ಆರೆಸ್ಸೆಸ್ ಕಾರ್ಯಕರ್ತ ಹತ್ಯೆ, ಜಿಲ್ಲೆ ಬಂದ್ ಮಾಡಲು ಬಿಜೆಪಿ ಕರೆ
ಆಲಪ್ಪುಳ(ಕೇರಳ), ಫೆ.25: ಆಲಪ್ಪುಳ ಜಿಲ್ಲೆಯ ಚೆರ್ತಲಾದ ನಾಗಮಕುಲಂಗರದಲ್ಲಿ ಆರೆಸ್ಸೆಸ್ ಕಾರ್ಯಕರ್ತನ ಹತ್ಯೆಯಾಗಿದೆ. ಚುನಾವಣೆ ಸಂದರ್ಭದಲ್ಲಿ ದ್ವೇಷ ರಾಜಕೀಯ, ಗಲಾಟೆ, ಸಂಘರ್ಷಗಳನ್ನು ಕಾಣುವ ಕೆಟ್ಟ ಇತಿಹಾಸ ಕೇರಳ ಹೊಂದಿದೆ.
ಬುಧವಾರ ರಾತ್ರಿ ಎಸ್ಡಿಪಿಐ ಹಾಗೂ ಆರೆಸ್ಸೆಸ್ ಕಾರ್ಯಕರ್ತರ ನಡುವೆ ನಡೆದ ಹೊಡೆದಾಟದಲ್ಲಿ ಕಾರ್ಯಕರ್ತ ರಾಹುಲ್ ಕೃಷ್ಣ ಅಲಿಯಾಸ್ ನಂದು ಎಂಬಾತ ಮೃತಪಟ್ಟಿದ್ದಾನೆ ಎಂಬ ಮಾಹಿತಿ ಬಂದಿದೆ.
ಆರೆಸ್ಸೆಸ್ ಕಾರ್ಯಕರ್ತನ ಹತ್ಯೆ ಖಂಡಿಸಿ 12 ಗಂಟೆಗಳ ಆಲಪ್ಪುಳ ಜಿಲ್ಲಾಯಾದ್ಯಂತ ಬಂದ್ ಆಚರಿಸಿ, ಪ್ರತಿಭಟನೆ ನಡೆಸಲು ಬಿಜೆಪಿ ಕರೆ ನೀಡಿದೆ. ಘಟನೆಯನ್ನು ಕೇರಳ ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ತೀವ್ರವಾಗಿ ಖಂಡಿಸಿದ್ದಾರೆ.
ಈ ಘಟನೆಯಲ್ಲಿ ಮೂರು ಆರೆಸ್ಸೆಸ್ ಕಾರ್ಯಕರ್ತರು ಹಾಗೂ ಆರು ಮಂದಿ ಎಸ್ಡಿಪಿಐ ಕಾರ್ಯಕರ್ತರು ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆ ಬಳಿಕ ಹೆಚ್ಚುವರಿ ಪೊಲೀಸ್ ನಿಯೋಜಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ 6 ಮಂದಿ ಎಸ್ಡಿಪಿಐ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.
''ಬುಧವಾರದಂದು ಎಸ್ಡಿಪಿಐ ಕಾರ್ಯಕರ್ತರು ದೇಣಿಗೆ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದರು. ಈ ಬಗ್ಗೆ ಆರೆಸ್ಸೆಸ್ ಕಾರ್ಯಕರ್ತರು ಪ್ರಶ್ನಿಸಿದಾಗ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದಾರೆ ಎಂದು ತಿಳಿದು ಬಂದಿದೆ. ಪರಿಸ್ಥಿತಿ ಈಗ ಶಾಂತವಾಗಿದೆ'' ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.