸೂರು, ರಾಮನಗರ ಮತ್ತು ಮಂಡ್ಯದ ಭಾಗಗಳಲ್ಲಿ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ. ಗುರುವಾರ ಬೆಳಿಗ್ಗೆಯಿಂದ ಅನೇಕ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆಯಾಗಿದೆ.
ಸಿಎಂಗಳೊಂದಿಗೆ ಅಮಿತ್ ಶಾ ಮಾತುಕತೆ
ನಿವಾರ್ ಚಂಡಮಾರುತದ ಬೆದರಿಕೆಯಿಂದ ಚೇತರಿಸಿಕೊಳ್ಳುವ ಮುನ್ನವೇ ತಮಿಳುನಾಡಿಗೆ ಬುರೇವಿ ಚಂಡಮಾರುತದ ಬೆದರಿಕೆ ಬಂದಿದೆ. ಈ ಸಂಬಂಧ ಎಲ್ಲ ಅಗತ್ಯ ನೆರವು ನೀಡಲು ಕೇಂದ್ರ ಸರ್ಕಾರ ಸಿದ್ಧ ಇರುವುದಾಗಿ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಇ. ಪಳನಿಸ್ವಾಮಿ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಮಾತನಾಡಿರುವುದಾಗಿ ಅಮಿತ್ ಶಾ ತಿಳಿಸಿದ್ದಾರೆ.
ಮೋದಿ ಸರ್ಕಾರ ಬದ್ಧ
'ತಮಿಳುನಾಡು ಮತ್ತು ಕೇರಳದ ಜನತೆಗೆ ಸಹಾಯ ಮಾಡಲು ಸಾಧ್ಯವಿರುವ ಎಲ್ಲ ಅಗತ್ಯ ನೆರವು ನೀಡಲು ಮೋದಿ ಸರ್ಕಾರ ಬದ್ಧವಾಗಿದೆ. ಎರಡೂ ರಾಜ್ಯಗಳಲ್ಲಿ ಈಗಾಗಲೇ ಕೆಲವು ಎನ್ಡಿಆರ್ಎಫ್ ತಂಡಗಳನ್ನು ನಿಯೋಜನೆಗೊಳಿಸಲಾಗಿದೆ' ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.