ಪಂಚ ರಾಜ್ಯಗಳ ಚುನಾವಣೆಯ ಹೊತ್ತಿನಲ್ಲಿ ಕಾಂಗ್ರೆಸ್ಸಿಗೆ ಭಾರೀ ಆಘಾತ
ಶತಮಾನಗಳ ಇತಿಹಾಸವಿರುವ ರಾಷ್ಟ್ರೀಯ ಪಕ್ಷವೊಂದು ದಿನದಿಂದ ದಿನಕ್ಕೆ ಸೊರಗುತ್ತಿರುವುದಕ್ಕೆ ಕಾರಣ ಏನು? ಪಕ್ಷದ ಬಲವೃದ್ದನೆಗೆ ಏನು ಕ್ರಮ ತೆಗೆದುಕೊಳ್ಳಬೇಕು ಎಂದು ಜಿ-23 ಎಂದು ಗುರುತಿಸಿಕೊಂಡಿರುವ ಕಾಂಗ್ರೆಸ್ಸಿನ ಹಿರಿಯ ನಾಯಕರು ಹೈಕಮಾಂಡ್ ಗೆ ಸಾರಿಸಾರಿ ಬುದ್ದಿ ಹೇಳಿದ್ದರು.
ಕೇರಳ ಸೇರಿದಂತೆ ಐದು ರಾಜ್ಯಗಳ ಅಸೆಂಬ್ಲಿ ಚುನಾವಣೆ ಇನ್ನೇನು ಕೆಲವು ದಿನಗಳಲ್ಲಿ ನಡೆಯಲಿದೆ. ಕಾಂಗ್ರೆಸ್ಸಿಗೆ ಗೆಲ್ಲಬಹುದು ಎನ್ನುವ ನಿರೀಕ್ಷೆ ಇರುವ ರಾಜ್ಯವೆಂದರೆ ಅದು ಕೇರಳ. ಯಾಕೆಂದರೆ, ಅಲ್ಲಿ ಒಂದು ಬಾರಿ ಯುಡಿಎಫ್ ಇನ್ನೊಂದು ಬಾರಿ ಎಲ್ ಡಿಎಫ್ ಅಧಿಕಾರಕ್ಕೆ ಬರುವುದು ವಾಡಿಕೆಯಂತೆ ನಡೆದುಕೊಂಡು ಬರುತ್ತಿದೆ.
ಚುನಾವಣೆ ಸಮೀಪದಲ್ಲಿಯೇ ಪಕ್ಷಕ್ಕೆ ಗುಡ್ಬೈ ಹೇಳಿದ ಚಾಕೋ: ಕಾಂಗ್ರೆಸ್ಗೆ ಮುಜುಗರ
ಕೇರಳದಲ್ಲಿ ಒಗ್ಗಟ್ಟಾಗಿ ಚುನಾವಣಾ ತಂತ್ರ ರೂಪಿಸಿ ಮತದಾರರ ಬಳಿ ಹೋದರೆ ಕಾಂಗ್ರೆಸ್ ಮೈತ್ರಿಕೂಟ ಮತ್ತೆ ಇಲ್ಲಿ ಅಧಿಕಾರಕ್ಕೇರುವ ಸಾಧ್ಯತೆಯಿಲ್ಲದಿಲ್ಲ. ಆದರೆ, ಸಿಕ್ಕ ಈ ಗೋಲ್ಡನ್ ಚಾನ್ಸ್ ಅನ್ನು ಕಾಂಗ್ರೆಸ್ ತಾನಾಗಿಯೇ ಹಾಳು ಮಾಡಿಕೊಳ್ಳುತ್ತಿದೆಯೇ ಎನ್ನುವ ಪ್ರಶ್ನೆ ಎದ್ದೇಳಲು ಹಲವು ಕಾರಣಗಳಿವೆ.
ಕೇರಳದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಕಾಂಗೆಸ್ಸಿಗೆ ಹಿನ್ನಡೆಯಾಗುತ್ತಿರುವುದಕ್ಕೆ ಕಾರಣ, ಆ ಪಕ್ಷದ ನಾಯಕತ್ವ. ಯಾರು ಪಕ್ಷವನ್ನು ಬಲಪಡಿಸಬೇಕೋ ಅವರ ವಿರುದ್ದವೇ ಹಲವು ಹಿರಿಯ ಮುಖಂಡರು ಅಪಸ್ವರನ್ನು ಎತ್ತುತ್ತಿರುವುದು.
ಕೇರಳದಲ್ಲಿ ಎಲ್ಡಿಎಫ್- ಯುಡಿಎಫ್ ಜಟಾಪಟಿ; ಸಿಎಂ ಸ್ಥಾನಕ್ಕೆ ಪಿಣರಾಯಿ ಸೂಕ್ತ!
ಸಿಂಧಿಯಾ ಅವರಂತಹ ಯುವನಾಯಕನಿಗೆ ಕಾಂಗ್ರೆಸ್ ಹೈಕಮಾಂಡ್ ಬೆಲೆಕೊಡಲಿಲ್ಲ
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಕಷ್ಟಪಟ್ಟು ಅಧಿಕಾರಕ್ಕೆ ಬಂತು. ಆದರೆ, ಅಲ್ಲಿ ದಿಗ್ವಿಜಯ್ ಸಿಂಗ್, ಕಮಲ್ ನಾಥ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಎನ್ನುವ ಬಣಗಳಿದ್ದವು. ಸಿಂಧಿಯಾ ಅವರಂತಹ ಯುವನಾಯಕನಿಗೆ ಕಾಂಗ್ರೆಸ್ ಹೈಕಮಾಂಡ್ ಬೆಲೆಕೊಡಲಿಲ್ಲ. ಇದರ ಫಲಿತಾಂಶ ಅಲ್ಲಿನ ಕಾಂಗ್ರೆಸ್ ಸರಕಾರ ಪತನಗೊಂಡಿದ್ದು ಒಂದು ಕಡೆಯಾದರೆ, ಸಿಂಧಿಯಾ ಅವರನ್ನು ಕಾಂಗ್ರೆಸ್ ಕಳೆದುಕೊಂಡಿತು. ಇದೇ ರೀತಿಯ ಬಣ ರಾಜಕೀಯ ಕೇರಳ ಕಾಂಗ್ರೆಸ್ಸಿನಲ್ಲೂ ನಡೆಯುತ್ತಿದೆ.
ಪಿ.ಸಿ.ಚಾಕೊ ರಾಜೀನಾಮೆ ಪಕ್ಷಕ್ಕೆ ಭಾರೀ ಹೊಡೆತ
ಕೇರಳದಲ್ಲಿ ಏಪ್ರಿಲ್ ಆರರಂದು ಒಂದೇ ಹಂತದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಇಲ್ಲಿ ಕಮ್ಯೂನಿಸ್ಟರಿಗೆ ಪೈಪೋಟಿ ನೀಡಲು ಶಕ್ತವಾಗಿರುವುದು ಕಾಂಗ್ರೆಸ್ ಮೈತ್ರಿಕೂಟ ಮಾತ್ರ. ಬಿಜೆಪಿ ಇಲ್ಲಿ ತನ್ನ ನೆಲೆಯನ್ನು ಭದ್ರಗೊಳಿಸುತ್ತಿದೆಯಾದರೂ, ಎರಡು ಮೈತ್ರಿಕೂಟಕ್ಕೆ ಸಡ್ಡು ಹೊಡೆಯುವಷ್ಟು ಇನ್ನೂ ಶಕ್ತವಾಗಿಲ್ಲ. ಪರಿಸ್ಥಿತಿ ಹೀಗಿರುವಾಗ, ಕೇರಳ ಕಾಂಗ್ರೆಸ್ ಘಟಕದ ಅಧ್ಯಕ್ಷ ಪಿ.ಸಿ.ಚಾಕೊ ರಾಜೀನಾಮೆ ನೀಡಿರುವುದು ಪಕ್ಷಕ್ಕೆ ಭಾರೀ ಹೊಡೆತವನ್ನು ನೀಡಿದೆ.
ರಮೇಶ್ ಚಿನ್ನಿತ್ತಾಲ ಮತ್ತು ಉಮ್ಮನ್ ಚಾಂಡಿ ಬಣ
ಚಾಕೊ ಅವರಿಗೆ ಕಾರ್ಯಕರ್ತರ ವಲಯದಲ್ಲಿ ಅಷ್ಟೇನೂ ಹೆಸರಿಲ್ಲದಿದ್ದರೂ, ಅವರು ರಾಜೀನಾಮೆಗೆ ನೀಡಿರುವ ಕಾರಣ, ಪಕ್ಷದಲ್ಲಿನ ಗುಂಪುಗಾರಿಕೆ. ರಮೇಶ್ ಚಿನ್ನಿತ್ತಾಲ ಮತ್ತು ಉಮ್ಮನ್ ಚಾಂಡಿ ಬಣದಿಂದ ಪಕ್ಷಕ್ಕೆ ಮುಜುಗರವಾಗುತ್ತಿದೆ ಎಂದು ಹೇಳಿರುವುದು ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆಯೇ ಹೆಚ್ಚು. ರಾಜಕೀಯ ವಿಶ್ಲೇಷಕರು ಕೂಡಾ ಇದೇ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ.
ಚಾಕೊ ಹೇಳಿಕೆಯನ್ನು ಕಾಂಗ್ರೆಸ್ ಹೈಕಮಾಂಡ್ ಸೀರಿಯಸ್ಸಾಗಿ ತೆಗೆದುಕೊಳ್ಳಲಿ
ಇದರ ಜೊತೆಗೆ, ಕಾಂಗ್ರೆಸ್ ಹೈಕಮಾಂಡ್ ಅನ್ನು ಚಾಕೊ ದೂರಿರುವುದು ಪಕ್ಷಕ್ಕಾಗುತ್ತಿರುವ ಹಿನ್ನಡೆ. ಆಂತರಿಕ ಶಿಸ್ತನ್ನು ಕಾಪಾಡಿಕೊಂಡು, ಜನರ ಮುಂದೆ ಹೋಗಿದ್ದಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಬಹುದು ಎನ್ನುವ ಲೆಕ್ಕಾಚಾರದ ನಡುವೆ, ಸದ್ಯದ ಈ ಬೆಳವಣಿಗೆ ಕಾಂಗ್ರೆಸ್ಸಿಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ. ಚಾಕೊ ಅವರ ಹೇಳಿಕೆಯನ್ನು ಕಾಂಗ್ರೆಸ್ ಹೈಕಮಾಂಡ್ ಇನ್ನಾದರೂ ಸೀರಿಯಸ್ಸಾಗಿ ತೆಗೆದುಕೊಂಡರೆ, ಕೇರಳದಲ್ಲಿ ಗೆಲ್ಲುವ ಆಶಾಭಾವನೆಯನ್ನು ಕಾಂಗ್ರೆಸ್ ಉಳಿಸಿಕೊಳ್ಳಬಹುದು ಎನ್ನುವುದು ಕಾರ್ಯಕರ್ತರ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.