ಅಯ್ಯಪ್ಪ ಸನ್ನಿಧಿ ಪ್ರವೇಶಿಸಲು ಯತ್ನಿಸಿದ ರೆಹಾನಾಗೆ ಕಡ್ಡಾಯ ನಿವೃತ್ತಿ
ತಿರುವನಂತಪುರಂ, ಮೇ 15: ಶಬರಿಮಲೆ ಅಯ್ಯಪ್ಪ ಸನ್ನಿಧಿಗೆ ತೆರಳಲು ಯತ್ನಿಸಿ ವಿಫಲರಾಗಿದ್ದ ಸಾಮಾಜಿಕ ಕಾರ್ಯಕರ್ತೆ ರೆಹನಾ ಫಾತಿಮಾ ಅವರಿಗೆ ಕಡ್ಡಾಯ ನಿವೃತ್ತಿ ಹೊಂದುವಂತೆ ಭಾರತ್ ಸಂಚಾರ್ ನಿಗಮ ನಿಯಮಿತ(ಬಿಎಸ್ಎನ್ಎಲ್) ಆದೇಶಿಸಿದೆ.
ಅಯ್ಯಪ್ಪ ದೇಗುಲ ಪ್ರವೇಶ, ಅವಹೇಳನಕಾರಿ ಫೇಸ್ಬುಕ್ ಪೋಸ್ಟ್ ನಿಂದಾಗಿ ಪೊಲೀಸರಿಂದ ಬಂಧನ, ವಿಚಾರಣೆ ಎದುರಿಸಿದ್ದ ಫಾತಿಮಾರನ್ನು ಉದ್ಯೋಗದಿಂದ ಅಮಾನತು ಮಾಡಲಾಗಿತ್ತು. ಆದರೆ, ಹುದ್ದೆಯಲ್ಲಿ ಉಳಿಸಿಕೊಳ್ಳಲಾಗಿತ್ತು. ಆದರೆ, ಈಗ ಕೊರೊನಾವೈರಸ್ ಲಾಕ್ಡೌನ್ ನಡುವೆ ಉದ್ಯೋಗದಿಂದ ಪರೋಕ್ಷವಾಗಿ ತೆಗೆದು ಹಾಕಲಾಗಿದೆ. ಇದು ರಾಜಕೀಯ ಮುಖಂಡರ ಕೈವಾಡದಿಂದ ನಡೆದಿರುವ ಕಾನೂನು ಉಲ್ಲಂಘನೆ ಕ್ರಮವಾಗಿದ್ದು, ಕಡ್ಡಾಯ ನಿವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ, ನಾನು ಈ ಆದೇಶದ ವಿರುದ್ಧ ಹೋರಾಡುತ್ತೇನೆ ಎಂದು ಫಾತಿಮಾ ಸುದ್ದಿಗಾರರೊಂದಿಗೆ ಹೇಳಿದ್ದಾರೆ.
ಶಬರಿಮಲೆ ಪ್ರವೇಶಿಸಲು ಹೋದ 'ಕಿಸ್ ಆಫ್ ಲವ್' ಫಾತಿಮಾ ರೆಹನಾ ಹಿನ್ನಲೆ
2018ರಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಅಯ್ಯಪ್ಪ ದೇಗುಲ ಭಕ್ತರ ಬಗ್ಗೆ ಕೆಟ್ಟದಾಗಿ ಬರೆದಿರುವ ಆರೋಪ ಹೊತ್ತುಕೊಂಡಿದ್ದ ರೆಹನಾ ಫಾತಿಮಾರನ್ನು ಪಥನಂತಿಟ್ಟ ಪೊಲೀಸರು ಬಂಧಿಸಿದ್ದರು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಕೊಚ್ಚಿಯಲ್ಲಿ ಬಂಧಿಸಿದ್ದ ಪಥನಂಥಿಟ್ಟ ನಗರ ಠಾಣೆ ಪೊಲೀಸರು, ವಿಚಾರಣೆಗೊಳಪಡಿಸಿದ್ದರು.
ಫೇಸ್ ಬುಕ್ ನಲ್ಲಿ ರೆಹಾನಾ ಪೋಸ್ಟ್
ರೆಹನಾ ಅವರು ಫೇಸ್ ಬುಕ್ ನಲ್ಲಿ ಬಳಸಿದ ಭಾಷೆ, ಚಿತ್ರಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಿದೆ. ಅಯ್ಯಪ್ಪ ಮಾಲೆಧಾರಿಯಂತೆ ವಸ್ತ್ರ ಧರಿಸಿ, ರುದ್ರಾಕ್ಷಿ ಮಾಲೆ ಹಾಕಿಕೊಂಡು ತತ್ವಮಸಿ ಎಂದು ಅಡಿಬರಹ ಬರೆದುಕೊಂಡಿದ್ದರು.
ರೆಹನಾ ಅವರು ಪೋಸ್ಟ್ ಗಳ ವಿರುದ್ಧ ಶಬರಿಮಲೆ ಸಂರಕ್ಷಣಾ ಸಮಿತಿ ದೂರು ನೀಡಿತ್ತು. ಐಪಿಎಸ್ ಸೆಕ್ಷನ್ 295 ಎ ಅನ್ವಯ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಅರ್ಜಿ ಹಾಕಿದ್ದ ರೆಹನಾ ಅವರಿಗೆ ಹಿನ್ನಡೆಯುಂಟಾಗಿದ್ದು, ನವೆಂಬರ್ 16, 2018ರಂದು ಅವರ ಅರ್ಜಿಯನ್ನು ಕೇರಳ ಹೈಕೋರ್ಟ್ ತಿರಸ್ಕರಿಸಿತ್ತು.
ಬಿಎಸ್ಎನ್ಎಲ್ ನಲ್ಲಿ ಟೆಕ್ನಿಷಿಯನ್ ಆಗಿರುವ ರೆಹನಾ
ಬಿಎಸ್ಎನ್ಎಲ್ ನಲ್ಲಿ ಟೆಕ್ನಿಷಿಯನ್ ಆಗಿರುವ ರೆಹನಾ ಅವರು ಕಚೇರಿಯಲ್ಲಿ ಕಾರ್ಯ ನಿರ್ವಹಿಸುವಾಗಲೇ ಪೊಲೀಸರು ಬಂಧಿಸಿ ಕರೆದೊಯ್ದಿದ್ದರು. ಹೀಗಾಗಿ, ರೆಹನಾ ವಿರುದ್ಧ ಸಂಸ್ಥೆ ಕ್ರಮ ಕೈಗೊಂಡಿದೆ. ಸುಪ್ರೀಂಕೋರ್ಟ್ ಆದೇಶದಂತೆ ಎಲ್ಲಾ ವಯೋಮಾನದ ಮಹಿಳೆಯರು ಅಯ್ಯಪ್ಪ ದೇಗುಲ ಪ್ರವೇಶಿಸಲು ಅರ್ಹರಾಗಿದ್ದಾರೆ. ಹೀಗಾಗಿ, ಅಯ್ಯಪ್ಪ ದೇಗುಲ ಪ್ರವೇಶಿಸಲು ವಿಫಲ ಯತ್ನ ನಡೆಸಿದರು. ಪೊಲೀಸ್ ಪಡೆ ಭದ್ರತೆಯೊಂದಿಗೆ ಬಂದರೂ ದೇಗುಲಕ್ಕೂ 500 ಮೀಟರ್ ದೂರದಲ್ಲಿ ಅವರನ್ನು ತಡೆದು ವಾಪಸ್ ಕಳಿಸಲಾಗಿತ್ತು.
ಬಿಎಸ್ಎನ್ಎಲ್ ಆದೇಶ ಪ್ರತಿಯಲ್ಲಿ ಏನಿದೆ?
ಬಿಎಸ್ಎನ್ಎಲ್ ಅಧಿಕಾರಿಯಾಗಿದ್ದುಕೊಂಡು ಫಾತಿಮಾ ನಡೆದುಕೊಂಡು ರೀತಿ ಸರಿಯಿಲ್ಲ, ಇದರಿಂದ ಸಂಸ್ಥೆಯ ಗೌರವಕ್ಕೆ ಧಕ್ಕೆ ಉಂಟಾಗಿದೆ, ಫಾತಿಮಾ ಎಎಸ್ ದುರ್ನಡತೆ ಹಾಗೂ ಅಗೌರವದ ನಡವಳಿಕೆ ಕುರಿತಂತೆ ಆಂತರಿಕ ತನಿಖೆ ನಡೆಸಿದ ಬಳಿಕ ಈ ಆದೇಶ ನೀಡಲಾಗಿದೆ ಎಂದು ಬಿಎಸ್ಎನ್ಎಲ್ ಹೇಳಿದೆ. ಫಾತಿಮಾ ಅವರ ನಡವಳಿಕೆ ಉದ್ದೇಶಪೂರ್ವಕವಾಗಿದ್ದು, ಆಕಸ್ಮಿಕವಾಗಿ ನಡೆದಿದ್ದಲ್ಲ ಎಂದು ಸಾಬೀತಾಗಿದೆ ಎಂದು ಬಿಎಸ್ಎನ್ಎಲ್ ಡೆಪ್ಯುಟಿ ಪ್ರಧಾನ ವ್ಯವಸ್ಥಾಪಕರು ಹೇಳಿದ್ದಾರೆ.
ಮುಸ್ಲಿಂ ಸಮುದಾಯದಿಂದ ಉಚ್ಚಾಟನೆ
ಕಿಸ್ ಆಫ್ ಲವ್ ಆಯೋಜಕಿ ಮತ್ತು ಮಹಿಳಾ ಕಾರ್ಯಕರ್ತೆ ರೆಹಾನಾ ಫಾತಿಮಾ ಹಾಗೂ ಅವರ ಕುಟುಂಬದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಸ್ಲಿಂ ಜಮಾತ್ ಮುಂದಾಗಿದೆ. ರೆಹಾನಾ ಫಾತಿಮಾ ಹಾಗೂ ಅವರ ಕುಟುಂಬವನ್ನು ಮುಸ್ಲಿಂ ಸಮುದಾಯದಿಂದ ಉಚ್ಚಾಟಿಸುವಂತೆ ಎರ್ನಾಕುಲಂ ಕೇಂದ್ರ ಮುಸ್ಲಿಂ ಜಮಾತ್ ಪರಿಷತ್ ಗೆ ಕೇರಳ ಮುಸ್ಲಿಂ ಜಮಾತ್ ಪರಿಷತ್ ಸೂಚಿಸಿದೆ. ರೆಹಾನಾ ಫಾತಿಮಾ ಅವರನ್ನು ಎರ್ನಾಕುಲಂ ಕೇಂದ್ರ ಮುಸ್ಲಿಂ ಜಮಾತ್ನಿಂದ ಉಚ್ಚಾಟನೆ ಮಾಡಲಾಗಿದ್ದು, ಅವರ ಕುಟುಂಬ ಸದಸ್ಯರನ್ನು ಕೂಡ ಮಹಲ್ಲಾದ ಸದಸ್ಯತ್ವದಿಂದ ಹೊರಹಾಕಲಾಗಿದೆ. ರೆಹನಾ ಅವರು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಪರಿಷತ್ ಅಧ್ಯಕ್ಷ ಎ. ಪೂಕುಂಜು ತಿಳಿಸಿದ್ದಾರೆ.
ಕಿಸ್ ಆಫ್ ಲವ್ ಆಯೋಜಕಿ ರೆಹನಾ ಫಾತಿಮಾ
2014ರಲ್ಲಿ ಕಿಸ್ ಆಫ್ ಲವ್ ಆಂದೋಲನದಲ್ಲಿ ಫಾತಿಮಾ ತಮ್ಮನ್ನು ತೊಡಗಿಸಿಕೊಂಡವರು. ನೈತಿಕ ಪೊಲೀಸ್ ಗಿರಿ ವಿರುದ್ದ ಚಿತ್ರ ನಿರ್ಮಾಪಕ ಮನೋಜ್ ಶ್ರೀಧರ್ ಆರಂಭಿಸಿದ್ದ ಕ್ಯಾಂಪೇನ್ ನಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಫಾತಿಮಾ, ಓಣಂ ಹುಲಿವೇಷದಲ್ಲೂ ಭಾಗವಹಿಸಿದ್ದರು. ಪುರುಷರಿಗೆ ಮಾತ್ರ ಪ್ರಾತಿನಿಧ್ಯವಿರುವ ವಿಚಾರದಲ್ಲಿ, ಮಹಿಳೆಯರೂ ಮೇಲ್ಪಂಕ್ತಿಗೆ ಬರಬೇಕು ಎನ್ನುವುದು ನನ್ನ ಉದ್ದೇಶ ಎನ್ನುವುದು ಫಾತಿಮಾ ನಿಲುವು. ಈ ಚಿತ್ರದಲ್ಲಿ ಅಯ್ಯಪ್ಪ ಮಾಲೆಧಾರಿಯಂತೆ ವೇಷಧರಿಸಿರುವುದು ಅವರ ಬಂಧನಕ್ಕೆ ಕಾರಣವಾಗಿದೆ.