ಸುರೇಂದ್ರನ್ಗೆ ಮಂಜೇಶ್ವರದಲ್ಲಿ ಬಿಜೆಪಿ ಗೆಲುವಿನ ಸುಳಿವು ಸಿಕ್ಕಿದೆ?
ಮಂಜೇಶ್ವರ, ಮಾರ್ಚ್ 24: ಕೇರಳ ಚುನಾವಣೆಯಲ್ಲಿ ಎಲ್ಡಿಎಫ್ ಮತ್ತೊಮ್ಮೆ ಗೆಲುವು ಸಾಧಿಸುವ ಸಾಧ್ಯತೆಯಿದೆ ಬಹುತೇಕ ಎಲ್ಲಾ ಸಮೀಕ್ಷೆಗಳು ಹೇಳಿವೆ. ಬಿಜೆಪಿ ಒಂದು ಸ್ಥಾನಗಳಿಸಿದರೆ ಹೆಚ್ಚು ಅಬ್ಬಬ್ಬಾ ಎಂದರೆ 2 ಸ್ಥಾನ ಗಳಿಸಬಹುದು ಎಂದು ಸಮೀಕ್ಷೆಗಳು ತಿಳಿಸಿವೆ. ಈ ನಡುವೆ ಇತ್ತೀಚಿನ ಸಮೀಕ್ಷೆಯಲ್ಲಿ ಮಂಜೇಶ್ವರದಲ್ಲಿ ಕೆ ಸುರೇಂದ್ರನ್ ಅವರಿಗೆ ಗೆಲುವು ಎಂದು ವರದಿ ಬಂದಿರುವುದು ಬಿಜೆಪಿಗೆ ಭಾರಿ ಹುಮ್ಮಸ್ಸು ತಂದಿದೆ.
ಮನೋರಮಾ ನ್ಯೂಸ್-ವಿಎಂಆರ್ ಸರಣಿ ಸಮೀಕ್ಷೆಯಲ್ಲಿ ಮಂಜೇಶ್ವರದಲ್ಲಿ ಬಿಜೆಪಿಗೆ ಗೆಲುವು ಜೊತೆಗೆ ಪಥನಂತಿಟ್ಟದ ಕೊನ್ನಿ ಕ್ಷೇತ್ರದಲ್ಲಿ ಮುನ್ನಡೆ ಪಡೆಯಲಿದ್ದಾರೆ ಎಂಬ ವರದಿ ಬಂದಿದೆ. ಇದರ ಬೆನ್ನಲ್ಲೇ ಬಹುಜನ ಸಮಾಜವಾದಿ ಪಕ್ಷ(ಬಿಎಸ್ಪಿ) ಅಭ್ಯರ್ಥಿ ಕಣದಿಂದ ಹಿಂದೆ ಸರಿದಿರುವುದು ಪಕ್ಷದ ಅಧ್ಯಕ್ಷ ಕೆ ಸುರೇಂದ್ರನ್ ಅವರಿಗೆ ಗೆಲುವಿನ ಸುಳಿವು ನೀಡಿದೆ.
ಮಾತೃಭೂಮಿ-ಸಿ ವೋಟರ್ ಸಮೀಕ್ಷೆ: ಕೇರಳದಲ್ಲಿ ಮತ್ತೆ ಪಿಣರಾಯಿ 'ವಿಜಯ'ನ್
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 89 ಮತಗಳ ಅಂತರದಿಂದ ಸುರೇಂದ್ರನ್ ಅವರು ಇದೇ ಕ್ಷೇತ್ರದಲ್ಲಿ ಸೋಲು ಕಂಡಿದ್ದರು. ಮುಸ್ಲಿಂ ಲೀಗ್ ಅಭ್ಯರ್ಥಿ ಪಿಬಿ ಅಬ್ದುಲ್ ರಜಾಕ್ ಅವರು 56,870 ಮತಗಳಿಸಿದ್ದರೆ, ಸುರೇಂದ್ರನ್ 56,781 ಮತ ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಬಹುಜನ ಸಮಾಜವಾದಿ ಪಕ್ಷದ ಅಭ್ಯರ್ಥಿ ಕೆ ಸುಂದರ 467 ಮತಗಳನ್ನು ಪಡೆದಿದ್ದರು. 2016ರಲ್ಲಿ ಸುರೇಂದ್ರನ್ ಸೋಲಿಗೆ ಪರೋಕ್ಷವಾಗಿ ಕಾರಣವಾಗಿದ್ದ ಸುಂದರ ಈ ಬಾರಿ ನಾಮಪತ್ರ ಹಿಂಪಡೆದುಕೊಂಡಿದ್ದಲ್ಲದೆ, ಎನ್ಡಿಎ ಅಭ್ಯರ್ಥಿ ಪರ ಪ್ರಚಾರ ಮಾಡುವುದಾಗಿ ಘೋಷಿಸಿದ್ದಾರೆ.
ಸುರೇಂದ್ರನ್ ಅವರು ಶಬರಿಮಲೆ ಸಂಪ್ರದಾಯ, ಕಟ್ಟುಪಾಡುಗಳನ್ನು ಕಾಪಾಡಲು ನಡೆಸಿದ ಹೋರಾಟಕ್ಕೆ ಬೆಂಬಲ ಸಿಗಬೇಕಿದೆ. ಅವರ ಗೆಲುವಿಗೆ ನಾನು ಅಡ್ಡಿಯಾಗಲಾರೆ ಎಂದು ತಮ್ಮ ಯಕ್ಷಗಾನ ಮಿತ್ರ ಮಂಡಳಿ ಸದಸ್ಯರ ಬೆಂಬಲವೂ ಸುರೇಂದ್ರನ್ ಅವರಿಗೆ ಸಿಗಲಿದೆ ಎಂದಿದ್ದಾರೆ.
ಕೇರಳದಲ್ಲಿ 42 ಸ್ಥಾನ ಗೆದ್ದರೂ ಬಿಜೆಪಿ ಸರ್ಕಾರ ಸ್ಥಾಪನೆ ಸಾಧ್ಯ!
ಕೇರಳದ 140 ಸ್ಥಾನಗಳಿಗೆ ಏಪ್ರಿಲ್ 6 ರಂದು ಮತದಾನ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ.
140 ಸ್ಥಾನಗಳ ವಿಧಾನಸಭೆಯ ಬಲಾಬಲ: ಸಿಪಿಐ (ಎಂ) ನೇತೃತ್ವದ ಎಲ್ ಡಿ ಎಫ್ 93 ಸ್ಥಾನ, ಕಾಂಗ್ರೆಸ್ ನೇತೃತ್ವ ಯುಡಿಎಫ್ 42 ಹಾಗೂ ಬಿಜೆಪಿ ನೇತೃತ್ವದ ಎನ್ಡಿಎ 1 ಸ್ಥಾನ ಹೊಂದಿದೆ. ಯಾವುದೇ ಪಕ್ಷವು ಅಧಿಕಾರ ಸ್ಥಾಪಿಸಲು ಮ್ಯಾಜಿಕ್ ನಂಬರ್ 71 ದಾಟಬೇಕಾಗುತ್ತದೆ. 2016ರಲ್ಲಿ ಎಲ್ ಡಿ ಎಫ್ 91, ಯುಡಿಎಫ್ 47, ಕಾಂಗ್ರೆಸ್ 1, ಇತರೆ 1 ಎಂದು ಫಲಿತಾಂಶ ಬಂದಿತ್ತು.