ಇದಪ್ಪಾ ಅದೃಷ್ಟ ಅಂದ್ರೆ..! ಆಟೋ ಡ್ರೈವರ್ಗೆ 12 ಕೋಟಿ ರೂಪಾಯಿ ಲಾಟರಿ..!
ತಿರುವನಂತಪುರಂ, ಸೆಪ್ಟೆಂಬರ್ 21: ಜೀವನದಲ್ಲಿ ಏನೇನೋ ಕನಸುಗಳು ಇರ್ತವೆ, ಆದ್ರೆ ಅದನ್ನೆಲ್ಲಾ ಪೂರೈಸಿಕೊಳ್ಳಲು ಕೈಯಲ್ಲಿ ಕಾಸು ಇರಬೇಕು ನೋಡಿ. ಆದ್ರೆ ಅಷ್ಟು ದೊಡ್ಡ ಮೊತ್ತದ ಹಣ ದುಡಿದು ಸಂಪಾದಿಸೋಕೆ ಸ್ವಲ್ಪ ಕಷ್ಟವಾದರೂ, ಕೆಲವರಿಗೆ ಲಕ್ ಸಾಥ್ ಕೊಟ್ಟುಬಿಡುತ್ತೆ. ಹೌದು, ಇಡೀ ದೇಶದ ಗಮನ ಸೆಳೆಯುವ 'ತಿರುವೋಣಂ ಬಂಪರ್' ಲಾಟರಿ ಮತ್ತೆ ಹವಾ ಎಬ್ಬಿಸಿದೆ. ಈ ಬಾರಿ 'ತಿರುವೋಣಂ ಬಂಪರ್' ಲಾಟರಿ ಗೆದ್ದ ಅದೃಷ್ಟಶಾಲಿ ಆಟೋ ಡ್ರೈವರ್ ಆಗಿದ್ದು, ರಾತ್ರೋ ರಾತ್ರಿ ಬಡ ವ್ಯಕ್ತಿ ಕೋಟ್ಯಾಧಿಪತಿ ಆಗಿದ್ದಾನೆ.
12 ಕೋಟಿ ರೂಪಾಯಿ ಮುಖಬೆಲೆಯ ತಿರುವೋಣಂ ಬಂಪರ್ ಲಾಟರಿಯನ್ನು ಎರ್ನಾಕುಲಂ ಮೂಲದ ಜಯಪಾಲನ್ ಗೆದ್ದಿದ್ದಾರೆ.
ಲಾಟರಿ ಹಗರಣ: ಕಿಂಗ್ ಪಿನ್ ಮಾರ್ಟಿನ್ ಗೆ ಸೇರಿದ 595 ಕೋಟಿ ರು ವಶ
ಆಟೋರಿಕ್ಷಾ ಓಡಿಸುತ್ತಾ ಸಂಕಷ್ಟದಲ್ಲಿ ಜೀವನ ಸಾಗಿಸ್ತಿದ್ದ ಜಯಪಾಲನ್ಗೆ ದಿಢೀರ್ ಅದೃಷ್ಟ ಒಲಿದು ಬಂದಿದೆ. ಸಾಕಷ್ಟು ಜನರಿಗೆ ಲಕ್ ತಂದಿರುವ ಮೀನಾಕ್ಷಿ ಲಕ್ಕಿ ಸೆಂಟರ್ನಲ್ಲಿ ಜಯಪಾಲನ್ ಲಾಟರಿ ಖರೀದಿ ಮಾಡಿದ್ದರು ಎನ್ನಲಾಗಿದೆ. 12 ಕೋಟಿ ರೂ. ಮೊತ್ತ ಲಾಟರಿಯಲ್ಲಿ ತೆರಿಗೆ ಎಲ್ಲಾ ಕಳೆದು ಸುಮಾರು 7.4 ಕೋಟಿ ರೂಪಾಯಿ ಜಯಪಾಲನ್ಗೆ ಸಿಗಲಿದೆ.
ಅದೃಷ್ಟ ಬದಲಾಯಿಸಿದ ಲಾಟರಿ
ಲಾಟರಿ ಟಿಕೆಟ್ ಪಡೆದಿದ್ದ ಜಯಪಾಲನ್ಗೆ ತನ್ನ ಟಿಕೆಟ್ ಫ್ಯಾನ್ಸಿ ನಂಬರ್ ಅನ್ನೋದು ತಿಳಿದಿರಲಿಲ್ಲ. ಟಿಕೆಟ್ ಸಂಖ್ಯೆ TE 645465 ಲಾಟರಿ ಗೆದ್ದಿದೆ ಎಂದು ಘೋಷಿಸಲಾಗಿತ್ತು. ವಿಚಾರ ತಿಳಿಯುತ್ತಿದ್ದಂತೆ ಜಯಪಾಲನ್ ಕುಣಿದು ಕುಪ್ಪಳಿಸಿದ್ದಾರೆ. ಅಲ್ಲದೆ ಇಷ್ಟು ದಿನಗಳ ಕಷ್ಟ ಬಗೆಹರಿಯಿತು ಅಂತಾ ಇಡೀ ಕುಟುಂಬ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಕೇರಳದ 'ತಿರುವೋಣಂ ಬಂಪರ್' ಬಡವರಿಗೆ ಒಲಿಯುವ ಅದೃಷ್ಟ ಲಕ್ಷ್ಮೀ ಅಂತಲೇ ಫೇಮಸ್. ಯಾಕಂದ್ರೆ ಈ ಹಿಂದೆ ಕೂಡ ಬಡವರಿಗೇ ಈ ಲಾಟರಿ ಒಲಿದು ಬಂದಿದೆ.
7 ಕೋಟಿ ಒಡೆಯ..!
ಜಯಪಾಲನ್ ಲಾಟರಿಯಲ್ಲಿ 12 ಕೋಟಿ ಗೆದ್ದಿದ್ದರೂ ಕೇವಲ 7 ಕೋಟಿ ಪಡೆಯಲಿದ್ದಾರೆ. ಲಾಟರಿ ಮೇಲೆ 5 ಕೋಟಿ ತೆರಿಗೆ ವಿಧಿಸಲಾಗುತ್ತದೆ. ತೆರಿಗೆ ಪಾವತಿಸಿದ ನಂತರ ಜಯಪಾಲನ್ 7 ಕೋಟಿ ಪಡೆಯಲು ಅರ್ಹರು ಎಂದು ಕೇರಳ ರಾಜ್ಯ ಲಾಟರಿ ನಿರ್ದೇಶನಾಲಯ ಮಾಹಿತಿ ನೀಡಿದೆ. ಕೇರಳದ ತಿರುವನಂತಪುರದಲ್ಲಿ ಲಾಟರಿ ಡ್ರಾ ನಡೆದಿತ್ತು. ಕೇರಳದ ಎಲ್ಲಾ ಲಾಟರಿ ಏಜೆಂಟರ್ಗಳ ಸಮ್ಮುಖದಲ್ಲೇ ಬಂಪರ್ ಡ್ರಾ ಮಾಡಲಾಗಿತ್ತು.
2020ರಲ್ಲಿ ದೇಗುಲದ ಗುಮಾಸ್ತನಿಗೆ ಅದೃಷ್ಟ
2020ರಲ್ಲಿ ತಿರು ಓಣಂ ಲಾಟರಿಯನ್ನು ದೇವಸ್ಥಾನವೊಂದರ ಗುಮಾಸ್ತ ಗೆದ್ದಿದ್ದರು. ಇಡುಕ್ಕಿ ಮೂಲದ ವ್ಯಕ್ತಿಗೆ ಬರೋಬ್ಬರಿ 12 ಕೋಟಿ ಲಾಟರಿ ಹೊಡೆದಿತ್ತು. 24 ವರ್ಷದ ಅನಂತು ವಿಜಯನ್ 12 ಕೋಟಿ ಗೆದಿದ್ದರು. ತೆರಿಗೆ ಎಲ್ಲಾ ಕಡಿತಗೊಂಡು 7.56 ಕೋಟಿ ರು ಅಂತೂ ವಿಜಯನ್ ಕೈಸೇರಿತ್ತು. ಕೇರಳದ ಇಡುಕ್ಕಿಯಲ್ಲಿ ಬಡತನದಲ್ಲೇ ನರಳುತ್ತಿದ್ದ ಅನಂತು ಕುಟುಂಬಕ್ಕೆ ಮನೆ ರಿಪೇರಿ ಮಾಡಿಸಲು ಕೂಡ ಹಣವಿರಲಿಲ್ಲ. ಆದರೆ, ಲಾಟರಿ ಮೂಲಕ ಭಾಗ್ಯದ ಬಾಗಿಲು ತೆರೆದಿದೆ.ಅನಂತು ವಿಜಯನ್ ಕೊಂಡುಕೊಂಡಿದ್ದ 'ತಿರುಓಣಂ ಬಂಪರ್' ಲಾಟರಿ ಟಿಕೆಟ್ (BR 75 TB 173964) ಅನ್ನೇ ಅವರ ತಂದೆ ಕೂಡ ಖರೀದಿ ಮಾಡಿದ್ದರು. ಆದರೆ ಮಗನಿಗೆ ಒಲಿದ ಅದೃಷ್ಟ ಅಪ್ಪನಿಗೆ ಒಲಿದಿರಲಿಲ್ಲ. ಮಗ ಕೋಟಿ ಗೆದ್ದರೆ, ಅಪ್ಪನಿಗೆ ನಯಾಪೈಸೆ ಬಂದಿಲ್ಲ.
ಗಡಿಜಿಲ್ಲೆಗಳಲ್ಲಿ ಲಾಟರಿ ಹುಚ್ಚು
ಕರ್ನಾಟಕ ರಾಜ್ಯದಲ್ಲಿ ಲಾಟರಿಯನ್ನು ನಿಷೇಧಿಸಿದ್ದರೂ ಕೇರಳ ಸರ್ಕಾರ ಲಾಟರಿಯನ್ನು ನಿಷೇಧಿಸದ ಕಾರಣದಿಂದಾಗಿ ಸದ್ದಿಲ್ಲದೆ ಅಲ್ಲಿಂದ ಇಲ್ಲಿಗೆ ಲಾಟರಿ ಟಿಕೆಟ್ ಗಳು ನುಸುಳಿ ಬರುತ್ತಿವೆ.
ಕೇರಳಕ್ಕೆ ಹೊಂದಿಕೊಂಡಂತಿರುವ ದಕ್ಷಿಣ ಕನ್ನಡ, ಕೊಡಗು, ಮೈಸೂರು ಹಾಗೂ ಚಾಮರಾಜನಗರದ ಗಡಿಭಾಗಗಳಿಂದ ನೇರವಾಗಿ ರಾಜ್ಯದೊಳಕ್ಕೆ ಲಾಟರಿ ಟಿಕೆಟ್ ಗಳು ಬರುತ್ತಿದ್ದು ಕೆಲವರು ಅದನ್ನು ಕಾಯಂ ಗ್ರಾಹಕರಿಗೆ ತಲುಪಿಸುವ ಮೂಲಕ ವ್ಯವಹಾರವನ್ನು ಗೌಪ್ಯವಾಗಿ ಮಾಡುತ್ತಿದ್ದಾರೆ. ಪೊಲೀಸರ ಶೋಧ ಕಾರ್ಯಕ್ಕೆ ಸಾರ್ವಜನಿಕರು ಕೂಡ ಸಹಕರಿಸಿ ಲಾಟರಿ ಮಾರಾಟ ಮಾಡುವವರ ವಿರುದ್ಧ ಕ್ರಮಕ್ಕೆ ಸಹಕಾರ ನೀಡುವುದು ಅಗತ್ಯವಾಗಿದೆ.