ಕೇರಳ ಸಿಎಂ ಪಿಣರಾಯಿ ವಿಜಯನ್ ಮುಂದೆ ಏಳು ಪ್ರಶ್ನೆಗಳನ್ನು ಇರಿಸಿದ ಅಮಿತ್ ಶಾ
ತಿರುವನಂತಪುರಂ, ಮಾರ್ಚ್ 8: ಕೇರಳದಲ್ಲಿ ಕೇಂದ್ರ ತನಿಖಾ ಸಂಸ್ಥೆಗಳು ರಾಜಕೀಯ ಉದ್ದೇಶದೊಂದಿಗೆ ಕಾರ್ಯಾಚರಣೆ ನಡೆಸುತ್ತಿವೆ ಎಂಬ ಸಿಪಿಎಂ ಆರೋಪಕ್ಕೆ ತಿರುಗೇಟು ನೀಡಿರುವ ಗೃಹ ಸಚಿವ ಅಮಿತ್ ಶಾ, ಚಿನ್ನ ಹಾಗೂ ಡಾಲರ್ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಹಲವು ಪ್ರಶ್ನೆಗಳನ್ನು ಎಸೆದಿದ್ದಾರೆ.
ಕೇರಳದಲ್ಲಿ ಬಿಜೆಪಿ ಆಯೋಜಿಸಿದ್ದ 'ವಿಜಯ ಯಾತ್ರೆ'ಯ ಸಮಾರೋಪದಲ್ಲಿ ಮಾತನಾಡಿದ ಅವರು, 'ಕೇರಳ ಮುಖ್ಯಮಂತ್ರಿಗೆ ಕೆಲವು ಪ್ರಶ್ನೆಗಳನ್ನು ಕೇಳಲು ಬಯಸಿದ್ದೇನೆ. ಆ ಪ್ರಶ್ನೆಗಳಿಗೆ ಅವರು ಸಾರ್ವಜನಿಕವಾಗಿ ಉತ್ತರ ನೀಡಲು ಸಿದ್ಧರಿದ್ದಾರೆಯೇ? ಡಾಲರ್ ಮತ್ತು ಚಿನ್ನ ಕಳ್ಳಸಾಗಣೆಯ ಪ್ರಮುಖ ಆರೋಪಿಯು ನಿಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೇ? ಆಕೆಗೆ ನಿಮ್ಮ ಸರ್ಕಾರ ತಿಂಗಳು 3 ಲಕ್ಷ ಸಂಬಳ ನೀಡುತ್ತಿತ್ತೇ?' ಎಂದು ಕೇಳಿದರು.
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಪಿಣರಾಯಿ ವಿಜಯನ್ ಭಾಗಿ: ಆರೋಪಿ ಬಾಯ್ಬಿಟ್ಟ ಸತ್ಯ
'ನಕಲಿ ಪ್ರಮಾಣಪತ್ರಗಳನ್ನು ಹೊಂದಿದ್ದ ಆರೋಪಿಯನ್ನು ಉನ್ನತ ಹುದ್ದೆಗೆ ನಿಮ್ಮ ಮುಖ್ಯ ಕಾರ್ಯದರ್ಶಿ ನೇಮಕ ಮಾಡಿದ್ದು ಸತ್ಯವೇ? ಸರ್ಕಾರದ ವೆಚ್ಚದಲ್ಲಿಯೇ ಆ ಮಹಿಳೆಯನ್ನು ನೀವು ಹಾಗೂ ನಿಮ್ಮ ಮುಖ್ಯ ಕಾರ್ಯದರ್ಶಿ ವಿದೇಶ ಪ್ರಯಾಣಕ್ಕೆ ಕರೆದೊಯ್ದಿದ್ದೀರಾ? ಆರೋಪಿ ಮಹಿಳೆಯು ಮುಖ್ಯಮಂತ್ರಿ ನಿವಾಸದಲ್ಲಿ ಆಗಾಗ ನಿಮ್ಮನ್ನು ಭೇಟಿಯಾಗುತ್ತಿದ್ದರೇ? ಕಳ್ಳಸಾಗಣೆಯ ಚಿನ್ನವನ್ನು ವಶಪಡಿಸಿಕೊಂಡಾಗ ಕಸ್ಟಮ್ಸ್ ಅಧಿಕಾರಿಗಳ ಮೇಲೆ ನಿಮ್ಮ ಕಚೇರಿ ಒತ್ತಡ ಹೇರಿರಲಿಲ್ಲವೇ? ಈ ಎಲ್ಲ ವಿವರಗಳೂ ಇಡಿ ಮತ್ತು ಕಸ್ಟಮ್ಸ್ ತನಿಖೆಯಿಂದ ಬಹಿರಂಗವಾಗಿಲ್ಲವೇ? ಈ ಪ್ರಕರಣದಲ್ಲಿ ಉಂಟಾದ ನಿಗೂಢ ಸಾವನ್ನು ನೀವು ತನಿಖೆ ಮಾಡಿದ್ದಿರಾ?' ಎಂದು ಅಮಿತ್ ಶಾ ಪ್ರಶ್ನಿಸಿದರು.
ಉತ್ತರ ನೀಡಲು ಸಿದ್ಧರಾಗಿ
'ಕೇಂದ್ರದ ಮೇಲೆ ಆರೋಪ ಮಾಡುವ ಬದಲು ಮುಖ್ಯಮಂತ್ರಿ ಈ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧರಾಗಲಿ. ಇತರೆ ಭ್ರಷ್ಟಾಚಾರ ವಿಚಾರಗಳ ಬಗ್ಗೆಯೂ ನನಗೆ ಮಾಹಿತಿ ಬಂದಿದೆ. ಆದರೆ ನಾನು ಮುಖ್ಯಮಂತ್ರಿಯವರನ್ನು ಗೊಂದಲಕ್ಕೊಳಪಡಿಸಲು ಬಯಸುವುದಿಲ್ಲ. ಈ ಪ್ರಶ್ನೆಗಳಿಗೆ ಉತ್ತರ ಬೇಕು' ಎಂದು ಹೇಳಿದರು.
ಕಾಂಗ್ರೆಸ್ ನೀತಿಯೇ ಅರ್ಥವಾಗುತ್ತಿಲ್ಲ
'ಎಲ್ಡಿಎಫ್ ಮತ್ತು ಯುಡಿಎಫ್ ಕೇವಲ ತಮ್ಮ ಮತ ಬ್ಯಾಂಕ್ಗಳ ಬಗ್ಗೆ ಚಿಂತೆಗೊಳಗಾಗಿವೆ. ಸಿಪಿಐ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಎಸ್ಡಿಪಿಐ ಜತೆ ಮೈತ್ರಿ ಮಾಡಿಕೊಂಡಿದೆ. ಕಾಂಗ್ರೆಸ್, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಜತೆ ಒಪ್ಪಂದ ಮಾಡಿಕೊಂಡಿದೆ. ಆದರೆ ಕೇರಳದಲ್ಲಿ ಕಾಂಗ್ರೆಸ್, ಸಿಪಿಎಂ ವಿರುದ್ಧ ಇದೆ. ಆದರೆ ಪಶ್ಚಿಮ ಬಂಗಾಳದಲ್ಲಿ ಈ ಎರಡೂ ಜತೆಗೂಡಿ ಸ್ಪರ್ಧಿಸುತ್ತಿವೆ. ಕೇರಳದಲ್ಲಿ ಕಾಂಗ್ರೆಸ್, ಐಯುಎಂಎಲ್ ಜತೆಗಿದೆ. ಬಂಗಾಳದಲ್ಲಿ ಅವರು ಮುಸ್ಲಿಂ ಮುಖಂಡ ಅಬ್ಬಾಸ್ ಸಿದ್ದಿಕಿ ಜತೆ ಸೆರಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್, ಶಿವಸೇನಾ ಜತೆಗೆ ಇದೆ. ನಂಗೆ ಕಾಂಗ್ರೆಸ್ನ ನೀತಿ ಏನು ಎಂಬುದು ನಿಜಕ್ಕೂ ಅರ್ಥವಾಗುತ್ತಿಲ್ಲ' ಎಂದು ಟೀಕಿಸಿದರು.
ತಮಿಳುನಾಡಿನಲ್ಲಿ ಮೈತ್ರಿ ಸರ್ಕಾರ ಸ್ಥಾಪನೆ ಖಚಿತ: ಅಮಿತ್ ಶಾ
ಭಕ್ತರಿಗೆ ಸರ್ಕಾರದಿಂದ ಕಿರುಕುಳ
ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶದ ಸುತ್ತ ಇರುವ ವಿವಾದ ಉಲ್ಲೇಖಿಸಿದ ಅವರು, ಕಮ್ಯುನಿಸ್ಟ್ ಸರ್ಕಾರವು ಭಕ್ತರಿಗೆ ಕಿರುಕುಳ ನೀಡಿದೆ. ಕಾಂಗ್ರೆಸ್ ಈ ಬಗ್ಗೆ ಮೌನವಾಗಿಯೇ ಇದೆ. ಭಕ್ತರ ಹಿತಾಸಕ್ತಿಗೆ ಅನುಗುಣವಾಗಿ ದೇವಸ್ಥಾನ ನಡೆಯಬೇಕು ಎಂದು ಬಿಜೆಪಿ ಬಯಸಿದೆ' ಎಂದರು.
ಎನ್ಡಿಎ- ನ್ಯೂ ಕೇರಳ ವಿತ್ ಮೋದಿ
'ಎನ್ಡಿಎ- ನ್ಯೂ ಕೇರಳ ವಿತ್ ಮೋದಿ' ಎಂಬ ಚುನಾವಣಾ ಪ್ರಚಾರ ಘೋಷ ವಾಕ್ಯವನ್ನು ಅಮಿತ್ ಶಾ ಬಿಡುಗಡೆ ಮಾಡಿದರು. ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾದ 'ಮೆಟ್ರೋ ಮ್ಯಾನ್' ಇ. ಶ್ರೀಧರನ್ ಈ ಕಾರ್ಯಕ್ರಮದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದರು. 'ಮೂಲಸೌಕರ್ಯ ಅಭಿವೃದ್ಧಿಕಾರ, ನಮ್ಮ ಮೆಟ್ರೋಮ್ಯಾನ್, ದೇಶದ ಅಭಿವೃದ್ಧಿಗಾಗಿ ಬಿಜೆಪಿಯನ್ನು ಆಯ್ಕೆಮಾಡಿಕೊಂಡಿದ್ದಾರೆ' ಎಂದು ಅಮಿತ್ ಶಾ ಶ್ಲಾಘಿಸಿದರು.