ಶಬರಿಮಲೆ ವಿವಾದ: ನಾವು ಬದಲಾಗುವುದಿಲ್ಲ ಎಂದ ಸಿಪಿಐ
ತಿರುವನಂತಪುರಂ, ಮಾರ್ಚ್ 23: ಶಬರಿಮಲೆ ದೇವಸ್ಥಾನಕ್ಕೆ ಎಲ್ಲ ವಯಸ್ಸಿನ ಮಹಿಳೆಯ ಪ್ರವೇಶದ ವಿಚಾರದಲ್ಲಿ ತನ್ನ ನಿಲುವಿನಲ್ಲಿ ಯಾವ ಬದಲಾವಣೆಯೂ ಇಲ್ಲ ಎಂದು ಕೇರಳದ ಆಡಳಿತಾರೂಢ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ ಪ್ರಮುಖ ಪಾಲುದಾರ ಸಿಪಿಐ ತಿಳಿಸಿದೆ. ಚುನಾವಣೆ ಸಂದರ್ಭದಲ್ಲಿ ಶಬರಿಮಲೆ ವಿವಾದ ಮತ್ತೆ ಚರ್ಚೆಗೆ ಬಂದಿರುವ ಹಿನ್ನೆಲೆಯಲ್ಲಿ ಅದು ಈ ಸ್ಪಷ್ಟನೆ ನೀಡಿದೆ.
ಸುಪ್ರೀಂಕೋರ್ಟ್ಗೆ ಈ ಮುಂಚೆ ಸಲ್ಲಿಸಿದ್ದ ಅಫಿಡವಿಟ್ನಲ್ಲಿ ತಿಳಿಸಿದ್ದಂತೆಯೇ, ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಕೇರಳದ ಎಡ ಸರ್ಕಾರವು 'ಅದೇ ನಿಲುವು' ಹೊಂದಿದೆ ಎಂದು ಸಿಪಿಐ ತಿಳಿಸಿದೆ. ಇದು ಬಿಜೆಪಿ ಮತ್ತು ಕಾಂಗ್ರೆಸ್ಅನ್ನು ಕೆರಳಿಸಿದೆ.
ಕಾಂಗ್ರೆಸ್ - ಕಮ್ಯೂನಿಸ್ಟ್ ಮಧ್ಯೆ ಕೇರಳದಲ್ಲಿ 'ಶಬರಿಮಲೆ' ಪಾಲಿಟಿಕ್ಸ್: ಎಲ್ಲಾ ಬಿಜೆಪಿಗಾಗಿ!
ಇನ್ನೊಂದೆಡೆ, ಚುನಾವಣೆ ಸಮಯದಲ್ಲಿ ಶಬರಿಮಲೆ ವಿವಾದವನ್ನು ಚರ್ಚೆಯ ವಿಚಾರವನ್ನಾಗಿಸಲು ಉದ್ದೇಶಪೂರ್ವಕ ಪ್ರಯತ್ನಗಳು ನಡೆಯುತ್ತಿವೆ ಎಂದು ಸಿಪಿಐ (ಎಂ) ಆರೋಪಿಸಿದೆ. 'ಈ ವಿಚಾರವನ್ನು ಈಗ ಪ್ರಸ್ತಾಪಿಸುವ ಅಗತ್ಯವೇ ಇಲ್ಲ. ಅಂತಿಮ ತೀರ್ಪಿನ ಬಳಿಕ ಉಳಿದ ವಿಚಾರಗಳ ಬಗ್ಗೆ ಆಲೋಚಿಸೋಣ. ಶಬರಿಮಲೆ ದೇವಸ್ಥಾನದ ಸೌಕರ್ಯ ಸುಧಾರಣೆಗೆ 1,487 ಕೋಟಿ ರೂ ಅನುದಾನವನ್ನು ಸರ್ಕಾರ ನೀಡಿದೆ. ಈಗ ಚುನಾವಣೆ ಸಂದರ್ಭದಲ್ಲಿ ಪುನಃ ವಿವಾದ ಕೆರಳಿಸುವ ಪ್ರಯತ್ನ ನಡೆಯುತ್ತಿದೆ' ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ನಿಲುವಿನಲ್ಲಿ ಬದಲಾವಣೆ ಇಲ್ಲ
'ಈ ವಿಚಾರದ ಬಗ್ಗೆ ಸರ್ಕಾರ ಈಗಾಗಲೇ ತನ್ನ ಮೂಲ ಅರ್ಜಿಯಲ್ಲಿ ನಿಲುವನ್ನು ವ್ಯಕ್ತಪಡಿಸಿದೆ. ಅದು ಮುಂದುವರಿಯಲಿದೆ. ದೇವಾಲಯಕ್ಕೆ ಎಲ್ಲ ವಯಸ್ಸಿನ ಮಹಿಳೆಯರ ಮುಕ್ತ ಪ್ರವೇಶಕ್ಕೆ ಸಂಬಂಧಿಸಿದಂತೆ ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ಹಿಂದೂ ಧರ್ಮದ ಪರಿಣತರು ಮತ್ತು ವಿದ್ವಾಂಸರ ಸಮಿತಿಗೆ ಬಿಟ್ಟಿದ್ದು, ಇದರಲ್ಲಿ ಸರ್ಕಾರ ಹಸ್ತಕ್ಷೇಪ ಇರುವುದಿಲ್ಲ ಎಂದು ಅಫಿಡವಿಟ್ನಲ್ಲಿ ಸರ್ಕಾರ ಸ್ಪಷ್ಟವಾಗಿ ಹೇಳಿದೆ' ಎಂಬುದಾಗಿ ಸಿಪಿಐ ರಾಜ್ಯ ಕಾರ್ಯದರ್ಶಿ ಕಣಂ ರಾಜೇಂದ್ರನ್ ತಿಳಿಸಿದ್ದಾರೆ.
ಸರ್ಕಾರದ ನಿರ್ಧಾರವಲ್ಲ
'ರಾಜ್ಯ ಸರ್ಕಾರ ಮತ್ತು ಟ್ರ್ಯಾವಂಕೋರ್ ದೇವಸ್ವಂ ಮಂಡಳಿ ಈ ವಿಚಾರದ ಕುರಿತು ತಮ್ಮ ಮೂಲ ಅರ್ಜಿಯಲ್ಲಿ ನಿಲುವನ್ನು ವ್ಯಕ್ತಪಡಿಸಿವೆ. ಅದು ಮುಂದುವರಿಯಲಿದೆ. ದೇವಸ್ಥಾನದ ಆಚರಣೆಗಳು ಮತ್ತು ಸಂಪ್ರದಾಯಗಳ ಬಗ್ಗೆ ಅಂತಿಮ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳುವುದಿಲ್ಲ' ಎಂದಿದ್ದಾರೆ.
"ಪುರುಷರಿಗಿಂತ ಮಹಿಳೆಯರೇ ಗಟ್ಟಿ; ಆದರೆ ಇದು ಅವರಿಗೆ ಅರ್ಥವಾಗಿಲ್ಲ"
ಮತ್ತೆ ಪ್ರತಿಭಟನೆ ಶುರು
'ಸಿಪಿಐ (ಎಂ) ಶಬರಿಮಲೆಯನ್ನು ನಾಶಪಡಿಸುವ ತನ್ನ ನಡೆಯನ್ನು ಮುಂದುವರಿಸಿದೆ. ಇದರ ವಿರುದ್ಧ ಪ್ರತಿಭಟನೆ ಮತ್ತೆ ಶುರುವಾಗಲಿದೆ. ಭಕ್ತರ ಪರವಾಗಿ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಲು ನಾವು ಸಿದ್ಧರಿದ್ದೇವೆ. ರಾಜ್ಯದಲ್ಲಿ ಬಿಜೆಪಿ-ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ ಶಬರಿಮಲೆಯನ್ನು ರಾಜಕಾರಣಿಗಳ ಹಿಡಿತದಿಂದ ಬಿಡಿಸುತ್ತೇವೆ' ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಹೇಳಿದ್ದಾರೆ.
ಕಾಂಗ್ರೆಸ್ ಟೀಕೆ
'ತಮ್ಮ ಹಾಲಿ ಅಫಿಡವಿಟ್ನಲ್ಲಿ ಎಲ್ಡಿಎಫ್ ಸರ್ಕಾರ ಯಾವ ಬದಲಾವಣೆಯನ್ನೂ ಮಾಡುವುದಿಲ್ಲ ಎಂದು ಕಣಂ ರಾಜೇಂದ್ರನ್ ಹೇಳಿದ್ದಾರೆ. ಇದರ ಅರ್ಥ ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಲು ಈಗಲೂ ಸರ್ಕಾರ ಅಂಟಿಕೊಂಡಿದೆ. ಅವರಿಗೆ ಭಕ್ತರ ಮತ ಬೇಕು ಆದರೆ ತಮ್ಮ ನಿಲುವು ಬದಲಿಸಲು ಅವರು ಸಿದ್ಧರಿಲ್ಲ. ಶಬರಿಮಲೆ ಕುರಿತಾದ ಮಾರ್ಕ್ಸಿಸ್ಟ್ ಸರ್ಕಾರದ ಅಪ್ರಾಮಾಣಿಕ ನಡೆ ಈ ಹೇಳಿಕೆಯಿಂದ ಬಹಿರಂಗವಾಗಿದೆ' ಎಂದು ಕಾಂಗ್ರೆಸ್ ನಾಯಕ ಕೆ. ಮುರಳೀಧರನ್ ಆರೋಪಿಸಿದ್ದಾರೆ.