ವಿಧಾನಸಭೆ ಚುನಾವಣೆ ಘೋಷಣೆ ಬಳಿಕ ಕೇಂದ್ರ ತನಿಖಾ ಸಂಸ್ಥೆಗಳ ದಾಳಿ ತೀವ್ರಗೊಂಡಿದೆ: ಪಿಣರಾಯಿ ವಿಜಯನ್
ತಿರುವನಂತಪುರಂ, ಮಾರ್ಚ್ 07: ಕೇಂದ್ರ ಚುನಾವಣಾ ಆಯೋಗವು ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಿಸಿದ ಬಳಿಕ ಕೇಂದ್ರ ತನಿಖಾ ಸಂಸ್ಥೆಗಳ ದಾಳಿ ತೀವ್ರಗೊಂಡಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ.
ಒಂದೆಡೆ ಪಿಣರಾಯಿ ವಿಜಯನ್ ರಾಜೀನಾಮೆ ನೀಡಬೇಕು ಎನ್ನುವ ಕೂಗು ಕೇಳಿಬರುತ್ತಿದೆ. ಇನ್ನೊಂದೆಡೆ ಬಿಜೆಪಿ ಹಾಗೂ ಕಾಂಗ್ರೆಸ್ ಕೇರಳ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬೋರ್ಡ್ನ್ನು ನಿರ್ಣಾಮ ಮಾಡಲು ಪಣ ತೊಟ್ಟಂತಿದೆ ಎಂದು ವಿಜಯನ್ ಹೇಳಿದ್ದಾರೆ.
ಪಿಣರಾಯಿ ವಿಜಯನ್ ರಾಜೀನಾಮೆಗೆ ಸದಾನಂದ ಗೌಡ ಆಗ್ರಹ
ಚುನಾವಣೆಗೆ ಬೆರಳೆಣಿಕೆ ದಿನ ಮಾತ್ರ ಬಾಕಿ ಇರುವಾಗಲೇ ಪಿಣರಾಯಿ ಮೇಲೆ ಈ ಆರೋಪ ಕೇಳಿ ಬಂದಿದ್ದು, ವಿಪಕ್ಷಗಳ ಕೈಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ. ಅಲ್ಲದೇ ಇದು ಎಡ ಪಕ್ಷಗಳ ಚುನಾವಣಾ ಗೆಲುವಿಗೆ ಹಿನ್ನಡೆಯಾಗುವ ಎಲ್ಲಾ ಸಾಧ್ಯತೆಗಳಿವೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಯುಎಇ ಮಾಜಿ ರಾಯಭಾರಿ ಸೇರಿಕೊಂಡು ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಚಿನ್ನ ಕಳ್ಳ ಸಾಗಣಿಕೆ ಪ್ರಕರಣದಲ್ಲಿ ಬಂಧನದಲ್ಲಿರುವ ಸ್ವಪ್ನ ಸುರೇಶ್ ಹೇಳಿದ್ದಾಗಿ ಕಸ್ಟಮ್ ಆಯುಕ್ತ ಸುಮಿತ್ ಕುಮಾರ್ ಕೇರಳ ಹೈಕೋರ್ಟ್ಗೆ ಮಾಹಿತಿ ನೀಡಿದ್ದಾರೆ.
ಪಿಣರಾಯಿ ವಿಜಯನ್ ಮಾತ್ರವಲ್ಲ, ಕೇರಳ ವಿಧಾನಸಭೆಯ ಸ್ಪೀಕರ್ ಹಾಗೂ ವಿಜಯನ್ ಸಂಪುಟದ ಇನ್ನು ಮೂವರು ಸಚಿವರು ಕೂಡ ಈ ಕೃತ್ಯದಲ್ಲಿ ಭಾಗಿಯಾಗಿದ್ದಾಗಿ ಸ್ವಪ್ನಾ ಸುರೇಶ್ ಹೇಳಿದ್ದಾರೆ ಎಂದು ಸುಮಿತ್ ಕೋರ್ಟ್ಗೆ ತಿಳಿಸಿದ್ದಾರೆ.
ಅಲ್ಲದೇ ಪಿಣರಾಯಿ ವಿಜಯನ್ ಹಾಗೂ ಅವರ ಮಾಜಿ ಕಾರ್ಯದರ್ಶಿ ಶಿವಶಂಕರ್ ಹಾಗೂ ವೈಯಕ್ತಿಕ ಸಿಬ್ಬಂದಿಗಳ ಜತೆಗೆ ತನಗೆ ನಿಕಟ ಸಂಬಂಧ ಇತ್ತು ಎಂದು ಸ್ವಪ್ನಾ ತಮ್ಮ ಹೇಳಿಕೆಯಲ್ಲಿ ಹೇಳಿದ್ದಾರೆ.