ಶಬರಿಮಲೆಯಲ್ಲಿ ಮಕರವಿಳಕ್ಕು ಪ್ರಾರ್ಥನೆಗೆ ಕೊರೊನಾ ಅಡ್ಡಿ
ತಿರುವನಂತಪುರಂ, ಜನವರಿ 14: ಶಬರಿಮಲೆಯಲ್ಲಿ ಗುರುವಾರ ಬೆಳಗ್ಗೆಯೇ ಮಕರವಿಳಕ್ಕು ಪ್ರಾರ್ಥನೆ ನಡೆಯಿತು. ಆದರೆ ಕೊರೊನಾದಿಂದಾಗಿ ಹೆಚ್ಚು ಭಕ್ತರಿಗೆ ಅನುಮತಿ ಇಲ್ಲದ ಕಾರಣ ಭಕ್ತರು ಕೊಂಚ ಬೇಸರಗೊಂಡಿದ್ದರು.
ಕರ್ನಾಟಕ, ತಮಿಳುನಾಡು, ಹೈದರಾಬಾದ್ ನಿಂದ ಹಲವು ಮಂದಿ ಭಕ್ತರು ಶಬರಿಮಲೆಗೆ ಆಗಮಿಸುತ್ತಾರೆ.
ಶಬರಿಮಲೆ ಸ್ವಾಮಿ ಅಯ್ಯಪ್ಪನ ಸನ್ನಿಧಿಯಲ್ಲಿ ಅತ್ಯಂತ ಮಹತ್ವದ ಗಳಿಗೆಗೆ ಕ್ಷಣಗಣನೆ ಆರಂಭವಾಗಿದೆ. ಮಕರ ಸಂಕ್ರಾಂತಿ ದಿನವಾದ ಇಂದು ಪವಿತ್ರ ಮಕರಜ್ಯೋತಿ ದರ್ಶನ ಹಾಗೂ ಅಯ್ಯಪ್ಪಸ್ವಾಮಿ ವಿಶೇಷ ಪೂಜೆಯ ಸಂಪ್ರದಾಯಗಳನ್ನು ಕಾಣಲು ಭಕ್ತರು ಕಾತರದಿಂದ ಕಾದಿದ್ದರು. ಆದರೆ ಈ ಬಾರಿ ಭಕ್ತರ ಉತ್ಸಾಹಕ್ಕೆ ಕೋವಿಡ್ 19 ಕಡಿವಾಣ ಹಾಕಿದೆ.
ಶಬರಿಮಲೆ ಅಭಯಾರಣ್ಯ ಪ್ರವೇಶದಿಂದ ಸನ್ನಿಧಿ ತನಕ ಥರ್ಮಲ್ ಫಾಗಿಂಗ್, ಹ್ಯಾಂಡ್ ಸ್ಪ್ರೇಯರ್ ಮುಂತಾದ ಸೋಂಕುನಿವಾರಕಗಳನ್ನು ಬಳಸಿ ಶುಚಿಗೊಳಿಸಲಾಗುತ್ತಿದೆ, ಇದಕ್ಕಾಗಿ ದೇವಸ್ವಂ ನಿರ್ವಹಣಾ ತಂಡದ ವಿಶೇಷ ತಂಡ ಕಾರ್ಯ ನಿರ್ವಹಿಸುತ್ತಿದೆ.
ಆರ್ಟಿ-ಪಿಸಿಆರ್ ಪ್ರಮಾಣಪತ್ರ ಹಿಂದಿರುವವರು ಮಾತ್ರ ಸನ್ನಿಧಿಗೆ ಆಗಮಿಸುವಂತಾಗಿದೆ. ಇನ್ನು ಇಂದು ಸಂಜೆ ಮಕರ ಜ್ಯೋತಿ ದರ್ಶನವಾಗಲಿದ್ದು, ಭಕ್ತರು ಕಾತುರರಾಗಿದ್ದಾರೆ.
ಕೊರೊನಾ ಹಿನ್ನೆಲೆ ಈ ಬಾರಿ ಕೇವಲ 5000 ಭಕ್ತರಿಗೆ ಮಾತ್ರ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಅಯ್ಯಪ್ಪಸ್ವಾಮಿ ನೈಯಾಭಿಷೇಕ ಸೇವೆ ಜ.18ಕ್ಕೆ ಮುಕ್ತಾಯವಾಗುತ್ತದೆ.
ಜಿಲ್ಲೆಯನ್ನು 13 ವಿವಿಧ ವಲಯಗಳಾಗಿ ವಿಂಗಡಿಸುವ ಮೂಲಕ ಭಕ್ತರ ವಾಹನಗಳ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಟ್ಟಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ದೇವಾಲಯದ ಸುತ್ತಮುತ್ತಲಿನ 6 ವಿಭಾಗಗಳಲ್ಲಿ ಪೊಲೀಸರ ತಂಡವನ್ನು ನಿಯೋಜಿಸಲಾಗಿದೆ.