ಕೇರಳದಲ್ಲಿ ಕೊರೊನಾ ಏರಿಕೆಗೆ ಕಾರಣ ಮುಂದಿಟ್ಟ ಕೇಂದ್ರ ತಂಡ
ತಿರುವನಂತಪುರಂ, ಆಗಸ್ಟ್ 03: ಕೊರೊನಾ ಸೋಂಕಿಗೆ ತುತ್ತಾಗಿ ಹೋಂ ಐಸೊಲೇಷನ್ನಲ್ಲಿದ್ದವರ ಮೇಲ್ವಿಚಾರಣೆ ಕೊರತೆ ಕೇರಳದಲ್ಲಿ ಕೊರೊನಾ ಪ್ರಕರಣಗಳ ಏರಿಕೆಗೆ ಕಾರಣವಾಗಿರಬಹುದು ಎಂದು ಕೇಂದ್ರ ಉನ್ನತ ಮಟ್ಟದ ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿದೆ.
ಕೇರಳದಲ್ಲಿ ಕೊರೊನಾ ಪ್ರಕರಣಗಳ ಏರಿಕೆಯಾಗುತ್ತಿದ್ದಂತೆ ಜುಲೈ 29ರಂದು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ನಿರ್ದೇಶಕ ಡಾ. ಸುಜೀತ್ ಸಿಂಗ್ ನೇತೃತ್ವದ ತಂಡವನ್ನು ಕೇರಳಕ್ಕೆ ಕಳುಹಿಸಿ ಪರಿಸ್ಥಿತಿ ಅವಲೋಕನ ನಡೆಸುವಂತೆ ಕೇಂದ್ರ ಸೂಚಿಸಿತ್ತು.
ಕೊರೊನಾ ಏರಿಕೆ; ಕೇರಳದಲ್ಲಿ ಕೊರೊನಾ ನಿಯಂತ್ರಣ ಕಾರ್ಯತಂತ್ರವನ್ನೇ ಬದಲಿಸಲು ಸಲಹೆ
ಅದರಂತೆ ರಾಜ್ಯಕ್ಕೆ ಆಗಮಿಸಿದ ತಂಡವು ಸೋಂಕಿನ ಪಾಸಿಟಿವಿಟಿ ಪ್ರಮಾಣ ಹೆಚ್ಚಿರುವ ಜಿಲ್ಲೆಗಳಿಗೆ ಭೇಟಿ ನೀಡಿದೆ. ಸದ್ಯ ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿಯನ್ನು ಅವಲೋಕಿಸಿದ್ದು, ಕೊರೊನಾ ಸೋಂಕಿಗೆ ತುತ್ತಾಗಿ ಹೋಂ ಐಸೊಲೇಷನ್ನಲ್ಲಿರುವವರ ಮೇಲ್ವಿಚಾರಣೆ ಕೊರತೆ ಕಂಡುಬಂದಿರುವುದಾಗಿ ತಿಳಿಸಿದೆ. ಅಂಥವರ ಮೇಲೆ ನಿಗಾ ವಹಿಸುವಂತೆ ಹೇಳಿದೆ.
ಕೊರೊನಾ ಸೋಂಕಿಗೆ ತುತ್ತಾದವರು ನಿರ್ದಿಷ್ಟ ಕಾಲಾವಧಿ ಹೋಂ ಐಸೊಲೇಷನ್ನಲ್ಲಿರದೆ ಹೊರಗೆ ಸುತ್ತಾಡುತ್ತಿರುವುದು ಕಂಡುಬರುತ್ತಿದೆ. ಇದು ಸೋಂಕು ಅತಿ ವೇಗವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹರಡಲು ಬಹುಮುಖ್ಯ ಕಾರಣವಾಗಿದೆ ಎಂದು ತಂಡ ಅಭಿಪ್ರಾಯ ಪಟ್ಟಿದೆ. ಸದ್ಯಕ್ಕೆ ಕೇರಳದಲ್ಲಿನ ಕೊರೊನಾ ಪರಿಸ್ಥಿತಿ ಕುರಿತು ಪ್ರಾಥಮಿಕ ಪರಿಶೀಲನಾ ಅಂಶಗಳನ್ನು ಉಲ್ಲೇಖಿಸಿದ್ದು, ಶೀಘ್ರವೇ ತನ್ನ ವಿಸ್ತೃತ ವರದಿಯನ್ನು ಕೇಂದ್ರಕ್ಕೆ ಸಲ್ಲಿಸುವುದಾಗಿ ತಿಳಿಸಿದೆ.
ಕೇರಳದಲ್ಲಿ ಕೊರೊನಾ ಪ್ರಕರಣಗಳು ಹಂತ ಹಂತವಾಗಿ ಇಳಿಕೆಯಾಗುತ್ತಿದೆ. ಕೆಲವು ಜಿಲ್ಲೆಗಳಲ್ಲಿ 12-13% ಪಾಸಿಟಿವಿಟಿ ದರ ಇದ್ದರೆ, ಇನ್ನೂ ಕೆಲವು ಜಿಲ್ಲೆಗಳಲ್ಲಿ 17% ಇದೆ. ಇಂಥ ಜಿಲ್ಲೆಗಳಿಗೆ ಭೇಟಿ ನೀಡುತ್ತಿರುವ ತಂಡ ಅಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸಲಹೆಗಳನ್ನು ನೀಡುತ್ತಿದೆ.
ದೇಶದಲ್ಲಿ ಕೊರೊನಾ ಎರಡನೇ ಅಲೆ ಆರ್ಭಟ ತಗ್ಗಿ, ಹಲವು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ತಗ್ಗಿದೆ. ಆದರೆ ಕೇರಳದಲ್ಲಿ ಮಾತ್ರ ಹೀಗಾಗಿಲ್ಲ. ಎರಡು ವಾರದಿಂದೀಚೆಗೆ ಕೊರೊನಾ ಪ್ರಕರಣಗಳ ಸಂಖ್ಯೆ ಮಿತಿ ಮೀರಿದ್ದು, ಮೂರನೇ ಅಲೆಯ ಆತಂಕಕ್ಕೂ ಎಡೆ ಮಾಡಿಕೊಟ್ಟಿದೆ.
ದೇಶದಲ್ಲಿ ದಿನನಿತ್ಯ ದಾಖಲಾಗುತ್ತಿರುವ ಕೊರೊನಾ ಪ್ರಕರಣಗಳ ಪೈಕಿ ಕೇರಳ ರಾಜ್ಯವೊಂದರಲ್ಲೇ ಅರ್ಧದಷ್ಟು ಪ್ರಕರಣಗಳಿದ್ದು, ಮೂರನೇ ಅಲೆ ಆರಂಭವನ್ನು ಕೇರಳದ ಕೊರೊನಾ ಪ್ರಕರಣಗಳ ಸಂಖ್ಯೆ ಸೂಚಿಸುತ್ತಿವೆಯೇ ಎಂಬ ಅನುಮಾನ ತಂದೊಡ್ಡಿದೆ.
ಇದರೊಂದಿಗೆ ರಾಜ್ಯದಲ್ಲಿ ಸೆರೊ ಪ್ರಿವಲೆನ್ಸ್ ಮಟ್ಟವೂ (ಸೋಂಕಿಗೆ ವಿರುದ್ಧವಾಗಿ ಪ್ರತಿಕಾಯಗಳನ್ನು ಹೊಂದಿರುವ ಪ್ರಮಾಣ) ಕಡಿಮೆಯಿರುವುದು ಕೊರೊನಾ ಸೋಂಕನ್ನು ಇನ್ನಷ್ಟು ಹರಡಿಸಬಹುದಾದ ಸಾಧ್ಯತೆಯಿದೆ. ರಾಜ್ಯದ ಜನಸಂಖ್ಯೆಯ ಕನಿಷ್ಠ ಶೇ 56ರಷ್ಟು ಮಂದಿ ಸೋಂಕಿಗೆ ತುತ್ತಾಗುವ ಸಾಧ್ಯತೆಯನ್ನು ಇದು ಸೂಚಿಸಿದ್ದು, ಎಚ್ಚೆತ್ತುಕೊಳ್ಳುವ ಅಗತ್ಯವನ್ನು ಮನಗಾಣಿಸಿದೆ.
ಈ ಬೆನ್ನಲ್ಲೇ ಭಾರತೀಯ ವೈದ್ಯಕೀಯ ಸಂಘ ರಾಜ್ಯ ಸರ್ಕಾರಕ್ಕೆ ಸಲಹೆಯೊಂದನ್ನೂ ನೀಡಿದೆ. ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಹೊಸ ಕಾರ್ಯತಂತ್ರಗಳನ್ನು ರೂಪಿಸುವಂತೆ ತಿಳಿಸಿದೆ. ಕೊರೊನಾ ರೋಗಿಗಳ ಪತ್ತೆಗೆ ಮುಂದಾಗಬೇಕು. ತ್ವರಿತವಾಗಿ ಲಸಿಕೆ ನೀಡಬೇಕು ಎಂದು ಹೇಳಿದೆ. ಹೆಚ್ಚು ಜನ ಒಂದೆಡೆ ಸೇರುವುದನ್ನು ತಡೆಗಟ್ಟಲು ಹಾಗೂ ಅದರಿಂದ ರೋಗ ಹರಡುವಿಕೆ ನಿಯಂತ್ರಣಕ್ಕೆ ಅಂಗಡಿಗಳ ಹಾಗೂ ಸಂಸ್ಥೆಗಳ ಕಾರ್ಯನಿರ್ವಹಣೆ ಸಮಯವನ್ನು ವಿಸ್ತರಿಸುವಂತೆ ತಿಳಿಸಿದೆ.
ಕೇರಳದಲ್ಲಿ ಸೋಮವಾರ 13,984 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. 15,923 ಮಂದಿ ಗುಣಮುಖರಾಗಿದ್ದು, ಒಂದು ದಿನದಲ್ಲಿ 118 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗಿರುವುದು ನೆರೆ ರಾಜ್ಯಗಳಲ್ಲಿಯೂ ಭಯ ಹುಟ್ಟಿಸಿದೆ. ಕೇರಳದ ಜೊತೆ ಗಡಿ ಹಂಚಿಕೊಂಡಿರುವ ರಾಜ್ಯಗಳಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಲಾಗುತ್ತಿದೆ. ಕೇರಳದಿಂದ ಬರುವವರಿಂದ ಆರ್ಟಿಪಿಸಿಆರ್ ಪರೀಕ್ಷೆ ವರದಿ ಕಡ್ಡಾಯಗೊಳಿಸಲಾಗಿದೆ.