ಮೋದಿಗಾಗಿ ಚುನಾವಣಾ ಕಣಕ್ಕಿಳಿದ ಸ್ಟಾರ್ ನಟ ಸುರೇಶ್ ಗೋಪಿ
ತ್ರಿಸ್ಸೂರ್(ಕೇರಳ), ಏಪ್ರಿಲ್ 03: ಪ್ರಧಾನಿ ನರೇಂದ್ರ ಮೋದಿ ಅವರ ಮೆಚ್ಚುಗೆ ಗಳಿಸಿ, ರಾಜ್ಯಸಭಾ ಸದಸ್ಯರಾಗಿದ್ದ ಮಲಯಾಳಂ ಸೂಪರ್ ಸ್ಟಾರ್ ನಟ ಸುರೇಶ್ ಗೋಪಿ ಅವರು ಈಗ ಚುನಾವಣಾ ಕಣಕ್ಕೆ ಮೊದಲ ಬಾರಿಗೆ ಕಣಕ್ಕಿಳಿಯುತ್ತಿದ್ದಾರೆ.
2014ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಪರ ಪ್ರಚಾರ ನಡೆಸಿದ್ದ ಸುರೇಶ್ ಗೋಪಿ ಅವರು ನಂತರ ಬಿಜೆಪಿ ಸೇರಿದ್ದರು. ಗೋಪಿ ಅವರಿಗೆ ರಾಜ್ಯ ಸಭಾ ಸದಸ್ಯ ಸ್ಥಾನವನ್ನು ಮೋದಿ ಕೊಡಿಸಿದ್ದರು. ಈಗ ಲೋಕಸಭೆ ಚುನಾವಣೆ ಎದುರಿಸುತ್ತಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಭಾರತೀಯ ಜನತಾ ಪಕ್ಷ(ಬಿಜೆಪಿ)ವು ಮಂಗಳವಾರದಂದು ತ್ರಿಸ್ಸೂರ್ ಸೇರಿ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹೆಸರಿಸಿದೆ. ಎನ್ಡಿಎ ಮಿತ್ರಪಕ್ಷದ ಅಭ್ಯರ್ಥಿಯಾಗಿ ಸುರೇಶ್ ಗೋಪಿ ಅವರಿಗೆ ತ್ರಿಸ್ಸೂರಿನ ಟಿಕೆಟ್ ಸಿಕ್ಕಿದೆ.
ಭಾರತ್ ಧರ್ಮ ಜನ ಸೇನಾ(ಬಿಡಿಜೆಎಸ್) ಪಕ್ಷದ ಅಭ್ಯರ್ಥಿಯಾಗಿರುವ ಸುರೇಶ್ ಅವರ ಹೆಸರು ವಯನಾಡು ಕ್ಷೇತ್ರಕ್ಕೆ ಕೇಳಿ ಬಂದಿತ್ತು. ಆದರೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಸೆಣಸಲು ಬಿಡಿಜೆಎಸ್ ಪಕ್ಷದ ಅಧ್ಯಕ್ಷ ತುಷಾರ್ ವೆಲ್ಲಪಲ್ಲಿ ಅವರ ಹೆಸರನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಸೂಚಿಸಿದ್ದಾರೆ.
ನಾನು ನೀಡಿದ ಭರವಸೆಗಳನ್ನು ಪೂರೈಸಲು ಇನ್ನೊಂದು ಅವಧಿ ಬೇಕು: ಮೋದಿ
ತ್ರಿಸ್ಸೂರ್ ಕ್ಷೇತ್ರಕ್ಕೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಂಟಿ ರಮೇಶ್ ಅವರ ಹೆಸರು ಕೂಡಾ ಕೇಳೀ ಬಂದಿತ್ತು. ಆದರೆ, ಗೋಪಿ ಹೆಸರನ್ನು ಅಂತಿಮಗೊಳಿಸಲಾಗಿದೆ. ತ್ರಿಸ್ಸೂರಿನಲ್ಲಿ ಯುಡಿಎಫ್ ಅಭ್ಯರ್ಥಿಯಾಗಿ ಟಿ.ಎನ್ ಪ್ರತಾಪನ್ ಹಾಗೂ ಎಲ್ ಡಿಎಫ್ ಅಭ್ಯರ್ಥಿಯಾಗಿ ರಾಜಾಜಿ ಮಾಥ್ಯೂ ಥಾಮಸ್ ಕಣದಲ್ಲಿದ್ದಾರೆ.
ಚಿತ್ರರಂಗದ ಸೂಪರ್ ಸ್ಟಾರ್ ಸುರೇಶ್ ಗೋಪಿನಾಥನ್
ಮಲೆಯಾಳಂ ಚಿತ್ರರಂಗದ ಟಾಪ್ ನಟರಾದ ಮಮ್ಮೂಟಿ, ಮೋಹನ್ ಲಾಲ್, ದಿಲೀಪ್ ಸಮಾನಾಂತರವಾಗಿ ಸುರೇಶ್ ಗೋಪಿ ಕೇರಳದಲ್ಲಿ ಪ್ರಭಾವ ಹೊಂದಿದ್ದಾರೆ. ನಾಯರ್ ಕುಟುಂಬದ ಗೋಪಿ ಅವರು ಈ ಹಿಂದೆ ಬಿಜೆಪಿ ಸೇರಿಸಿಕೊಳ್ಳುವ ಯತ್ನ ಹಲವು ಬಾರಿ ಸಫಲವಾಗಿರಲಿಲ್ಲ. ಆದರೆ, ಮೋದಿ ಅವರನ್ನು ಭೇಟಿ ಮಾಡಿದ ಮೇಲೆ ಅವರ ತಾರಾ ಮೌಲ್ಯ ಹೆಚ್ಚಿದೆ. 'ಕೋಟ್ಯಧಿಪತಿ' ಕಾರ್ಯಕ್ರಮದ ಮಲೆಯಾಳಂ ಆವೃತ್ತಿಯ ನಿರೂಪಕರಾಗಿ ಮನೆ ಮಾತಾಗಿದ್ದಾರೆ ಕೂಡಾ. ಕನ್ನಡಿಗರಿಗೆ ನ್ಯೂಡೆಲ್ಲಿ ಚಿತ್ರದ ಮೂಲಕ ಪರಿಚಯ.
ಸುರೇಶ್ ಗೋಪಿ ಚಿಂತನೆ ಮೆಚ್ಚಿದ ಮೋದಿ
ವಿಳಿಂಜಾಮ್ ಬಂದರು ಯೋಜನೆ, ತ್ರಿವೇಂಡ್ರಮ್ ನ ಹೈಕೋರ್ಟ್ ಬೆಂಚ್, ರೈಲ್ವೆ ಜಾಲ ನವೀಕರಣ ಮುಂತಾದ ಅಭಿವೃದ್ಧಿ ಪರ ವಿಷಯಗಳ ಬಗ್ಗೆ ಮೋದಿ ಜತೆ ಗೋಪಿ ಗಂಭೀರವಾದ ಚರ್ಚೆ ನಡೆಸಿದ್ದರು. ಮೊದಲ ಭೇಟಿ ನಂತರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭದಲ್ಲೂ ಗೋಪಿ ಹಾಜರಿದ್ದರು. ಹೀಗಾಗಿ ಬಿಜೆಪಿ ಪರ ಪ್ರಚಾರ ಕೈಗೊಳ್ಳುವಂತೆ ಸೂಚಿಸಿದ್ದರು. ಅದರಂತೆ, ಕೇರಳದಲ್ಲಿ ಮಿತ್ರಪಕ್ಷ ಭಾರತ್ ಧರ್ಮ ಜನ ಸೇನಾ ಪಕ್ಷದ ಮೂಲಕ ಬಿಜೆಪಿ ಪರ ದನಿಯಾಗಿದ್ದರು.
ದೇವರನಾಡಿನಲ್ಲಿ ಕಮಲ ಅರಳಿಸಲು ಸಜ್ಜು
ಚಲನಚಿತ್ರಗಳ ಜನಪ್ರಿಯತೆ, ಮೋದಿ ಬೆಂಬಲದ ನಂತರ ಕೇರಳ ಬಿಜೆಪಿ ಅಸೆಂಬ್ಲಿಯಲ್ಲಿ ಖಾತೆ ತೆರೆಯುವ ಕನಸು ಕಾಣುತ್ತಿದೆ. ಈ ಹಿಂದೆ ವಿ.ಎಚ್ ಅಚ್ಯುತಾನಂದನ್ ಪರ ಅಸೆಂಬ್ಲಿ ಚುನಾವಣೆಯಲ್ಲಿ ಪರ ನಿರತರಾಗಿದ್ದು ಬಿಟ್ಟರೆ ಮೋದಿ ಅವರನ್ನು ಮಾತ್ರ ಗೋಪಿ ಮೆಚ್ಚಿಕೊಂಡಿದ್ದಾರೆ. ಪಕ್ಷಕ್ಕಿಂತ ವ್ಯಕ್ತಿ ನೋಡಿಕೊಂಡು ಬೆಂಬಲಿಸುತ್ತಾ ಬಂದಿರುವ ಗೋಪಿ ಅವರು ಬಿಜೆಪಿ ಸೇರಿದಂತೆ ಕೇರಳ ರಾಜಕೀಯದಲ್ಲಿ ಹೊಸ ಇತಿಹಾಸ ನಿರ್ಮಿಸುವ ನಿರೀಕ್ಷೆ ಹೊಂದಿದ್ದಾರೆ.
ಹಲವು ಹುದ್ದೆಗಳು ಹುಡುಕಿಕೊಂಡು ಬಂದಿತ್ತು
ಹಿರಿಯ ಚಿತ್ರಕರ್ಮಿ ರಮೇಶ್ ಸಿಪ್ಪಿ ಅವರ ಸ್ಥಾನಕ್ಕೆ ಮಲೆಯಾಳಿ ಗೋಪಿ ಅವರನ್ನು ಕರೆ ತರಲು ಎನ್ ಡಿಎ ಸರ್ಕಾರ ಯೋಜಿಸಿತ್ತು. ಈ ಹುದ್ದೆ ಕೇಂದ್ರದ ರಾಜ್ಯ ಸಚಿವರ ಹುದ್ದೆಗೆ ಸಮಾನವಾಗಿರುತ್ತದೆ. ಜೊತೆಗೆ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕರೂ, ಗೋಪಿ ಅವರು ಬಿಜೆಪಿ ಆಫರ್ ತಿರಸ್ಕರಿಸಿದ್ದರು. ಸ್ಟಾರ್ ಪ್ರಚಾರಕರಾಗಿ ಕಾರ್ಯ ನಿರ್ವಹಿಸಿದ್ದರು. 2016ರಲ್ಲಿ ರಾಜ್ಯಸಭಾ ಸದಸ್ಯರಾದರು. ಈಗ ಲೋಕಸಭಾ ಚುನಾವಣೆಯಲ್ಲಿ ತ್ರಿಸ್ಸೂರ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.