ಕೊರೊನಾವೈರಸ್ ಭೀತಿ ನಡುವೆ ಈ ಮೆಡಿಕಲ್ ಶಾಪ್ಗೆ ಹ್ಯಾಟ್ಸಾಫ್!
ತಿರುವನಂತಪುರಂ, ಮಾರ್ಚ್ 15: ಭಾರತದಲ್ಲಿ ಕೊರೊನಾವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸರ್ಕಾರ, ಇಲಾಖೆ ಶ್ರಮವಹಿಸುತ್ತಿವೆ. ಈ ನಡುವೆ ಮಾಸ್ಕ್, ಸ್ಯಾನಿಟೈಸರ್ ಬೇಡಿಕೆ ಹೆಚ್ಚಾಗುತ್ತಿದ್ದು, ಹಲವೆಡೆ ಅಧಿಕ ಬೆಲೆಗೆ ಮಾರಾಟವಾಗುತ್ತಿರುವ ಸುದ್ದಿ ಇದೆ. ಆದರೆ, ಕೇರಳದ ಕೊಚ್ಚಿಯ ಮೆಡಿಕಲ್ ಶಾಪ್ ಎಲ್ಲರ ಗಮನ ಸೆಳೆದಿದೆ.
ಕೊರೊನಾ ಭೀತಿಯಲ್ಲಿರುವ ಜನರಿಗೆ ತಮಗೆ ಅರಿವು ಮೂಡಿದಂತೆ ರಕ್ಷಣೆ ಹೊಂದಲು ಮಾಸ್ಕ್ ಗಳನ್ನು ಬಳಸುತ್ತಿದ್ದಾರೆ. ಆದರೆ, ಮಾರಾಟಗಾರರಲ್ಲಿ ಅನೇಕರು ಕೃತಕ ಅಭಾವ ಸೃಷ್ಟಿಸಿ, ಅಧಿಕ ಬೆಲೆಗೆ ಮಾಸ್ಕ್ ಮಾರುತ್ತಿರುವುದು ಕಂಡು ಬಂದಿದೆ. ಬೆಂಗಳೂರಿನಲ್ಲಿ ಐದಾರು ಮೆಡಿಕಲ್ ಶಾಪ್ ಗಳಲ್ಲಿ ಅಧಿಕ ಬೆಲೆಗೆ ಮಾಸ್ಕ್, ಸ್ಯಾನಿಟೈಸರ್, ಥರ್ಮೋಮೀಟರ್ ಮಾರುವುದು ಕಂಡು ಬಂದಿದ್ದು, ಪೊಲೀಸರು ದಾಳಿ ನಡೆಸಿ ಕ್ರಮಕೈಗೊಂಡಿದ್ದಾರೆ.
Infographics:ಕೊರೊನಾ ಎಂದರೆ ಭಯನಾ? ಈ ಸುದ್ದಿ ಓದಿ
ನಿಗದಿತ ಬೆಲೆಗಿಂತ ಕಡಿಮೆ ಮೊತ್ತಕ್ಕೆ ಮಾಸ್ಕ್ ಗಳನ್ನು ಮಾರಾಟ ಮಾಡುವ ಮೂಲಕ ಕೇರಳದ ಕೊಚ್ಚಿಯಲ್ಲಿರುವ ಕೊಚ್ಚಿನ್ ಸರ್ಜಿಕಲ್ ಎಂಬ ಔಷಧ ಅಂಗಡಿ ಇದೆಲ್ಲದರ ನಡುವೆ ಪ್ರತ್ಯೇಕವಾಗಿ ಎಲ್ಲರ ಗಮನ ಸೆಳೆದಿದೆ.
ಕೇವಲ 2 ರುಗೆ ಸಿಗಲಿದೆ ಮಾಸ್ಕ್
ಕೊರೊನಾವೈರಸ್ ಭೀತಿಯಲ್ಲಿರುವವರಿಗೆ ಅಗತ್ಯವಿರುವ ಮಾಸ್ಕ್ ಗಳನ್ನು ಪೂರೈಸಲು ಮುಂದಾಗಿರುವ ಕೊಚ್ಚಿನ್ ಸರ್ಜಿಕಲ್ಸ್, ಆಸ್ಪತ್ರೆ, ವೈದ್ಯಕೀಯ ತಂಡಗಳಿಗೆ ಕೇವಲ 2 ರು ಗಳಿಗೆ ಮಾಸ್ಕ್ ಒದಗಿಸುತ್ತಿದೆ. ಸುಮಾರು 5000 ಮಾಸ್ಕ್ ಗಳನ್ನು ಈ ರೀತಿ ಮಾರಾಟ ಮಾಡಿರುವುದಾಗಿ ಶಾಪ್ ಮಾಲೀಕರು ಹೇಳಿದ್ದಾರೆ.
ಸರ್ಜಿಕಲ್ ಶಾಪ್ ಮಾಲೀಕ ನದೀಮ್
ಕೊಚ್ಚಿನ್ ಸರ್ಜಿಕಲ್ ಶಾಪ್ ಮಾಲೀಕರ ಪೈಕಿ ಒಬ್ಬರಾದ ನದೀಮ್ ಅವರು ಎಎನ್ಐ ಜೊತೆ ಮಾತನಾಡಿ, ಮಾಸ್ಕ್ ಅಗತ್ಯ ಹೆಚ್ಚಿರುವುದರಿಂದ ಯಾರಿಗೆ ತುರ್ತು ಅಗತ್ಯವಿದೆಯೋ ಅವರಿಗೆ ಒದಗಿಸಲು ಮುಂದಾದೆವು. ಆಸ್ಪತ್ರೆ ಸಿಬ್ಬಂದಿ, ವಿದ್ಯಾರ್ಥಿಗಳಿಂದ ಹೆಚ್ಚಿನ ಬೇಡಿಕೆ ಬಂದಿದೆ ಎಂದಿದ್ದಾರೆ.
ಕೊರೊನಾಭೀತಿ ಇರುವವರು ಯಾವ ಆಹಾರ ಸೇವಿಸಬೇಕು?
ಮತ್ತೊಬ್ಬ ಮಾಲೀಕ ತಸ್ಲೀಮ್
ಕೊಚ್ಚಿನ್ ಸರ್ಜಿಕಲ್ ಶಾಪ್ ಸಹ ಮಾಲೀಕ ತಸ್ಲೀಮ್ ಮಾತನಾಡಿ, ಕಳೆದ 8 ವರ್ಷಗಳಿಂದ ನಾವು 2 ರು ದರದಲ್ಲೇ ಮಾರಾಟ ಮಾಡುತ್ತಿದ್ದೇವೆ. ನಾವು ಎಂದೂ ಪ್ರಚಾರ ಬಯಸಿಲ್ಲ. 8 ರಿಂದ 10 ರು ನಂತೆ ಖರೀದಿಸಿ, 2 ರು ನಮ್ತೆ ಮಾರಾಟ ಮಾಡುತ್ತಿದ್ದೇವೆ. ಇದೇ ಬೇರೆ ಮೆಡಿಕಲ್ ಶಾಪ್ ಗಳಲ್ಲಿ 25 ರು ನಂತೆ ಮಾರಾಟವಾಗುತ್ತಿದೆ. ಕಡಿಮೆ ಬೆಲೆ ಎಂದು ಗುಣಮಟ್ಟದಲ್ಲಿ ಎಂದೂ ರಾಜಿಯಾಗಿಲ್ಲ ಎಂದಿದ್ದಾರೆ.
ತಿರುವನಂತಪುರಂನಲ್ಲಿ 3 ಪಾಸಿಟಿವ್
ಭಾರತದಲ್ಲಿ ಮೊದಲ ಬಾರಿಗೆ ಕೊರೊನಾವೈರಸ್ ಕಾಣಿಸಿಕೊಂಡಿದ್ದು, ರೋಗಿಗಳಿಗೆ ಗುಣಮುಖವಾಗಿದ್ದು ಕೂಡಾ ಕೇರಳದಲ್ಲೇ ಎಂಬುದನ್ನು ಮರೆಯುವಂತಿಲ್ಲ. ಸದ್ಯ ತಿರುವನಂತಪುರಂನಲ್ಲಿ ಮಾರ್ಚ್ 15ರ ಎಣಿಕೆಯಂತೆ 3 ಹೊಸ ಪ್ರಕರಣಗಳು ದಾಖಲಾಗಿವೆ. ರೆಸಾರ್ಟ್, ಮಾಲ್, ಜಿಮ್, ಬೀಚುಗಳಲ್ಲಿ ಜನಸಂದಣಿ ನಿರ್ಬಂಧಿಸಲಾಗಿದೆ. ಕರ್ನಾಟಕದಂತೆ ಶಾಲೆ, ಕಾಲೇಜು, ಸಾರ್ವಜನಿಕ ಸಭೆ, ಸಮಾರಂಭಗಳಿಗೆ ನಿರ್ಬಂಧ ಹಾಕಲಾಗಿದೆ.