Video: ಗುಣಮುಖನಾದ ಕೊರೊನಾ ರೋಗಿಗೆ, ರೋಗಿಗಳಿಂದಲೇ ಬೀಳ್ಕೊಡುಗೆ!
ಕಾಸರಗೋಡು, ಏಪ್ರಿಲ್ 6: ಕೊರೊನಾ ಹಾವಳಿಯಿಂದ ಜಗತ್ತಿನ ಜನ ಅಕ್ಷರಶಃ ತತ್ತರಿಸಿ ಹೋಗುತ್ತಿದ್ದಾರೆ. ಎಲ್ಲ ದೇಶದಲ್ಲಿ ಸಾವಿರಾರು, ಲಕ್ಷ ಸಂಖ್ಯೆಯಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ಮಲಗಿದ್ದಾರೆ.
ಕೊರೊನಾದ ಅನೇಕ ಆಘಾತಕಾರಿ ಸುದ್ದಿಗಳ ನಡುವೆಯೇ ಕೆಲವು ಮನಕಲುಕುವ ಸುದ್ದಿಗಳೂ ಕೂಡ ಅಲ್ಲೊಂದು ಇಲ್ಲೊಂದು ಕೇಳಿ ಬರುತ್ತಿವೆ. ಇಂತಹದೇ ಒಂದು ಸಂತಸದ ಸುದ್ದಿ ಕೇರಳದಿಂದ ಬಂದಿದೆ. ಅದು ನಮ್ಮ ಪಕ್ಕದ ಕಾಸರಗೋಡಿನಲ್ಲಿ.
ಬೇಕರಿ ತೆರೆಯಲು ಕೇಂದ್ರದ ಅನುಮತಿ; ತೆರುವಾಗುತ್ತಾ ಲಾಕ್ಡೌನ್?
ವಿದೇಶಕ್ಕೆ ಹೋಗಿ ಬಂದು ಕೊರೊನಾ ಅಂಟಿಸಿಕೊಂಡಿದ್ದ ಕೇರಳದ ಕಾಸರಗೋಡಿನ ಯುವಕನೊಬ್ಬ ಕಳೆದ 20 ದಿನಗಳಿಂದ ಆಸ್ಪತ್ರೆಯಲ್ಲಿ ಇದ್ದು ಚಿಕಿತ್ಸೆ ಪಡೆದುಕೊಂಡು ಈಗ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾನೆ. ಬಿಡುಗಡೆಯಾಗಿ ಆಸ್ಪತ್ರೆಯಿಂದ ಹೊರಡುವಾಗ ಇತರ ಕೊರೊನಾ ರೋಗಿಗಳು ಹಾಗೂ ವೈದ್ಯರಿಂದ ಆತನಿಗೆ ನಿರೀಕ್ಷಿಸಲಾರದ ಬೀಳ್ಕೊಡುಗೆ ಸಿಕ್ಕಿದೆ.
ಹೃದಯಸ್ಪರ್ಶಿ ಬಿಳ್ಕೊಡುಗೆ
ಕಾಸರಗೋಡು ಜಿಲ್ಲೆಯ 35 ವರ್ಷದ ವ್ಯಕ್ತಿ ದುಬೈನಿಂದ ಮರಳಿದ್ದಾಗ ಕೊರೊನಾ ಸೋಂಕು ತಗುಲಿದ್ದು ದೃಢಪಟ್ಟಿತ್ತು. ಆತನನ್ನು ಕಾಸರಗೋಡಿನಲ್ಲಿ ತೆರೆಯಲಾಗಿದ್ದ ವಿಶೇಷ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕಳೆದ 20 ದಿನಗಳಿಂದ ಚಿಕಿತ್ಸೆ ಪಡೆದುಕೊಂಡು ಈಗ ಆ ವ್ಯಕ್ತಿ ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿ ಹೊರ ಬಂದಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾಗಿ ಬರುವಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇತರ 32 ಕೊರೊನಾ ಸೋಂಕಿತರು ಆತನಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದ್ದಾರೆ. ವೈದ್ಯರು ಹಾಗೂ ರೋಗಿಗಳು ವಾರ್ಡ್ನಿಂದ ಹೊರ ಬಂದು ಚಪ್ಪಾಳೆ ತಟ್ಟಿ ಬಿಳ್ಕೊಟ್ಟಿದ್ದಾರೆ. ಈ ಕುರಿತ ವಿಡಿಯೋ ವೈರಲ್ ಆಗಿದೆ.
|
ವಿಡಿಯೋ ಹಂಚಿಕೊಂಡ ಸಚಿವ
ಈ ಅಪರೂಪದ ವಿಡಿಯೋವನ್ನು ಕೇರಳದ ಸಹಕಾರ ಸಚಿವ ಕಡಕಂಪಳ್ಳಿ ಸುರೇಂದ್ರನ್ ಅವರು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಹಲವರು ಇದೊಂದು ಅಪರೂಪದ ಕ್ಷಣ ಎಂದು ಕಮೆಂಟ್ ಮಾಡಿದ್ದಾರೆ. ಸಚಿವ ಸುರೇಂದ್ರನ್ ಅವರು ಪ್ರತಿಯೊಂದು ಕೊರೊನಾ ರೋಗಿಯ ಗುಣಮುಖ ಒಂದು ವಿಜಯವೇ ಸರಿ ಎಂದು ಹೇಳಿದ್ದಾರೆ.
ಕೇರಳದಲ್ಲಿ ಕೊರೊನಾ ವೈರಸ್
ಕೇರಳದಲ್ಲಿ ಕೊರೊನಾ ವೈರಸ್ ಸೋಂಕಿರ ಸಂಖ್ಯೆ 300 ಗಡಿ ದಾಟಿದೆ. ಸೋಮವಾರದ ಅಂತ್ಯಕ್ಕೆ 314 ಜನರಿಗೆ ಸೋಂಕು ತಗುಲಿರಿವುದು ಮೃತಪಟ್ಟಿದೆ. ಇದುವರೆಗೆ ಕೇರಳದಲ್ಲಿ ಕೊರೊನಾಕ್ಕೆ ಒಬ್ಬ ಮಾತ್ರ ಬಲಿಯಾಗಿದ್ದಾನೆ. ಸೋಮವಾರ ಎಂಟು ಹೊಸ ಪ್ರಕರಣಗಳು ವರದಿಯಾಗಿವೆ. ಕೇರಳ ಸರ್ಕಾರ ಸೋಂಕು ಹರಡುವುದನ್ನು ತಡೆಯಲು ವ್ಯಾಪಕ ಪ್ರಯತ್ನ ನಡೆಸಿದೆ.
ಕೊರೊನಾ ಹಾವಳಿ ನಿಲ್ಲುವಂತೆ ಕಾಣುತ್ತಿಲ್ಲ
ಭಾರತದಲ್ಲೂ ಕೊರೊನಾ ಹಾವಳಿ ನಿಲ್ಲುವಂತೆ ಕಾಣುತ್ತಿಲ್ಲ. ದೇಶದಲ್ಲಿ ಸೋಂಕಿತರ ಸಂಖ್ಯೆ 4 ಸಾವಿರ ಗಡಿ ದಾಟಿದೆ. 111 ಜನ ಮೃತಪಟ್ಟಿದ್ದಾರೆ. ಸಂತಸದ ಸುದ್ದಿಯೆಂದರೆ 284 ಜನ ಗುಣಮುಖರಾಗಿದ್ದಾರೆ. ಜಗತ್ತಿನಲ್ಲಿ 15 ಲಕ್ಷ ಜನ ಸೋಂಕಿಗೆ ಒಳಗಾಗಿ 80 ಸಾವಿರ ಜನ ಮೃತಪಟ್ಟಿದ್ದಾರೆ.