ಕೊರೊನಾ ವೈರಸ್ಗೆ ಕೇರಳದ ಮದ್ದು: 503 ರಿಂದ 16ಕ್ಕೆ ಇಳಿದ ಸೋಂಕಿತ ಪ್ರಕರಣಗಳು!
ತಿರುವನಂತಪುರಂ, ಮೇ 10: ಅಮೆರಿಕದಂತಹ ಬಲಾಢ್ಯ ರಾಷ್ಟ್ರವೇ ಕೊರೊನಾ ವೈರಸ್ ಕಟ್ಟಿಹಾಕುವಲ್ಲಿ ವಿಫಲವಾಗಿ ಕೊರೊನಾ ಅಟ್ಟಹಾಸಕ್ಕೆ ನರಳಿ ಹೋಗಿದೆ. ಅದೇ ಭಾರತದ ಮೊದಲ ಕೊರೊನಾ ವೈರಸ್ ಪ್ರಕರಣ ಪತ್ತೆಯಾಗುವ ಮೂಲಕ ದೇಶದ ಮೊದಲ ಕೊರೊನಾ ಹಾಟ್ಸ್ಪಾಟ್ ಎಂದು ಗುರುತಿಸಲಾಗಿದ್ದ ಕೇರಳ ರಾಜ್ಯದಲ್ಲೀಗ ಕೊರೊನಾ ಸಂಪೂರ್ಣ ಹಿಡಿತದಲ್ಲಿದೆ. ಮಾರಕ ಕೊರೊನಾ ವೈರಸ್ ನಿಯಂತ್ರಣ ವಿಚಾರದಲ್ಲಿ ಕೇರಳ ರಾಜ್ಯ ಇದೀಗ ಜಗತ್ತಿಗೆ ಮಾದರಿಯಾಗಿದೆ ಎಂದರೆ ಅತಿಶಯೋಕ್ತಿ ಏನಲ್ಲ!
ಇಡೀ ಜಗತ್ತಿನಾದ್ಯಂತ ಕೊರೊನಾ ವೈರಸ್ ಅಟ್ಟಹಾಸ ಮುಂದುವರೆದಿದ್ದರು, ಕೇರಳದಲ್ಲಿ ಮಾತ್ರ ಕೋವಿಡ್ 19 ಸೋಂಕು ಹರಡುವುದನ್ನು ಕಟ್ಟಿಹಾಕಲಾಗಿದೆ. ಕೇರಳದಲ್ಲೀಗ ಕೊರೊನಾ ವೈರಸ್ ಸಂಪೂರ್ಣ ನಿಯಂತ್ರಣದಲ್ಲಿದೆ. ದೇಶದ ಮೊದಲ ಕೊರೊನಾ ವೈರಸ್ ಹಾಟ್ಸ್ಪಾಟ್ ಆಗಿದ್ದ ಕೇರಳವೀಗ ಕೊರೊನಾ ಫ್ರೀ ಆಗುವತ್ತ ದಾಪುಗಾಲು ಹಾಕಿದೆ. ಬೇರೆ ರಾಜ್ಯಗಳಲ್ಲಿ ಆಗದ್ದನ್ನು ಕೇರಳ ರಾಜ್ಯ ಮಾಡಿ ತೋರಿಸಿದೆ. ಹೌದು ಕಳೆದ 8 ದಿನಗಳಲ್ಲಿ ಕೇರಳ ರಾಜ್ಯದಲ್ಲಿ ಪತ್ತೆ ಆಗಿರುವುದು ಕೇವಲ 6 ಸೋಂಕಿತ ಪ್ರಕರಣಗಳು ಮಾತ್ರ. ಇದೆಲ್ಲ ಸಾಧ್ಯವಾದದ್ದು ಹೇಗೆ? ಇಲ್ಲಿದೆ ಮಾಹಿತಿ.
ಕಳೆದ 8 ದಿನಗಳಲ್ಲಿ ಕೇವಲ 6 ಪ್ರಕರಣಗಳು ಪತ್ತೆ
ಕೇರಳದಲ್ಲಿ ಕೊರೊನಾ ವೈರಸ್ ನಿಯಂತ್ರಣ ಎಷ್ಟರ ಮಟ್ಟಿಗೆ ಇದೆ ಎಂದರೆ ಕಳೆದ 8 ದಿನಗಳಲ್ಲಿ ಕೇವಲ 6 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಜೊತೆಗೆ ರಾಜ್ಯಾದ್ಯಂತ ಇರುವ ಪ್ರಕರಣಗಳು ಕೇವಲ 16 ಮಾತ್ರ. ಹೌದು ಇದೀಗ ಕೇರಳದಲ್ಲಿ 16 ಜನರಲ್ಲಿ ಮಾತ್ರ ಕೊರೊನಾ ವೈರಸ್ ಸೋಂಕಿದೆ. ಮೇ 8 ರಂದು ಚೆನ್ನೈನಿಂದ ಕೇರಳಕ್ಕೆ ಬಂದಿದ್ದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ಅದನ್ನು ಬಿಟ್ಟರೆ ಮೇ 1, 3, 4, 6 ಹಾಗೂ 7 ರಂದು ಯಾವುದೇ ಪ್ರಕರಣಗಳು ದೃಢಪಟ್ಟಿರಲಿಲ್ಲ. ಮೇ 2 ರಂದು 2, ಮೇ 5 ರಂದು 3 ಹಾಗೂ ಮೇ 8 ರಂದು ಚೆನ್ನೈನಿಂದ ಬಂದಿದ್ದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ.
ಕೇರಳಲ್ಲಿ ಇಂದು ಒಂದೂ ಕೊರೊನಾ ವೈರಸ್ ಪ್ರಕರಣ ಇಲ್ಲ!
503 ರಿಂದ 16ಕ್ಕೆ ಇಳಿದ ಪ್ರಕರಣಗಳು
ಕೇರಳದಲ್ಲಿ ಮೊದಲ ಪ್ರಕರಣ ದೃಢಪಟ್ಟ ಬಳಿಕ 6 ನೂರಕ್ಕೂ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿದ್ದವು. ಮುಂದಿನ 3 ತಿಂಗಳುಗಳಲ್ಲಿ ಕೊರೊನಾ ವೈರಸ್ ಮಹಾಮಾರಿಯನ್ನು ಮಟ್ಟಹಾಕುವಲ್ಲಿ ಕೇರಳ ರಾಜ್ಯ ಯಶಸ್ವಿಯಾಯಿತು. ಕೇರಳದಲ್ಲಿ ಕೊರೊನಾ ವೈರಸ್ಗೆ ಈ ವರೆಗೆ ಬಲಿಯಾಗಿರುವುದು ಕೇವಲ 4 ಜನರು ಮಾತ್ರ. ಒಟ್ಟು ಸೋಂಕಿತರಲ್ಲಿ 483 ಜನರು ಈಗಾಗಲೇ ಗುಣಮುಖರಾಗಿದ್ದಾರೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಕೊರೊನಾ ವೈರಸ್ನಿಂದ ಚೇತರಿಸಿಕೊಂಡವರ ಪ್ರಮಾಣ ಶೇಕಡಾ 30 ರಷ್ಟಿದ್ದರೆ, ಕೇರಳದಲ್ಲಿ ಅದು ಶೇಕಡಾ 97 ರಷ್ಟಿದೆ. ಉಳಿದಂತೆ ರಾಜಸ್ಥಾನದಲ್ಲಿ ಶೇ. 55, ಕರ್ನಾಟಕ ಶೇ. 52, ಆಂಧ್ರಪ್ರದೇಶ ಶೇ. 43 ಮತ್ತು ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರ (ಎರಡೂ ಶೇಕಡಾ 42) ಪ್ರಸ್ತುತ ಅತಿ ಹೆಚ್ಚು ಚೇತರಿಕೆ ದರವನ್ನು ಹೊಂದಿವೆ. ಇನ್ನು ಸೋಂಕಿನಿಂದ ಕೇರಳದಲ್ಲಿ ಮೃತಪಟ್ಟವರ ಪ್ರಮಾಣ ಕೂಡ ಅತ್ಯಂತ ಕಡಿಮೆಯಿದೆ, ಅಂದರೆ ಶೇಕಡಾ 0.8ರಷ್ಟಿದೆ. ಅಂದರೆ 503 ಸೋಂಕಿತ ಪ್ರಕರಣಗಳಲ್ಲಿ 4 ಜನರು ಮೃತಪಟ್ಟಿದ್ದಾರೆ.
ಚೀನಾದ ವುಹಾನ್ನಿಂದ ಬಂದಿದ್ದ ಸೋಂಕಿತ ವಿದ್ಯಾರ್ಥಿನಿ
ಚೀನಾದ ವುಹಾನ್ನಿಂದ ಬಂದಿದ್ದ ಕೇರಳದ ವಿದ್ಯಾರ್ಥಿಯಲ್ಲಿ ಜನವರಿ 30, 2020 ರಂದು ಕೊರೊನಾ ವೈರಸ್ ದೃಢಪಟ್ಟಿತ್ತು. ಅದು ಭಾರತದಲ್ಲಿ ಪತ್ತೆಯಾಗಿದ್ದ ಮೊದಲ ಪ್ರಕರಣವೂ ಹೌದು. ಅದಾದ ಬಳಿಕ ಫೆಬ್ರವರಿ ಮೊದಲ ವಾರದಲ್ಲಿ ಮತ್ತೆರಡು ಸೋಂಕಿತ ಪ್ರಕರಣಗಳು ಕೇರಳದಲ್ಲಿ ದೃಢಪಟ್ಟಿದ್ದವು. ಮೂರು ಪ್ರಕರಣಗಳು ಪತ್ತೆಯಾಗುತ್ತಲೆ ತಡಮಾಡದ ಕೇರಳ ಸರ್ಕಾರ ವೈರಸ್ನಿಂದ ಬಚಾವಾಗಲು ಏನಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ತಯಾರಿ ಮಾಡಿಕೊಂಡಿದ್ದರು. ಅದಾಗಲೇ ಚೀನಾದ ವುಹಾನ್ನಲ್ಲಿ ಜನವರಿ 30ರೊಳಗೆ ಅಧಿಕೃತವಾಗಿ ಸುಮಾರು 170 ಜನರು ಬಲಿಯಾಗಿದ್ದರು. ಜೊತೆಗೆ ಅಲ್ಲಿಂದ ಬಂದಿದ್ದ ವಿದ್ಯಾರ್ಥಿನಿಯಲ್ಲಿ ವೈರಸ್ ಪತ್ತೆಯಾಗಿತ್ತು. ಇಷ್ಟು ಸಾಕಿತ್ತು ಕೇರಳ ಸರ್ಕಾರ ಎಚ್ಚೆತ್ತುಕೊಳ್ಳುವುದಕ್ಕೆ.
ಆಸ್ಪತ್ರೆಯಿಂದ ಕೊರೊನಾ ರೋಗಿಗಳ ವೈಯಕ್ತಿಕ ಮಾಹಿತಿ ಸೋರಿಕೆ?
ಚಿಕಿತ್ಸೆಯೆ ಇಲ್ಲದ ರೋಗಕ್ಕೆ ಕೇರಳದ ಮದ್ದು
ಚಿಕಿತ್ಸೆ ಇಲ್ಲದ ವಿಚಿತ್ರ ರೋಗಕ್ಕೆ ಆಗಿನ್ನೂ ಕೋವಿಡ್ 19 ಎಂದು ವಿಶ್ವ ಆರೋಗ್ಯ ಸಂಸ್ಥೆ ನಾಮಕರಣವನ್ನೂ ಮಾಡಿರಲಿಲ್ಲ. ಸಿವಿಯರ್ ಅಕ್ಯೂಟ್ ರೆಸ್ಪಿರೆಟರಿ ಸಿಂಡ್ರೋಮ್ (SARI) ಎಂದು ಗುರುತಿಸಿ ರೋಗ ಲಕ್ಷಣಗಳಿಗೆ ತಕ್ಕಂತೆ ಚಿಕಿತ್ಸೆಯನ್ನು ಕೊಡುತ್ತಿದ್ದರು. ಜೊತೆಗೆ ವುಹಾನ್ ನಗರವನ್ನು ಸಂಪೂರ್ಣ ಲಾಕ್ಡೌನ್ ಮಾಡಲಾಗಿತ್ತು. ಒಂದರ್ಥದಲ್ಲಿ ಕೇರಳ ಸರ್ಕಾರ ಎಚ್ಚೆತ್ತುಕೊಳ್ಳಲು ವುಹಾನ್ನಿಂದ ಬಂದಿದ್ದ ವಿದ್ಯಾರ್ಥಿನಿಯೆ ಕಾರಣವಾದರು. ತಕ್ಷಣ ಎಚ್ಚೆತ್ತುಕೊಂಡ ಕೇರಳ ಸರ್ಕಾರ ತನ್ನ ರಾಜ್ಯದ ಮೊದಲ ಸೋಂಕಿತೆಯ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದಿದ್ದವರನ್ನು ಕ್ವಾರಂಟೈನ್ ಮಾಡಿತು. ಅದು ದೊಡ್ಡ ಕಾರ್ಯಾಚರಣೆಯಂತೆಯೆ ಇತ್ತು.
ಮೊದಲ ಮೂರು ಪ್ರಕರಣಗಳು ಪತ್ತೆಯಾಗುತ್ತಿದ್ದಂತೆಯೆ ಕೇರಳ ಸರ್ಕಾರ ಬರೊಬ್ಬರಿ 3 ಸಾವಿರ ಜನರನ್ನು ಕ್ವಾರಂಟೈನ್ ಮಾಡಿತು. ಆಗ ಸಹಾಯಕ್ಕೆ ಬಂದಿದ್ದು ನಿಫಾ ವೈರಸ್ ಕಟ್ಟಿಹಾಕಿದ್ದ ಅನುಭವ.
ಆರಂಭದಲ್ಲೆ ರಾಜ್ಯ ವಿಪತ್ತು ಘೋಷಿಸಿದ್ದ ಕೇರಳ
ಕೇರಳ ರಾಜ್ಯದಲ್ಲಿ ಫೆಬ್ರುವರಿ ಮೊದಲ ವಾರದಲ್ಲಿ 3ನೇ ಸೋಂಕಿತ ಪ್ರಕರಣ ದೃಢ ಪಡುತ್ತಿದ್ದಂತೆಯೆ ಫೆಬ್ರುವರಿ 3 ರಂದು ಕೊರೊನಾ ವೈರಸ್ ರಾಜ್ಯ ವಿಪತ್ತು ಎಂದು ಘೋಷಣೆ ಮಾಡಲಾಯ್ತು. ಕೇಂದ್ರ ಸರ್ಕಾರದ ನಿರ್ದೇಶನಗಳಿಗೆ ಕಾಯುತ್ತ ಕೂಡದೆಯೆ ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಾಮ್ ಜೋಸ್ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಮಿತಿ ಸಭೆ ನಡೆಸಿದ್ದರು. ಸಭೆಯಲ್ಲಿ ರಾಜ್ಯ ವಿಪತ್ತು ಎಂದು ಘೋಷಣೆ ಮಾಡಲಾಯ್ತು. ಅದಾಗಲೇ ಸೋಂಕು ಪೀಡಿತ ಚೀನಾದಿಂದ 2239 ಜನರು ಬಂದಿದ್ದರು, ಅವರ ಮೇಲೆ ತೀವ್ರ ನಿಗಾ ಇಡಲಾಯ್ತು. 2155 ಮಂದಿಯನ್ನು ಮನೆಯಿಂದ ಪ್ರತ್ಯೇಕಿಸಿ ನಿಗಾ ವಹಿಸಲಾಗಿತ್ತು, ಜೊತೆಗೆ 84 ಐಸೋಲೇಶನ್ ವಾರ್ಡ್ನಲ್ಲಿ ಪ್ರತ್ಯೇಕಿಸಲಾಗಿತ್ತು. ಆರಂಭದಲ್ಲೆ ಎಲ್ಲ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು ಸೋಂಕು ಹರಡುವುದನ್ನು ತಡೆಯುವಲ್ಲಿಕೇರಳಕ್ಕೆ ಸಾಧ್ಯವಾಯ್ತು.
ಕೊಡಗು-ಕೇರಳ ನಡುವಿನ ಸಂಚಾರಕ್ಕೆ ಮಾರ್ಗಸೂಚಿಗಳು
ಬ್ರೇಕ್ ದ ಚೈನ್
ನಿಫಾ ವೈರಸ್ನಿಂದ ಸಾಕಷ್ಟು ಪಾಠ ಕಲಿತಿದ್ದ ಕೇರಳ ಸರ್ಕಾರ ಕಟ್ಟುನಿಟ್ಟಾಗಿ ಶಂಕಿತರ ಮೇಲೆ ಕಣ್ಣಿಟ್ಟಿತ್ತು. ಜೊತೆಗೆ ಸೋಂಕಿತ ಪ್ರದೇಶಗಳಿಂದ ಬಂದಿದ್ದವರನ್ನು ಪರಿಣಾಮಕಾರಿಯಾಗಿ ಪ್ರತ್ಯೇಕವಾಗಿಡಲಾಯ್ತು. ಇದರಿಂದಾಗಿ ಸೋಂಕು ಸಮುದಾಯಕ್ಕೆ ಹರಡುವುದನ್ನು ತಪ್ಪಿಸಲಾಯ್ತು. ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರಿಗೆ ತಿಳುವಳಿಕೆ ಕೊಡಲಾಯ್ತು. ಹೊಂದೆ ನಿಫಾ ವೈರಸ್ ಸಂದರ್ಭದಲ್ಲಿ ಜನರಿಗಿದ್ದ ತಿಳಿವಳಿಕೆಯನ್ನು ಮತ್ತಷ್ಟು ಹೆಚ್ಚಿಸಲಾಯ್ತು. ಇದರಿಂದ ಸೋಂಕು ಹರಡುವ ಚೈನ್ನ್ನು ಮುರಿಯುವುದು ಕೇರಳಕ್ಕೆ ಸರಳವಾಯ್ತು.
ಮಾರ್ಚ್ 15ರಿಂದ ಕೇರಳ ರಾಜ್ಯಾದ್ಯಂತ ಸಮುದಾಯದಲ್ಲಿ ಬ್ರೇಕ್ ದಿ ಚೈನ್ ಅಭಿಯಾನ ಶುರುಮಾಡಲಾಯ್ತು. ಸಾರ್ವಜನಿಕರ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೈತೊಳುವುದು ಸೇರಿದಂತೆ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಬಸ್ ಸ್ಟ್ಯಾಂಡ್, ಸಾರ್ವಜನಿಕ ಸ್ಥಳಗಳಲ್ಲಿ ಕೈತೊಳೆಯಲು, ಸ್ಯಾನಿಟೈಸೇಷನ್ಗೆ ತಾತ್ಕಾಲಿಕ ವ್ಯವಸ್ಥೆಗಳನ್ನು ಮಾಡಲಾಯಿತು.
ಜೊತೆಗೆ ಲಾಕ್ಡೌನ್ನನ್ನು ಪೊಲೀಸರ ಬೆಂಬಲದೊಂದಿಗೆ ಕಟ್ಟುನಿಟ್ಟಾಗಿ ಜಾರಿಗೆ ತರಲಾಯಿತು. ಡ್ರೋನ್ ಕ್ಯಾಮೆರಾಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಯಿತು. ದಿನಕ್ಕೆ 38ರವರೆಗೆ ವರದಿಯಾಗುತ್ತಿದ್ದ ಪ್ರಕರಣಗಳು ಇಳಿಕೆಯಾಗುತ್ತಾ ಹೋದವು.
ವಿಶೇಷ ಆರ್ಥಿಕ ಪ್ಯಾಕೇಜ್
ಕೋವಿಡ್-19 ಎದುರಿಸಲು ಕೇರಳ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯಕ್ರಮ ರೂಪಿಸಿತ್ತು. ಕೇವಲ ಘೋಷಣೆಗಳಿಂದ ಸೋಂಕು ಹರಡುವುದನ್ನು ತಡೆಗಟ್ಟುವುದು ಸಾಧ್ಯವಿಲ್ಲ ಎಂದು ಅರಿತಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಕ್ಷಣ ಎಲ್ಲ ವರ್ಗದ ಜನರಿಗೆ ಅನಕೂಲವಾಗುವಂತೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದರು. ಕೊರೊನಾ ವೈರಸ್ ತಡೆಯಲು ಹಾಗೂ ಕೊರೊನಾ ವೈರಸ್ ದಾಳಿಯಿಂದ ಆಗಿರುವ ಆರ್ಥಿಕ ಹಾನಿಯ ಹೊರೆ ಜನರ ಮೇಲೆ ಬೀಳುವುದನ್ನು ತಡೆಯಲು 20 ಸಾವಿರ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಸಿ, ಬಡತನ ರೇಖೆಗಿಂತ ಕೆಳಗಿನ ಹಾಗೂ ಎಪಿಎಲ್ ಕುಟುಂಬಗಳಿಗೂ ಎರಡು ತಿಂಗಳುಗಳ ವರೆಗೆ ಆರ್ಥಿಕ ಸಹಾಯ ಘೋಷಣೆ ಮಾಡಿದ್ದರು. ವಿಶೇಷ ಆರ್ಥಿಕ ಪ್ಯಾಕೇಜ್ನಿಂದ ಪರಿಣಾಮಕಾರಿಯಾಗಿ ಲಾಕ್ಡೌನ್ ಎದುರಿಸುವುದು ಕೇರಳ ಸರ್ಕಾರಕ್ಕೆ ಸಾಧ್ಯವಾಯಿತು.
ಪರೀಕ್ಷೆ, ಪರೀಕ್ಷೆ ಮತ್ತು ಪರೀಕ್ಷೆ!
ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕ ಹೊಂದಿದ್ದವರನ್ನು ಹಾಗೂ ಹಾಟ್ಸ್ಪಾಟ್ಗಳಲ್ಲಿ ಸಾಮೂಹಿಕ ಪರೀಕ್ಷೆಗೆ ಒಳಪಡಿಲಾಯ್ತು. ಇದರಿಂದಾಗಿ ಸೋಂಕಿತರ ಪತ್ತೆ ಸಾಧ್ಯವಾಯ್ತು. ದೇಶಾದ್ಯಂತ ಮಾಡಿರುವುದಕ್ಕಿಂತ ಹೆಚ್ಚಿನ ಪರೀಕ್ಷೆಗಳನ್ನು ಕೇರಳ ರಾಜ್ಯವೊಂದರಲ್ಲೆ ಮಾಡಲಾಯ್ತು. ಹೀಗಾಗಿ ಸೋಂಕು ಹರಡುವುದು ನಿಧಾನವಾಗಿ ಹತೋಟಿಗೆ ಬಂದಿತು.
ಕ್ವಾರಂಟೈನ್ ಅವಧಿ ಹೆಚ್ಚಿಸಿದ್ದು
ಕೆಂಪು ವಲಯ, ಕೊರೊನಾ ಹಾಟ್ಸ್ಪಾಟ್ ಅಥವಾ ಕೊರೊನಾ ವೈರಸ್ ಪೀಡಿತ ದೇಶಗಳಿಂದ ಹಿಂದಿರುಗಿದವರಿಗೆ 28 ದಿನಗಳ ಮನೆ ನಿರ್ಬಂಧವನ್ನು ಕಡ್ಡಾಯಗೊಳಿಸಿದ ಏಕೈಕ ರಾಜ್ಯ ಕೇರಳ. ದೇಶಾದ್ಯಂತ 14 ದಿನಗಳ ಕ್ವಾರಂಟೈನ್ ಅವಧಿ ನಿಗದಿ ಮಾಡಲಾಗಿತ್ತು. ಖಡ್ಡಾಯವಾಗಿ ಹಾಗೂ ಹೆಚ್ಚಿನ ಅವಧಿಗೆ ಕ್ವಾರಂಟೈನ್ ಮಾಡಿದ್ದರಿಂದ ಸೋಂಕು ಹರಡುವುದು ನಿಂತಿತು.
ಜೊತೆಗೆ ದೇಶದಲ್ಲೇ ಅತ್ಯುತ್ತಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಇರುವುದೂ ಕೇರಳ ರಾಜ್ಯದಲ್ಲಿ. ನವಜಾತ ಶಿಶು ಮರಣ ಪ್ರಮಾಣ, ಮಕ್ಕಳ ರೋಗ ನಿರೋಧಕ ಶಕ್ತಿ ವಿಚಾರದಲ್ಲಿ ದೇಶದಲ್ಲೇ ಕೇರಳ ಮೊದಲ ಸ್ಥಾನದಲ್ಲಿದೆ. ಇಲ್ಲಿ ತಜ್ಞ ವೈದ್ಯರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರುತ್ತಾರೆ. ಈ ಎಲ್ಲ ಕಾರಣಗಳಿಂದ ಚಿಕಿತ್ಸೆಯೆ ಇಲ್ಲದ ರೋಗಕ್ಕೆ ಕೇರಳ ಮದ್ದು ಕೊಟ್ಟಿತು ಎಂಬ ತೀರ್ಮಾನಕ್ಕೆ ಬರಬಹುದು.