ಕೇರಳದಲ್ಲಿ 22,056 ಕೊರೊನಾ ಪ್ರಕರಣಗಳು ಪತ್ತೆ: 12 ಜಿಲ್ಲೆಗಳಿಗೆ ತಜ್ಞರ ತಂಡ
ತಿರುವನಂತಪುರಂ, ಜುಲೈ 28: ಕೇರಳದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಉಲ್ಬಣವಾಗುತ್ತಿದ್ದು, ರಾಜ್ಯದ ಪರಿಸ್ಥಿತಿ ಅರಿಯಲು ಕೇಂದ್ರ ತಜ್ಞರ ತಂಡ ಭೇಟಿ ನೀಡುತ್ತಿದೆ.
ನಾಲ್ಕು ಮಂದಿಯ ತಜ್ಞರ ತಂಡ ಶೀಘ್ರವೇ ಕೇರಳಕ್ಕೆ ಆಗಮಿಸಲಿದ್ದು, ಕೊರೊನಾ ಸೋಂಕು ಹರಡದಂತೆ ತಡೆಯಲು ರಾಜ್ಯ ಆರೋಗ್ಯ ಸಚಿವಾಲಯಕ್ಕೆ ಸಲಹೆ ನೀಡಲಿದೆ. ಕೋವಿಡ್ ಪಾಸಿಟಿವಿಟಿ ದರ ಶೇ.10ಕ್ಕಿಂತ ಹೆಚ್ಚಿರುವ ಸುಮಾರು 12 ಜಿಲ್ಲೆಗಳಿಗೆ ಕೇಂದ್ರ ತಂಡ ಭೇಟಿ ನೀಡುವ ಸಾಧ್ಯತೆ ಇದೆ.
ಕೊರೊನಾ ಲಸಿಕೆ ವಿತರಣೆ, ಸೋಂಕು ಎರಡರಲ್ಲೂ ಕೇರಳ ಮುಂದು
ಕೇರಳ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ, ಬುಧವಾರ 22,056 ಪ್ರಕರಣಗಳು ಪತ್ತೆಯಾಗಿವೆ. ಭಾರತದಲ್ಲಿ 43,654 ಪ್ರಕರಣಗಳು ಕಳೆದ ಒಂದು ದಿನದಲ್ಲಿ ಪತ್ತೆಯಾಗಿವೆ. ಅಂದರೆ ದೇಶದಲ್ಲಿ ಒಟ್ಟು ಪ್ರಕರಣಗಳಲ್ಲಿ ಶೇ.50ರಷ್ಟು ಪ್ರಕರಣಗಳು ಕೇವಲ ಕೇರಳ ರಾಜ್ಯ ಒಂದರಿಂದಲೇ ವರದಿಯಾಗುತ್ತಿದೆ.
ರಾಜ್ಯದಲ್ಲಿ ಒಟ್ಟು 33,27,301 ಪ್ರಕರಣಗಳಿವೆ, ಇದುವರೆಗೂ 16,457 ಮಂದಿ ಮೃತಪಟ್ಟಿದ್ದಾರೆ, ಕಳೆದ ಒಂದು ದಿನದಲ್ಲಿ 131 ಮಂದಿ ಸಾವನ್ನಪ್ಪಿದ್ದಾರೆ. ಕೇರಳ ಕೋವಿಡ್ ತಜ್ಞರ ಸಮಿತಿ ಸದಸ್ಯ ಡಾ. ಅನಿಶ್ ಮಾತನಾಡಿ ಕೇರಳಕ್ಕೆ ಸಾಕಷ್ಟು ಕೊರೊನಾ ಲಸಿಕೆಯ ಅಗತ್ಯವಿದ್ದು, ಶೀಘ್ರವೇ ಲಸಿಕೆಯನ್ನು ಒದಗಿಸುವಂತೆ ಮನವಿ ಮಾಡಿದ್ದಾರೆ.
ಮಂಗಳವಾರ ದೊರೆತಿರುವ ಮಾಹಿತಿ ಪ್ರಕಾರ ಒಟ್ಟು 7 ರಾಜ್ಯದ 22 ಜಿಲ್ಲೆಗಳಲ್ಲಿ ಕಳೆದ 4 ವಾರದಿಂದ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚುತ್ತಿವೆ.
ಕಳೆದ 24 ಗಂಟೆಗಳಲ್ಲಿ 43,654 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 41,678 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆಯಲ್ಲಿಯೂ ಏರಿಕೆ ಕಂಡುಬಂದಿದ್ದು, ಒಂದು ದಿನದ ಅವಧಿಯಲ್ಲಿ 640 ಮಂದಿ ಸಾವನ್ನಪ್ಪಿದ್ದಾರೆ.
ಬುಧವಾರದ ಈ ಅಂಕಿಸಂಖ್ಯೆ ಪ್ರಕಾರ, ಇದುವರೆಗೂ ದೇಶದಲ್ಲಿ ಒಟ್ಟು 3,06,63,147 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 3,99,436 ಆಗಿದೆ. ಇಲ್ಲಿಯವರೆಗೆ ಸೋಂಕಿನಿಂದ 4,22,022 ಮಂದಿ ಸಾವನ್ನಪ್ಪಿದ್ದಾರೆ.
ಮಂಗಳವಾರ 29,689 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದವು, ಒಂದೇ ದಿನದ ಅಂತರದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಈ ನಡುವೆ ಕೊರೊನಾ ಸೋಂಕಿನ ಕುರಿತು ಮಂಗಳವಾರ ಕೇಂದ್ರ ಎಚ್ಚರಿಕೆ ನೀಡಿದೆ.