ವೇಣುಗೋಪಾಲ್ ಮೇಲೆ ಲೈಂಗಿಕ ಕಿರುಕುಳ ಆರೋಪ, ಕಾಂಗ್ರೆಸ್ಸಿಗೆ ಹಿನ್ನಡೆ
ತಿರುವನಂತಪುರಂ, ಅಕ್ಟೋಬರ್ 22: ಲೋಕಸಭಾ ಚುನಾವಣೆ 2019ಕ್ಕೆ ಮುನ್ನವೇ ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷಗಳ ನಡುವೆ ತಿಕ್ಕಾಟ ಆರಂಭವಾಗಿವೆ. ಹಳೆ ಕೇಸುಗಳು ಮರುಜೀವ ಪಡೆಯುತ್ತಿವೆ.
ಕೇರಳದಲ್ಲಿ ಸರ್ಕಾರವನ್ನೇ ಅಲ್ಲಾಡಿಸಿದ ಬಹುಕೋಟಿ ಸೌರಶಕ್ತಿ ಫಲಕ ಯೋಜನೆ ಲಂಚ ಪ್ರಕರಣ ಈಗ ಮತ್ತೆ ಸದ್ದು ಮಾಡುತ್ತಿದೆ. ಈ ಪ್ರಕರಣದ ಆರೋಪಿಯಾಗಿರುವ ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಜತೆಗೆ ಸಂಸದ, ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಅವರ ವಿರುದ್ಧವೂ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದ್ದು, ಎಫ್ಐಆರ್ ಹಾಕಲಾಗಿದೆ.
ಕೇರಳದ ಮಾಜಿ ಸಿಎಂ ಚಾಂಡಿ ವಿರುದ್ಧ ರೇಪ್ ಕೇಸ್, ಎಫ್ಐಆರ್
ಸೋಲಾರ್ ಹಗರಣದ ಪ್ರಮುಖ ಆರೋಪಿಯಾಗಿರುವ ಸರಿತಾ ನಾಯರ್ ಅವರು ಅಂದಿನ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹಾಗೂ ಅವರ ಕ್ಯಾಬಿನೆಟ್ ಸದಸ್ಯರಿಗೆ 1.90 ಕೋಟಿ ರು ಲಂಚ ನೀಡಿರುವುದಾಗಿ ನ್ಯಾಯಾಂಗ ಸಮಿತಿ ಮುಂದೆ ಹೇಳಿಕೆ ನೀಡಿದ್ದರು. ಲಂಚದ ಬದಲಿಗೆ ಸೆಕ್ಸ್ ಆಫರ್ ನೀಡಿದ್ದರು ಎಂದು ಚಾಂಡಿ, ವೇಣುಗೋಪಾಲ್ ಸೇರಿದಂತೆ ಹಲವರ ವಿರುದ್ಧ ಆರೋಪ ಮಾಡಲಾಗಿದೆ. ಈ ಬಗ್ಗೆ ಕೇರಳದ ಡಿಜಿಪಿ ನೀಡಿರುವ ಪ್ರತಿಕ್ರಿಯೆ ಏನು? ಯಾರು ತನಿಖೆ ನಡೆಸುತ್ತಿದ್ದಾರೆ? ಕೆಸಿ ವೇಣುಗೋಪಾಲ್ ತಲೆದಂಡ ಸಾಧ್ಯಾಸಾಧ್ಯತೆ ಬಗ್ಗೆ ವಿವರ ಮುಂದಿದೆ...
ಸೋಲಾರ್ ಸರಿತಾ ನೀಡಿರುವ ಹೇಳಿಕೆ
ಸೋಲಾರ್ ಹಗರಣದ ಆರೋಪಿ ಸರಿತಾ ನಾಯರ್ ಅವರನ್ನು 2012ರಲ್ಲಿ ಸಿಎಂ ಅಧಿಕೃತ ನಿವಾಸ ಕ್ಲಿಫ್ ಹೌಸ್ ನಲ್ಲಿ ಉಮ್ಮನ್ ಚಾಂಡಿ ಅತ್ಯಾಚಾರ ಮಾಡಿದ್ದಾರೆ. ಕೆಸಿ ವೇಣುಗೋಪಾಲ್ ಅವರು ರೋಸ್ ಹೌಸ್(ಆಗಿನ ಸಚಿವ ಎಪಿ ಅನಿಲ್ ಕುಮಾರ್ ಅವರ ನಿವಾಸ) ನಲ್ಲಿ ಸರಿತಾ ಅವರ ಮೇಲೆ ಬಲಾತ್ಕಾರ ನಡೆದಿದೆ ಎಂದು ಎಂಬ ದೂರಿನ ಅನ್ವಯ ಶನಿವಾರದಂದು ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಬಳಿ ಎಫ್ ಐಆರ್ ಪ್ರತಿ ಸಲ್ಲಿಸಲಾಗಿದೆ
ಕರ್ನಾಟಕದ ಮೇಲೆ ಭಾರಿ ಪರಿಣಾಮ
ರಾಜ್ಯದಲ್ಲಿ 3 ಲೋಕಸಭೆ ಹಾಗೂ 2 ವಿಧಾನಸಭೆ ಉಪಚುನಾವಣೆ ಸನಿಹದಲ್ಲಿದೆ. ಬಿಜೆಪಿ ವಿರುದ್ಧ ಮೈತ್ರಿ ಸಾಧಿಸಿರುವ ಕಾಂಗ್ರೆಸ್, ಜೆಡಿಎಸ್ ಟಿಕೆಟ್ ಹಂಚಿಕೆಯಲ್ಲೂ ಸಮನ್ವಯ ಸಾಧಿಸಿಕೊಂಡು ಹೋರಾಟಕ್ಕಿಳಿದಿದೆ. ಆದರೆ, ಈ ಸಂದರ್ಭದಲ್ಲಿ ರಾಜ್ಯ ಉಸ್ತವಾರಿ ಕೆ.ಸಿ.ವೇಣುಗೋಪಾಲ್ ಅವರ ಮೇಲೆ ಅತ್ಯಾಚಾರ ಆರೋಪ ಎದುರಾಗಿರುವುದು ಕೆಪಿಸಿಸಿಗೆ ನುಂಗಲಾರದ ತುತ್ತಾಗಿದೆ. ಬಿಜೆಪಿ ಈಗಾಗಲೇ ವೇಣುಗೋಪಾಲ್ ಅವರ ವಿರುದ್ಧ ಅಭಿಯಾನ ಆರಂಭಿಸಿದೆ.
ಹಗರಣದ ಗಣಿಯಲ್ಲಿ 'ಸೋಲಾರ್' ಸುಂದರಿಯರು
ಕರ್ನಾಟಕ ಬಿಜೆಪಿ ವಕ್ತಾರರ ಪ್ರತಿಕ್ರಿಯೆ
ಲೈಂಗಿಕ ಕಿರುಕುಳ, ರೇಪ್ ಕೇಸಿನಲ್ಲಿ ಆರೋಪ ಹೊತ್ತಿರುವ ಕರ್ನಾಟಕ ರಾಜ್ಯ ಉಸ್ತುವಾರಿ, ಅಲಪ್ಪುಳ ಸಂಸದ ಕೆಸಿ ವೇಣುಗೋಪಾಲ್ ಅವರನ್ನು ಕೂಡಲೇ ಅವರ ಹುದ್ದೆಯಿಂದ ಕೆಳಗಿಳಿಸಬೇಕು ಎಂದು ಬಿಜೆಪಿ ಕರ್ನಾಟಕ ಆಗ್ರಹಿಸುತ್ತಿದೆ. ಈ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಏಕೆ ಇನ್ನೂ ಕ್ರಮ ಕೈಗೊಂಡಿಲ್ಲ. ಮಹಿಳಾ ಸುರಕ್ಷತೆ ಬಗ್ಗೆ ಪಾಠ ಮಾಡುತ್ತಾರೆ ಆದರೆ, ವೇಣುಗೋಪಾಲ್ ರಂಥವರನ್ನು ಬೆಂಬಲಿಸುತ್ತಿದ್ದಾರೆ. ವೇಣುಗೋಪಾಲ್ ಅವರು ಎಲ್ಲಾ ಹುದ್ದೆಗಳಿಂದ ಕೆಳಗಿಳಿದು ತನಿಖೆ ಮುಗಿದು ತೀರ್ಪು ಬರುವ ತನಕ ಕಾನೂನಿಗೆ ತಲೆಬಾಗುವುದು ಒಳ್ಳೆಯದು ಎಂದು ಬಿಜೆಪಿ ಕರ್ನಾಟಕದ ವಕ್ತಾರ ಎಸ್ ಪ್ರಕಾಶ್ ಹೇಳಿದ್ದಾರೆ.
ಸಮೀಕ್ಷೆಗಳ ಸಮೀಕ್ಷೆ: ಮಧ್ಯಪ್ರದೇಶದಲ್ಲಿ ಮೋದಿ ಬಲದಿಂದ ಮತ್ತೆ ಅಧಿಕಾರ
ಕೇರಳ ಡಿಜಿಪಿ ಲೋಕನಾಥ್ಬೆಹರಾ ಪ್ರತಿಕ್ರಿಯೆ
ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿಜಿಪಿ ಲೋಕನಾಥ್ಬೆಹರಾ, ಕೇರಳದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಕೆಸಿ ವೇಣುಗೋಪಾಲ್ ವಿರುದ್ಧ ಸರಿತಾ ನಾಯರ್ ನೀಡಿರುವ ದೂರಿನ ಆಧಾರದ ಮೇಲೆ ಇಬ್ಬರ ಮೇಲೂ ಪ್ರತ್ಯೇಕ ಪ್ರಕರಣ ದಾಖಲಾಗಿದೆ ಎಂದರು.
ಈ ಪ್ರಕರಣದ ಕುರಿತು ಎಸ್ಪಿ ಅಬ್ದುಲ್ಕರಿಂ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ(ಎಸ್ ಐಟಿ) ರಚನೆ ಮಾಡಲಾಗಿದೆ. ಈ ಹಿಂದೆ ನ್ಯಾಯಾಂಗ ತನಿಖೆ ಆಯೋಗದ ಮುಂದೆ ಸಂತ್ರಸ್ತೆ ನೀಡಿದ ಹೇಳಿಕೆಯನ್ನು ಪರಿಶೀಲಿಸಲಾಗುವುದು ಎಂದಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್
'ಇದು ರಾಜಕೀಯ ಪ್ರೇರಿತವಾಗಿರುವಾಗಿದೆ. ಈ ಹಿಂದೆ ವಿಧಾನಸಭಾ ಚುನಾವಣೆ ವೇಳೆಯೂ ಈ ಆರೋಪ ಕೇಳಿಬಂದಿತ್ತು. ಇದು ರಾಜಕೀಯ ದುರುದ್ದೇಶದಿಂದ ದಾಖಲಾಗಿರುವ ದೂರು. ಈ ರೀತಿ ಕಾಂಗ್ರೆಸ್ ನಾಯಕರ ವಿರುದ್ಧದ ಕ್ರಮದಿಂದ ಎಲ್ ಡಿ ಎಫ್ ಗೆ ಏನು ಲಾಭವಾಗುವಿಲ್ಲ. ಈ ಬಗ್ಗೆ ಹೈಕಮಾಂಡ್ ಸೂಕ್ತ ಕ್ರಮ ಕೈಗೊಳ್ಳಲಿದೆ. ನಾನು ಹೆಚ್ಚು ಪ್ರತಿಕ್ರಿಯೆ ನೀಡಲಾರೆ ಎಂದಿದ್ದಾರೆ.