ಶಬರಿಮಲೆ ಅಯ್ಯಪ್ಪ ಭಕ್ತರ ಪರ ನಾವಿದ್ದೇವೆ: ಅಮಿತ್ ಶಾ
ಕನ್ನೂರು, ಅಕ್ಟೋಬರ್ 27: 'ಶಬರಿಮಲೆ ಅಯ್ಯಪ್ಪ ಭಕ್ತರ ಪರವಾಗಿ ಬಿಜೆಪಿ ಅಚಲವಾಗಿ ನಿಂತಿದೆ' ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಕೇರಳದ ಕನ್ನೂರಿನಲ್ಲಿ ಶನಿವಾರ ಬಿಜೆಪಿ ಪಕ್ಷ ಕಚೇರಿಯನ್ನು ಉದ್ಘಾಟಿಸಿದ ಅವರು, ನಂತರ ಸಭೆಯೊಂದರಲ್ಲಿ ಮಾತನಾಡುತ್ತಿದ್ದರು.
ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್ ತೀರ್ಪನ್ನು ವಿರೋಧಿಸಿ ನಡೆದ ಗಲಭೆಯ ನಂತರ 2000 ಕ್ಕೂ ಹೆಚ್ಚು ಬಿಜೆಪಿ, ಆರೆಸ್ಸೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದನ್ನು ಅವರು ಖಂಡಿಸಿದರು.
ಸ್ವಾಮಿ ಸಂದೀಪಾನಂದ ಆಶ್ರಮದ ಮೇಲೆ ದಾಳಿ: ಆರೆಸ್ಸೆಸ್ ಕೈವಾಡ?!
ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಬಹುತೇಕ ಬಿಜೆಪಿ ನಾಯಕರು ವಿರೋಧಿಸಿರುವುದನ್ನು ಇಲ್ಲಿ ಸ್ಮರಿಸಬಹುದು.
ಎಡಪಕ್ಷದಿಂದ ತೀರ್ಪಿನ ದುರ್ಬಳಕೆ
ಕೇರಳದ ಎಡಪಂಥೀಯ ಸರಾಕರ ಶಬರಿಮಲೆ ವಿಷಯವನ್ನು ಮತ್ತು ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ತನ್ನ ರಾಜಕೀಯ ಲಾಭಕ್ಕಾಗಿ ಜನರ ನಂಬಿಕೆಗಳೊಂದಿಗೆ ಆಟವಾಡುತ್ತಿದೆ. ಅದಕ್ಕೆಂದೇ ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಕರ್ತರನ್ನು ಪೊಲೀಸ್ ವಶಕ್ಕೆ ಪಡೆಯುವಂತೆ ಮಾಡಲಾಗಿದೆ ಎಂದು ಅಮಿತ್ ಶಾ ದೂರಿದರು.
ಶಬರಿಮಲೆ ತೀರ್ಪು ಸ್ವಾಗತಿಸಿದ ಆಶ್ರಮದ ಮೇಲೆ ದುಷ್ಕರ್ಮಿಗಳಿಂದ ದಾಳಿ
ಬಿಜೆಪಿ ಭಕ್ತರ ಎಂದಿಗೂ ಅಯ್ಯಪ್ಪ ಪರ
'ಬಿಜೆಪಿ ಎಂದಿಗೂ ಶಬರಿಮಲೆ ಭಕ್ತರ ಪರವಾಗಿದೆ. ನಾವು ಎಂದಿಗೂ ಕೇರಳದ ಜನತೆ ಮತ್ತು ಅಯ್ಯಪ್ಪ ಭಕ್ತರ ಪರವಾಗಿದ್ದೇವೆ' ಎಂದರು.
'ಶಬರಿಮಲೆಯ ಅಯ್ಯಪ್ಪ ಬ್ರಹ್ಮಾಚಾರಿ. ಆದ್ದರಿಂದ ಇಲ್ಲಿ ನಿರ್ದಿಷ್ಟ ವಯಸ್ಸಿನ ಮಹಿಳೆಯರಿಗೆ ಪ್ರವೇಶವಿಲ್ಲ. ಈ ನಿಯಮವನ್ನು ಯಾರು ವಿರೋಧಿಸುತ್ತಾರೋ, ಅವರಿಗೆ ನಾನು ಹೇಳುವುದಿಷ್ಟೆ. ಭಾರತದಲ್ಲಿ ಎಷ್ಟೊ ದೇವಾಲಯಗಳಲ್ಲಿ ಕೇವಲ ಮಹಿಳೆಯರಿಗಷ್ಟೇ ಪ್ರವೇಶವಿದೆ. ಆ ದೇವಾಲಯಗಳಿಗೆ ಪ್ರವೇಶಿಸಲು ಪುರುಷರು ಎಂದಿಗೂ ಪ್ರಯತ್ನಿಸಿಲ್ಲ' ಎಂದು ಅವರು ಹೇಳಿದರು.
ಶಬರಿಮಲೆ ದೇಗುಲ ಹಿಂಸಾಚಾರ; 1400ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ
ತೀರ್ಪಿನಲ್ಲೇನಿತ್ತು?
ಕಳೆದ 800 ವರ್ಷಗಳಿಂದ ಕೇರಳದ ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ 10 ರಿಂದ 50 ವರ್ಷ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಈ ವಯಸ್ಸಿನ ಹೆಣ್ಣು ಮಕ್ಕಳು ಋತುಮತಿಯಾಗುವ ಕಾರಣ ಅವರು ದೇವಾಲಯ ಪ್ರವೇಶಿಸುವುದರಿಂದ ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ ಎನ್ನಲಾಗಿತ್ತು. ಆದರೆ ಸೆ.28 ರಂದು ಈ ಕುರಿತು ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂ ಕೋರ್ಟ್, ಮಹಿಳೆಯರ ಪ್ರವೇಶಕ್ಕಿದ್ದ ನಿರ್ಬಂಧವನ್ನು ತೆರವುಗೊಳಿಸಿತ್ತು.
ಪ್ರತಿಭಟನಕಾರರನ್ನು ವಶಕ್ಕೆ ಪಡೆದಿದ್ದ ಪೊಲೀಸರು
ಕಳೆದ ವಾರ ಅಯ್ಯಪ್ಪ ದೇವಾಲಯದ ಬಾಗಿಲು ತೆರೆದ ಸಂದರ್ಭದಲ್ಲಿ ಅಯ್ಯಪ್ಪ ದೇವಾಲಯಕ್ಕೆ ಕೆಲವು ಮಹಿಳೆಯರು ಪ್ರವೇಶಿಸಲು ಪ್ರಯತ್ನಿಸಿದ ಘಟನೆ ನಡೆಯಿತು. ಈ ಸಂದರ್ಭದಲ್ಲಿ ಸುಮಾರು ಒಂದು ವಾರಗಳ ಕಾಲ ಬಿಜೆಪಿ, ಆರೆಸ್ಸೆಸ್, ಅಯ್ಯಪ್ಪ ಭಕ್ತರು ಸೇರಿದಂತೆ ಹಲವು ಸಂಘ-ಸಂಸ್ಥೆಗಳು ದೇವಾಲಯದೆದುರು ಪ್ರತಿಭಟನೆ ನಡೆಸಿದ್ದವು. ಪ್ರತಿಭಟನೆಯ ಸಮಯದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.