11.7 ಕೋಟಿ ರೂ ಪಾವತಿ ಸಾಧ್ಯವಿಲ್ಲ ಎಂದ ಪದ್ಮನಾಭಸ್ವಾಮಿ ದೇಗುಲ ಸಮಿತಿ
ನವದೆಹಲಿ, ಫೆಬ್ರುವರಿ 12: ಕೊರೊನಾ ಸೋಂಕಿನ ಕಾರಣದಿಂದಾಗಿ ಭದ್ರತೆ ಹಾಗೂ ನಿರ್ವಹಣಾ ಸಂಬಂಧಿ ವೆಚ್ಚವಾಗಿ ರಾಜ್ಯ ಸರ್ಕಾರಕ್ಕೆ ನೀಡಬೇಕಿದ್ದ 11.7 ಕೋಟಿ ರೂಪಾಯಿಯನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂದು ಕೇರಳದ ಪ್ರಸಿದ್ಧ ಐತಿಹಾಸಿಕ ಅನಂತ ಪದ್ಮನಾಭಸ್ವಾಮಿ ದೇಗುಲದ ತಾತ್ಕಾಲಿಕ ಆಡಳಿತ ಸಮಿತಿ ಸುಪ್ರೀಂ ಕೋರ್ಟ್ಗೆ ಶುಕ್ರವಾರ ತಿಳಿಸಿದೆ.
ಕಳೆದ ವರ್ಷ ಜುಲೈನಲ್ಲಿ ದೇವಸ್ಥಾನದ ನಿರ್ವಹಣೆಗೆ ನ್ಯಾಯಾಲಯ ತಾತ್ಕಾಲಿಕ ಸಮಿತಿ ರಚಿಸಿ, ತಿರುವಾಂಕೂರು ರಾಜ ಮನೆತನದವರು ನಿರ್ವಹಣಾ ವ್ಯವಸ್ಥೆ ಮಾಡುವವರೆಗೂ ಸಮಿತಿ ಮುಂದುವರೆಯುವುದಾಗಿ ತಿಳಿಸಿತ್ತು.
ಆ.26ರಿಂದ ಅನಂತ ಪದ್ಮನಾಭ ಸ್ವಾಮಿ ದರ್ಶನ ಪಡೆಯಿರಿ
ಕೊರೊನಾ ಸೋಂಕಿನ ಕಾರಣದಿಂದಾಗಿ ದೇವಸ್ಥಾನಕ್ಕೆ ದೇಣಿಗೆ ಬಂದಿಲ್ಲ ಎಂದು ಸಮಿತಿ ತಿಳಿಸಿದ್ದು, ಸರ್ಕಾರಕ್ಕೆ ಹಣ ಮರುಪಾವತಿಗೆ ಇನ್ನಷ್ಟು ಕಾಲಾವಕಾಶ ಕೇಳಿದೆ.
ಈ ಬಾರಿ ಯಾವುದೇ ಆದೇಶ ನೀಡುವುದಿಲ್ಲ. ಕೇರಳ ಸರ್ಕಾರ ಈ ಮನವಿ ಪರಿಗಣಿಸಲಿ ಎಂದು ನ್ಯಾಯಾಲಯ ಹೇಳಿದೆ. ದೇವಸ್ಥಾನದ ಹಣಕಾಸು ಪರಿಶೀಲನೆಯು ಸೆಪ್ಟೆಂಬರ್ ನಲ್ಲಿ ನಡೆಯಲಿ ಎಂದು ತಿಳಿಸಿದೆ.
ಕೇರಳದ ಐತಿಹಾಸಿಕ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನ, ನೆಲಮಾಳಿಗೆ ಸಂಪತ್ತು, ದೇಗುಲದ ಆಸ್ತಿ ಹಕ್ಕು ಇಡೀ ದೇಶದ ಗಮನ ಸೆಳೆದ ಪ್ರಕರಣ. ಕಳೆದ ವರ್ಷ ಜುಲೈನಲ್ಲಿ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ ಜಸ್ಟೀಸ್ ಯು.ಯು ಲಲಿತ್ ಹಾಗೂ ಇಂದು ಮಲ್ಹೋತ್ರ ಅವರನ್ನೊಳಗೊಂಡ ನ್ಯಾಯಪೀಠ ಅನಂತ ಪದ್ಮನಾಭಸ್ವಾಮಿ ದೇಗುಲ ತಿರುವಾಂಕೂರು ರಾಜ ಮನೆತನದ ಸುಪರ್ದಿಗೆ ಸೇರಿದ್ದಾಗಿದೆ ಎಂದು ತೀರ್ಪು ನೀಡಿತ್ತು.