ಬಿಪಿನ್ ರಾವತ್ಗೆ ಖಡಕ್ ಎಚ್ಚರಿಕೆ ಕೊಟ್ಟ ಪಿ ಚಿದಂಬರಂ
ತಿರುವನಂತಪುರ, ಡಿಸೆಂಬರ್ 28: ರಾಷ್ಟ್ರೀಯ ಪೌರತ್ವ ಕಾಯ್ದೆಗೆ ಸಂಬಂಧಿಸಿದಂತೆ ಮಾತನಾಡಿದ್ದ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರಿಗೆ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಪೌರತ್ವ ಕಾಯ್ದೆಯ ಪ್ರಶ್ನೆಗೆ 'ಉತ್ತರ' ಸಿಗದೇ ಹೊತ್ತಿ ಉರಿದ 'ಪ್ರದೇಶ'!
ಪೌರತ್ವ ಕಾಯ್ದೆ ವಿರೋಧಿಸಿ ಕೇರಳದಲ್ಲಿ ಇಂದು ಆಯೋಜಿಸಿದ್ದ ಮಹಾ ರಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಚಿದಂಬರಂ, 'ಬಿಪಿನ್ ರಾವತ್ ಅವರೇ, ನಿಮ್ಮ ಕೆಲಸ ನೀವು ನೋಡಿಕೊಳ್ಳಿ ಮೊದಲು. ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟಿಸುವವರ ಬಗ್ಗೆ ಮಾತನಾಡುತ್ತಿರಲ್ಲಾ, ನೀವೊಬ್ಬ ಈ ದೇಶದ ಸೇನಾ ಮುಖ್ಯಸ್ಥರು ಎನ್ನುವದನ್ನು ಮರೆತಿದ್ದೀರಾ? ಎಂದು ಪ್ರಶ್ನಿಸಿರುವ ಅವರು, ಸೇನಾ ಮುಖ್ಯಸ್ಥರೊಬ್ಬರು ಸರ್ಕಾರದ ಪರವಾಗಿ ವಕ್ತಾರಿಕೆ ಮಾಡುವುದು ಅವಮಾನಕಾರಿ ಸಂಗತಿ' ಎಂದು ಕಿಡಿ ಕಾರಿದ್ದಾರೆ.
ಪೌರತ್ವ ಕಾಯ್ದೆ ವಿರೋಧಿಸಿ ನಡೆದಿದ್ದರ ಪ್ರತಿಭಟನೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮಾತನಾಡಿದ್ದ ಬಿಪಿನ್ ರಾವತ್, ದೇಶದಲ್ಲಿ ಹಿಂಸಾಚಾರ ನಡೆಸುವುದು ಸಾರ್ವಜನಿಕ ಆಸ್ತಿ ಪಾಸ್ತಿಗೆ ಬೆಂಕಿ ಹಚ್ಚುವುದನ್ನು ಯಾರೂ ನಾಯಕತ್ವ ಅಂತಾ ಹೇಳುವುದಿಲ್ಲ. ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಬೃಹತ್ ಹೋರಾಟ ನಡೆಯುತ್ತಿದೆ. ಆದರೆ, ಪ್ರತಿಭಟನೆ ಹೆಸರಿನಲ್ಲಿ ಹಿಂಸಾಚಾರ ನಡೆಸಲಾಗುತ್ತಿದೆ. ದೇಶದ ಆಸ್ತಿ-ಪಾಸ್ತಿಗೆ ನಷ್ಟ ಉಂಟು ಮಾಡುತ್ತಿರುವುದು ಎಂತಹ ಹೋರಾಟ? ದೇಶದ ಜನರನ್ನು ಸನ್ಮಾರ್ಗದಲ್ಲಿ ನಡೆಸಿಕೊಂಡು ಹೋಗುವುದೇ ನಿಜವಾದ ನಾಯಕತ್ವ. ಸೂಕ್ತ ಮಾರ್ಗದರ್ಶನ ಮೂಲಕ ಹೋರಾಟ ನಡೆಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಕೆಲವು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳನ್ನು, ಸಿಬ್ಬಂದಿಯನ್ನು ಬಳಸಿಕೊಂಡು ಪ್ರತಿಭಟನೆ ಹೆಸರಿನಲ್ಲಿ ಹಿಂಸಾಚಾರ ನಡೆಸುತ್ತಿದ್ದಾರೆ. ಇದರ ಹಿಂದೆ ಇರುವ ನಾಯಕರು ಯಾರು ಎಂಬುದು ಗೊತ್ತಿದೆ ಎಂದು ಬಿಪಿನ್ ರಾವತ್ ಇತ್ತೀಚೆಗೆ ಹೇಳಿಕೆ ಕೊಟ್ಟಿದ್ದರು.