ಟೇಕ್ ಆಫ್ ಆಗಿ ಕೆಲವೇ ನಿಮಿಷಗಳಲ್ಲಿ ವಾಪಸಾದ ಏರ್ ಇಂಡಿಯಾ ವಿಮಾನ
ತಿರುವನಂತಪುರಂ, ಸೆಪ್ಟೆಂಬರ್ 13: ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ಟೇಕ್ ಆಫ್ ಆಗಿ ಕೆಲವೇ ನಿಮಿಷಗಳಲ್ಲಿ ಏರ್ಪೋರ್ಟ್ಗೆ ವಾಪಸಾಗಿರುವ ಘಟನೆ ಸೋಮವಾರ ನಡೆದಿದೆ.
ತಿರುವನಂತಪುರಂನಿಂದ ಶಾರ್ಜಾಗೆ 170 ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ವಿಮಾನ ಕೆಲವು ತಾಂತ್ರಿಕ ದೋಷಗಳಿಂದಾಗಿ ವಾಪಸಾಗಿದೆ.
ವಿಮಾನದಲ್ಲಿ ಆರು ಮಂದಿ ಸಿಬ್ಬಂದಿ ಇದ್ದರು, ತಾಂತ್ರಿಕ ದೋಷ ಕಾಣಿಸಿಕೊಂಡಿದ್ದನ್ನು ಗುರುತಿಸಿದ ಅವರು, ವಿಮಾನವನ್ನು ಸುರಕ್ಷಿತವಾಗಿ ತಿರುವನಂತಪುರಂನ ವಿಮಾನ ನಿಲ್ದಾಣದಲ್ಲಿ ಇಳಿಸಿದರು.
ಸೋಮವಾರ ಬೆಳಗ್ಗೆ 7 ಗಂಟೆಗೆ ಘಟನೆ ನಡೆದಿದೆ, ವಿಮಾನ ಟೇಕ್ ಆಫ್ ಆದ ಅರ್ಧಗಂಟೆಯೊಳಗೆ ಪೈಲಟ್ಗಳು ತಾಂತ್ರಿಕ ದೋಷವನ್ನು ಗುರುತಿಸಿದ್ದಾರೆ, ಬಳಿಕ ತಕ್ಷಣ ವಿಮಾನವನ್ನು ತಿರುವನಂತಪುರ ನಿಲ್ದಾಣದಲ್ಲಿ ಇಳಿಸಲು ತೀರ್ಮಾನ ತೆಗೆದುಕೊಂಡಿದ್ದಾರೆ.
ಬಳಿಕ ಪ್ರಯಾಣಿಕರಿಗೆ ಬೇರೆ ವಿಮಾನ ವ್ಯವಸ್ಥೆ ಮಾಡಿ ಕಳುಹಿಸಲಾಯಿತು ಎಂದು ಏರ್ಇಂಡಿಯಾ ಎಕ್ಸ್ಪ್ರೆಸ್ ವಕ್ತಾರರು ಮಾಹಿತಿ ನೀಡಿದ್ದಾರೆ.
ಕೋಳಿಕ್ಕೋಡ್ ವಿಮಾನ ದುರಂತದ ಬಗ್ಗೆ ಮಾಹಿತಿ: ಮಳೆಯಿಂದಾಗಿ ಅಸ್ಪಷ್ಟ ಗೋಚರ ಹಾಗೂ ವಿಂಡ್ಶೀಲ್ಡ್ ವೈಪರ್ನ ಕಾರ್ಯಕ್ಷಮತೆ ಕುಂದಿದ್ದರಿಂದ ಪೈಲಟ್ಗೆ ತೊಂದರೆಯಾಗಿದೆ. ಕಳೆದ ವರ್ಷ ಕೋಳಿಕ್ಕೋಡ್ನ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಅಪಘಾತಕ್ಕೀಡಾಗಲು ಈ ಅಂಶಗಳೇ ಕಾರಣವಾಗಿರಬಹುದು ಎನ್ನಲಾಗಿದೆ.
ಏರ್ಕ್ರಾಫ್ಟ್ ಆಕ್ಸಿಡೆಂಟ್ ಇನ್ವೆಸ್ಟಿಗೇಷನ್ ಬ್ಯೂರೋ ಸಿದ್ಧಪಡಿಸಿರುವ ವರದಿಯಲ್ಲಿ, ವಿಮಾನ ಅಪಘಾತಕ್ಕೀಡಾಗಲು ಕಾರಣವಾಗಿರಬಹುದಾದ ಹಲವು ಅಂಶಗಳನ್ನು ವಿವರಿಸಲಾಗಿದೆ. ಎಸ್ಒಪಿಯಂತೆ ಪೈಲಟ್ ಕಾರ್ಯಾಚರಣೆ ಮಾದಡೇ ಇದ್ದುದು ಕೂಡ ಅಪಘಾತಕ್ಕೆ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮಳೆ ಬೀಳುತ್ತಿದ್ದ ಕಾರಣ ಲ್ಯಾಂಡಿಂಗ್ ವೇಳೆ ಪೈಲಟ್ಗೆ ಸರಿಯಾಗಿ ರನ್ವೇ ಕಾಣಲಿಲ್ಲ, ಲ್ಯಾಂಡಿಂಗ್ಗೆ ಅಗತ್ಯವಿರುವ ಅಂತರ ಹಾಗೂ ಇತರೆ ಅಂಶಗಳ ಕುರಿತು ಇದು ತಪ್ಪು ಗ್ರಹಿಕೆಗೆ ಕಾರಣವಾಯಿತು.
ಏರ್ಇಂಡಿಯಾ ಎಕ್ಸ್ಪ್ರೆಸ್ನ ಈ ನತದೃಷ್ಟ ವಿಮಾನಕಳೆದ ವರ್ಷ ಆಗಸ್ಟ್ 7 ರಂದು ಲ್ಯಾಂಡಿಂಗ್ ಆಗುವ ವೇಳೆ, ರನ್ವೇನಿಂದ ಮುಂದಕ್ಕೆ ಚಲಿಸಿ 110 ಅಡಿ ಆಳದಲ್ಲಿ ಬಿದ್ದು ಮೂರು ಹೋಳಾಗಿತ್ತು.
ಈ ಅಪಘಾತದಲ್ಲಿ ಇಬ್ಬರು ಪೈಲಟ್ ಹಾಗೂ ಮೂರು ಶಿಶುಗಳು ಸೇರಿ 19 ಮಂದಿ ಮೃತಪಟ್ಟಿದ್ದರು. 190 ಮಂದಿ ಪ್ರಯಾಣಿಕರಿದ್ದ ಈ ವಿಮಾನ ದುಬೈನಿಂದ ಹೊರಟಿತ್ತು.
ಅಲ್ಲದೇ, ಪ್ರಮಾಣಿತ ಕಾರ್ಯಾಚರಣೆ ವಿಧಾನದಂತೆ ವಿಮಾನ ಹಾರಾಟದ ಮೇಲೆ ನಿಗಾ ಇಡುವುದು, ಸೂಚನೆಗಳನ್ನು ನೀಡುವುದು ಹಾಗೂ ಕ್ರಮ ಕೈಗೊಳ್ಳುವುದು ಸಾಧ್ಯವಾಗಲಿಲ್ಲ. ಈ ಎಲ್ಲಾ ಅಂಶಗಳು ಅವಘಡಕ್ಕೆ ಕಾರಣವಾಗಿವೆ.