ಮಾಸಿಕ ದರ್ಶನಕ್ಕೆ ಮಂಗಳವಾರ ತೆರೆಯಲಿದೆ ಅಯ್ಯಪ್ಪ ದೇಗುಲ, ಮತ್ತೆ ಆತಂಕ
ತಿರುವನಂತಪುರಂ, ಫೆಬ್ರವರಿ 11: ಪ್ರತಿ ತಿಂಗಳ ವಾಡಿಕೆಯಂತೆ ಮಂಗಳವಾರದಂದು ಕೇರಳದಲ್ಲಿರುವ ಶಬರಿಮಲೆ ಅಯ್ಯಪ್ಪ ದೇಗುಲ ಬಾಗಿಲು ತೆರೆಯಲು ಸಿದ್ಧತೆ ನಡೆಸಲಾಗಿದ್ದು, ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಈಚೆಗಷ್ಟೇ ಮುಕ್ತಾಯವಾದ ವಾರ್ಷಿಕ ಯಾತ್ರೆಯ ವೇಳೆ, ಎಲ್ಲ ವಯಸ್ಸಿನ ಮಹಿಳೆಯರಿಗೆ ಅಯ್ಯಪ್ಪ ದೇಗುಲಕ್ಕೆ ಪ್ರವೇಶ ನೀಡುವುದಕ್ಕೆ ಸಂಪ್ರದಾಯವಾದಿಗಳು ವಿರೋಧ ವ್ಯಕ್ತಪಡಿಸಿದ್ದರು.
ಫೆಬ್ರವರಿ 12ರಿಂದ 17ನೇ ತಾರೀಕಿನ ತನಕ ಐದು ದಿನಗಳ ಕಾಲ ಮಾಸಿಕ ಪೂಜೆಗಾಗಿ ಅಯ್ಯಪ್ಪ ದೇವಾಲಯವನ್ನು ತೆರೆಯಲಾಗುತ್ತದೆ ಎಂದು ದೇವಾಲಯದ ಆಡಳಿತ ಮಂಡಳಿಯವರು ಸೋಮವಾರ ತಿಳಿಸಿದ್ದಾರೆ.
ಶಬರಿಮಲೆ ತೀರ್ಪು: ಸುಪ್ರೀಂ ನಿಲುವಿಗೆ ಬದ್ಧ ಎಂದ ಅಯ್ಯಪ್ಪ ದೇಗುಲ
ಕಲಭಾಭಿಷೇಕಮ್, ಸಹಸ್ರ ಕಳಸ ಮತ್ತು ಲಕ್ಷಾರ್ಚನವನ್ನು ಈ ಐದು ದಿನಗಳಲ್ಲಿ ಮಾಡಲಾಗುತ್ತದೆ. ಮಂಗಳವಾರ ಸಂಜೆ ದೇವಾಲಯದ ಮುಖ್ಯ ಅರ್ಚಕರಾದ ವಾಸುದೇವನ್ ನಂಬೂದರಿ ಬಾಗಿಲು ತೆರೆಯಲಿದ್ದಾರೆ.
ದೇವಾಲಯದ ಬಾಗಿಲು ತೆರೆಯುತ್ತಿರುವುದರಿಂದ ಶಬರಿಮಲೆ ಸುತ್ತ ಮುತ್ತ ಕೇರಳ ರಾಜ್ಯ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. ಎಲ್ಲ ವಯೋಮಾನದ ಮಹಿಳೆಯರ ಪ್ರವೇಶವನ್ನು ವಿರೋಧಿಸಿ, ಪ್ರತಿಭಟನೆ ನಡೆಸಬಹುದು ಎಂಬ ಮುಂಜಾಗ್ರತೆಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಭಕ್ತರಿಗೆ ಯಾವುದೇ ಅನನುಕೂಲ ಆಗಬಾರದು ಎಂಬ ಕಾರಣಕ್ಕೆ ನೀಲಕ್ಕಲ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಈಗಾಗಲೇ ಪೊಲೀಸರು ಕೆಲವು ನಿರ್ಬಂಧ ವಿಧಿಸಿದ್ದಾರೆ.
ಶಬರಿಮಲೆ ವಿವಾದ: ಗಂಡನ ಮನೆಗೆ ಮರಳಿದ ಕನಕದುರ್ಗಾ
ಎಲ್ಲ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ಬಂದ ನಂತರದ ತಿಂಗಳಲ್ಲಿ, ತುಲಾ ಮಾಸದ ಪೂಜೆ ವೇಳೆ ಭಾರೀ ಪ್ರತಿಭಟನೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
ಫೆಬ್ರವರಿ 12ನೇ ತಾರೀಕು ಬೆಳಗ್ಗೆ ಹತ್ತು ಗಂಟೆ ನಂತರವೇ ನೀಲಕ್ಕಲ್ ನಿಂದ ಪಂಬಾಗೆ ಹಾಗೂ ಅಯ್ಯಪ್ಪ ಸನ್ನಿಧಾನಕ್ಕೆ ತೆರಳಲು ಅವಕಾಶ ಮಾಡಲಾಗುವುದು. ಈ ಮೊದಲು ದೇವಾಲಯಕ್ಕೆ ಹತ್ತರಿಂದ ಐವತ್ತು ವರ್ಷದ ಮಹಿಳೆಯರಿಗೆ ಪ್ರವೇಶ ಇರಲಿಲ್ಲ.