ಕೇರಳ ಮಾಡೆಲ್ಗಳ ಕಾರು ಅಪಘಾತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ತಿರುವನಂತಪುರಂ ನವೆಂಬರ್ 14: ಎರಡು ವಾರಗಳ ಹಿಂದೆ ಕೊಚ್ಚಿಯಲ್ಲಿ ನಡೆದಿದ್ದ ಮಿಸ್ ಸೌತ್ ಇಂಡಿಯಾ ಹಾಗೂ ಮಾಜಿ ಮಿಸ್ ಕೇರಳ ಆನ್ಸಿ ಕಬೀರ್, ಮಾಜಿ ಮಿಸ್ ಕೇರಳ ರನ್ನರ್ ಅಪ್ ಅಂಜನಾ ಶಾಜಹಾನ್ ಅವರ ಆಕಸ್ಮಿಕ ಸಾವಿನ ರಹಸ್ಯ ಪೊಲೀಸರು ಬಗೆದಷ್ಟು ಆಳವಾಗಿದೆ. ಸಿಸಿಟಿವಿ ದೃಶ್ಯಗಳ ಬಗ್ಗೆ ಮಹತ್ವದ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ಇಬ್ಬರು ಮಾಡೆಲ್ಗಳು ಹೋಗುತ್ತಿದ್ದ ಕಾರನ್ನು ಆಡಿ(Audi) ಕಾರೊಂದು ಅಡ್ಡ ಹಾಕಿದ್ದು ಮೊನ್ನೆಯಷ್ಟೇ ಸಿಸಿಟಿವಿ ದೃಶ್ಯಗಳ ಮೂಲಕ ಪೊಲೀಸರಿಗೆ ಲಭ್ಯವಾಗಿತ್ತು. ಈ ಆಡಿ ಕಾರು ಡಿಜೆ ಪಾರ್ಟಿ ಬಳಿಕ ಕೊಚ್ಚಿ ಹೋಟೆಲ್ನಿಂದ ಮಾಡೆಲ್ಗಳ ಕಾರನ್ನು ಹಿಂಬಾಲಿಸಿತ್ತು ಎನ್ನುವ ಮಾಹಿತಿ ಸದ್ಯ ಲಭ್ಯವಾಗಿದೆ. ಈ ಬಗ್ಗೆ ಮಾಡೆಲ್ಗಳ ಕಾರು ಚಾಲಕ ಅಬ್ದುಲ್ ರೆಹಮಾನ್ ನೀಡಿದ ದೂರಿನ ಮೇರೆಗೆ ಹಿಂಬಾಲಿಸಿದ ಆಡಿ ಕಾರು ಚಾಲಕ ಸೈಜುಗೆ ಸಮನ್ಸ್ ನೀಡಲಾಗಿದೆ.
ಘಟನೆ ನಡೆದ ಸಂದರ್ಭದಲ್ಲಿ ಮಾಡೆಲ್ಗಳ ಕಾರು ಹಿಂಬಾಲಿಸಿದ ಆಡಿ ಕಾರ್ನಲ್ಲಿದ್ದ ಇನ್ನೊಬ್ಬ ವ್ಯಕ್ತಿ ಕಾರಿನಿಂದ ಕೆಳಗಿಳಿದು ದೂರದಿಂದ ಸ್ಥಳವನ್ನು ವೀಕ್ಷಿಸಿದ್ದಾನೆ ಎನ್ನುವ ಮಾಹಿತಿ ಕೂಡ ಪೊಲೀಸರಿಗೆ ಸಿಕ್ಕಿದೆ. ಇದರ ಹಿಂದೆ ಹೋಟೆಲ್ ಮಾಲೀಕನ ಕೈವಾಡವಿರಬಹುದು ಎನ್ನುವ ಅನುಮಾನ ಮೂಡಿದೆ. ಹಿಂಬಾಲಿಸಿದ ಗ್ಯಾಂಗ್ಗೂ ಹೋಟೆಲ್ ಮಾಲೀಕನಿಗೂ ಸಂಬಂಧವಿರುವಂತೆ ಮೇಲ್ನೋಟಕ್ಕೆ ತಿಳಿದು ಬಂದಿದೆ. ಯಾಕೆಂದರೆ ಘಟನೆ ನಡೆದ ಬಳಿಕ ಡಿಜೆ ಪಾರ್ಟಿಯ ಸಿಸಿಟಿವಿ ದೃಶ್ಯಗಳು ಕಾಣೆಯಾಗಿವೆ. ಇದನ್ನು ಹೋಟೆಲ್ ಮಾಲೀಕನೇ ಅಳಿಸಿ ಹಾಕಿರುವ ಶಂಕೆ ದಟ್ಟವಾಗಿದೆ. ಅಪಘಾತ ನಡೆದ ಸುತ್ತಲು ಸಿಸಿಟಿವಿ ದೃಶ್ಯಗಳಿಂದ ಮಾಡೆಲ್ಗಳ ಕಾರನ್ನು ಆಡಿ ಕಾರ್ ಹಿಂಬಾಲಿಸಿರುವುದು ಗೊತ್ತಾಗಿದೆ.
ತನಿಖೆಯ ಮೇಲ್ವಿಚಾರಣೆ ನಡೆಸುತ್ತಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಾರ್ಟಿ ನಡೆದಿದ್ದು ನಿಜ. ಆದರೆ ಭಾಗವಹಿಸಿದ ಕೆಲವರು ಮತ್ತು ಹೋಟೆಲ್ ಮಾಲೀಕರು ನೀಡಿದ ವಿವರಣೆಗಳು ಸತ್ಯಾಂಶಕ್ಕೆ ಹತ್ತಿರವಾಗಿಲ್ಲ ಎಂದು ಹೇಳಿದರು. ಪೊಲೀಸರು ಹೋಟೆಲ್ಗೆ ಸೀಲ್ ಹಾಕಿದ್ದಾರೆ ಆದರೆ ಪಾರ್ಟಿಯ ಸಿಸಿಟಿವಿ ದೃಶ್ಯಗಳು ನಂತರ ಕಾಣೆಯಾಗಿದೆ. ಹೀಗಾಗಿ ಪಾರ್ಟಿ ಪ್ರದೇಶದ ದೃಶ್ಯಗಳನ್ನು ನಿರ್ಮಿಸಲು ಹೋಟೆಲ್ ಮ್ಯಾನೇಜ್ಮೆಂಟ್ಗೆ ಅಲ್ಟಿಮೇಟಮ್ ನೀಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಕಾರು ಚಾಲಕ ರೆಹಮಾನ್ ಅವರ ವಿರುದ್ಧ ಪೊಲೀಸರು ದುಡುಕಿನ ಮತ್ತು ನಿರ್ಲಕ್ಷ್ಯದ ಕೇಸ್ನೊಂದಿಗೆ ಬಂಧಿಸಿದ್ದಾರೆ. ಅವರ ಹೇಳಿಕೆಗಳು ಸಹ ಘಟನೆಗೆ ವಿರೋಧಾತ್ಮಕವಾಗಿವೆ. ಜೊತೆಗೆ ಆಡಿ ಕಾರ್ ಚಾಲಕ ಏನನ್ನೋ ಮರೆಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕಂಡುಬಂದಿದೆ.
ಹೀಗಾಗಿ "ನಾವು ತಡರಾತ್ರಿಯ ಈವೆಂಟ್ನಲ್ಲಿ ಭಾಗವಹಿಸಿದ ಎಲ್ಲರನ್ನೂ ಪ್ರಶ್ನಿಸಲು ಪ್ರಾರಂಭಿಸಿದ್ದೇವೆ. ಒಂದೆರಡು ದಿನಗಳಲ್ಲಿ ನಮಗೆ ಸ್ಪಷ್ಟ ಚಿತ್ರಣ ಸಿಗುತ್ತದೆ. ತಪ್ಪು ನಡೆದಿರುವುದು ಮೇಲ್ನೋಟಕ್ಕೆ ನಿಜ' ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿ ಹೇಳಿದ್ದಾರೆ. ಚಾಲಕ ಈಗ ನ್ಯಾಯಾಂಗ ಬಂಧನದಲ್ಲಿದ್ದು, ನಂತರ ಪೊಲೀಸರು ಆತನನ್ನು ಕಸ್ಟಡಿಗೆ ಪಡೆಯಲಿದ್ದಾರೆ ಎಂದು ಅವರು ಹೇಳಿದರು.
ಘಟನೆ ನಡೆದಿದ್ದು ಯಾವಾಗ?
ನವೆಂಬರ್ 1 ಸೋಮವಾರ ಮುಂಜಾನೆ ಕೊಚ್ಚಿಯ ವೈಟ್ಟಿಲ್ಲಾದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಿಸ್ ಸೌತ್ ಇಂಡಿಯಾ ಹಾಗೂ ಮಾಜಿ ಮಿಸ್ ಕೇರಳ ಆನ್ಸಿ ಕಬೀರ್, ಮಾಜಿ ಮಿಸ್ ಕೇರಳ ರನ್ನರ್ ಅಪ್ ಅಂಜನಾ ಶಾಜಹಾನ್ ನಿಧನರಾಗಿದ್ದರು. ಅವರು ಪ್ರಯಾಣಿಸುತ್ತಿದ್ದ ಕಾರು, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ತಿರುಗಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಮಾಡೆಲ್ಗಳು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಸೋಮವಾರ ಮಧ್ಯರಾತ್ರಿ 1.30 ರ ಸುಮಾರಿಗೆ ಎನ್ಎಚ್ 66 ರ ವೈಟಿಲ್ಲಾ-ಎಡಪ್ಪಲ್ಲಿ ಮಾರ್ಗದ ಚಕ್ಕರಪರಂಬು ಬಳಿ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಗುರುತು ಹಿಡಿಯಲಾಗದಷ್ಟು ನಜ್ಜುಗುಜ್ಜಾಗಿತ್ತು. ಗಂಭೀರ ಗಾಯಗೊಂಡ ಇಬ್ಬರನ್ನೂ ಎರ್ನಾಕುಲಂ ಮೆಡಿಕಲ್ ಸೆಂಟರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ದ್ವಿಚಕ್ರ ವಾಹನದಲ್ಲಿದ್ದ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಂಗಡಿಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕಾರು ಅತಿವೇಗದಲ್ಲಿ ಚಲಿಸುತ್ತಿತ್ತು, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆನ್ಸಿ 2019 ರಲ್ಲಿ ಮಿಸ್ ಕೇರಳ ಪ್ರಶಸ್ತಿಯನ್ನು ಗೆದ್ದಿದ್ದರು ಮತ್ತು ಅಂಜನಾ ಈವೆಂಟ್ನಲ್ಲಿ ರನ್ನರ್ ಅಪ್ ಆಗಿದ್ದರು. ಈ ವರ್ಷದ ಆಗಸ್ಟ್ನಲ್ಲಿ ಆನ್ಸಿ ಮಿಸ್ ಸೌತ್ ಇಂಡಿಯಾ ಪ್ರಶಸ್ತಿ ಪಡೆದಿದ್ದರು. ಸುದ್ದಿ ತಿಳಿದ ಎರಡೂ ಮಾಡೆಲ್ಗಳ ಕುಟುಂಬಗಳು ಕೊಚ್ಚಿಗೆ ಧಾವಿಸಿವೆ. ಅನ್ಸಿ ಕಬೀರ್ ತಿರುವನಂತಪುರಂ ಮೂಲದವರಾಗಿದ್ದರೆ, ಅಂಜನಾ ಶಾಜನ್ ಅವರ ಹುಟ್ಟೂರು ತ್ರಿಶೂರ್ ಮೂಲದವರಾಗಿದ್ದಾರೆ. 2019 ರ ಮಿಸ್ ಕೇರಳ ಈವೆಂಟ್ನಲ್ಲಿ ಇಬ್ಬರೂ ಸ್ನೇಹ ಬೆಳೆಸಿದ್ದರು.