ರಾಜಕೀಯ ಎಂಟ್ರಿ ಬಗ್ಗೆ ಗುಟ್ಟು ಬಿಟ್ಟು ಕೊಟ್ಟ ಸೂಪರ್ ಸ್ಟಾರ್!
Recommended Video
ತಿರುವನಂತಪುರಂ, ಫೆಬ್ರವರಿ 05: ಕೇರಳದಲ್ಲಿ ಬಿಜೆಪಿ ತನ್ನ ವ್ಯಾಪ್ತಿ ಹೆಚ್ಚಿಸಿಕೊಳ್ಳಲು ಇನ್ನಿಲ್ಲದ್ದಂತೆ ಯತ್ನಿಸುತ್ತಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ದ ಹಿರಿ ತಲೆಗಳಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಸೆಲೆಬ್ರಿಟಿಗಳನ್ನು ಸೆಳೆಯಲು ಯತ್ನಿಸುತ್ತಿದ್ದಾರೆ.
ಸ್ಟಾರ್ ನಟ ಸುರೇಶ್ ಗೋಪಿ ನಂತರ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ. ಆದರೆ, ಈ ಬಗ್ಗೆ ಸುದ್ದಿ ಹಬ್ಬುತ್ತಿದ್ದಂತೆ ಲಾಲ್ ಅವರ ಅಭಿಮಾನಿಗಳು, ಆಕ್ರೋಶ ವ್ಯಕ್ತಪಡಿಸಿದ ಬಳಿಕ ಈ ಕುರಿತಂತೆ ಸ್ವತಃ ಮೋಹನ್ ಲಾಲ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ನಟ ಗೋಪಿಗೆ ಕೊಟ್ಟ ಮಾತು ಉಳಿಸಿಕೊಂಡ ಪ್ರಧಾನಿ ಮೋದಿ
ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಾರೆ, ಈ ಸಂಬಂಧ ಬಿಜೆಪಿ ವರಿಷ್ಠರ ಜೊತೆ ಚರ್ಚೆ ನಡೆಸಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಓ ರಾಜಗೋಪಾಲ್ ಅವರು ನೀಡಿದ ಹೇಳಿಕೆ ಸಾಕಷ್ಟು ಗೊಂದಲ, ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಮೋಹನ್ ಲಾಲ್, 'ರಾಜಕೀಯ ನನಗೆ ಸರಿಹೊಂದದ ಕ್ಷೇತ್ರ, ನಾನು ನಟನಾಗಿ ಮಾತ್ರ ಯಾವಾಗಲೂ ಗುರುತಿಸಿಕೊಳ್ಳುತ್ತೇನೆ' ಎಂದಿದ್ದಾರೆ.
ಬಿಜೆಪಿಗೆ ಆಪ್ತವಾಗಿರುವ ಮೋಹನ್ ಲಾಲ್ ಸಂಸ್ಥೆ
ಮೋಹನ್ ಲಾಲ್ ಅವರ ವಿಶ್ವಶಾಂತಿ ಫೌಂಡೇಷನ್ ಜತೆ ಆರೆಸ್ಸೆಸ್ ನ ರಾಷ್ಟ್ರೀಯ ಸೇವಾ ಭಾರತಿ ಕೂಡಾ ಕಾರ್ಯ ನಿರ್ವಹಿಸುತ್ತಿದೆ. ಹೀಗಾಗಿ, ಮೋಹನ್ ಲಾಲ್ ಅವರನ್ನು ಸಕ್ರಿಯ ರಾಜಕೀಯಕ್ಕೆ ಕರೆ ತರಲು ಆರೆಸ್ಸೆಸ್ ಕೂಡಾ ಸಹಮತ ವ್ಯಕ್ತಪಡಿಸಿದೆ. ಎಲ್ಲವೂ ಅಂದು ಕೊಂಡತೆ ನಡೆದರೆ, ತ್ರಿವೇಂಡ್ರಮ್ ಕ್ಷೇತ್ರದಲ್ಲಿ ಮಾಜಿ ಕೇಂದ್ರ ಸಚಿವ ಶಶಿ ತರೂರ್ ವಿರುದ್ಧ ಮೋಹನ್ ಲಾಲ್ ಅವರು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಎದುರಿಸಬಹುದು.
ಕೇರಳದಲ್ಲಿ ಬಿಜೆಪಿ ತನ್ನ ವೋಟ್ ಶೇರ್ ಹೆಚ್ಚಿಸಿಕೊಂಡರೂ, ಹೆಚ್ಚಿನ ಮಟ್ಟದಲ್ಲಿ ಪ್ರಭಾವವನ್ನು ಹೊಂದಲಾಗಿಲ್ಲ. ಅಸೆಂಬ್ಲಿ ಸ್ಥಾನ ಗೆಲ್ಲಲು ಪರದಾಡುತ್ತಿದೆ. ಆದೆ, ಸ್ಟಾರ್ ನಟರನ್ನು ಪಕ್ಷಕ್ಕೆ ಸೇರಿಸಿಕೊಂಡು, ತನ್ನ ಬಲ ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿದೆ.
ಪ್ರಧಾನಿ ಮೋದಿ ಭೇಟಿ ಮಾಡಿದ್ದ ನಟ ಮೋಹನ್ ಲಾಲ್
ಪ್ರಧಾನಿ ಮೋದಿ ಅವರ ಅಪನಗದೀಕರಣ ಯೋಜನೆ, ಸ್ವಚ್ಛ ಭಾರತ ಅಭಿಯಾನ, ಸ್ವಚ್ಛತಾ ಹಿ ಸೇವಾ ಅಭಿಯಾನಗಳನ್ನು ಮೆಚ್ಚಿದ್ದ ಮೋಹನ್ ಲಾಲ್ ಅವರು, ಮೋದಿ ಅವರು ಈ ಅಭಿಯಾನದಲ್ಲಿ ಕೈ ಜೋಡಿಸುವಂತೆ ಮೋಹನ್ ಲಾಲ್ ಅವರಿಗೆ ಬರೆದ ಪತ್ರವನ್ನು ಕೇರಳ ಬಿಜೆಪಿ ಬಹಿರಂಗ ಪಡಿಸಿ, ಪ್ರಚಾರ ಪಡೆದಿತ್ತು. ಕೇರಳಕ್ಕೆ ಮೋದಿ ಅವರು ಬಂದಾಗ ಮೋಹನ್ ಲಾಲ್ ರನ್ನು ಭೇಟಿ ಮಾಡಿದ್ದರು. ಜಲಪ್ರಳಯದಿಂದಾಗಿ ನಾಶವಾಗಿರುವ ಕೇರಳದಲ್ಲಿ ಹೊಸಬದುಕನ್ನು ಕಟ್ಟಿಕೊಡಲು ಮೋಹನ್ ಲಾಲ್ ಅವರ ಎನ್ ಜಿಒ ಮುಂದಾಗಿದೆ. ಈ ವಿಷಯವನ್ನು ಚರ್ಚಿಸಲು ಮೋದಿ ಅವರನ್ನು ಭೇಟಿ ಮಾಡಿದ್ದರು ಎಂಬುದು ನಂತರ ತಿಳಿಯಿತು.
ಮೋಹನ್ ಲಾಲ್ ಸ್ಪಷ್ಟನೆ
2019ರ ಲೋಕಸಭೆ ಚುನಾವಣೆಯಲ್ಲಿ ತಾವು ಯಾವುದೇ ಪಕ್ಷದಿಂದಲೂ ಸ್ಪರ್ಧಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ, ನಾನು ನಟನೆಯನ್ನು ಪ್ರೀತಿಸುತ್ತೇನೆ, ಹೀಗಾಗಿ ರಾಜಕೀಯಕ್ಕೆ ಬರುವುದಿಲ್ಲ ಎಂದು ಮೋಹನ್ ಲಾಲ್ ಹೇಳಿದ್ದಾರೆ.
ನಟನಾಗಿ ನಾನು ನನ್ನ ವೃತ್ತಿಯಲ್ಲಿ ಸಂತೋಷವಾಗಿದ್ದೇನೆ, ನನಗೆ ನಟನೆ ಸಾಕಷ್ಟು ಸ್ವಾತಂತ್ರ್ಯ ನೀಡಿದೆ, ನೀವು ರಾಜಕಾರಣಿಯಾದರೆ ಹಲವು ಮಂದಿ ನಮ್ಮನ್ನು ಅವಲಂಬಿಸುತ್ತಾರೆ, ನಾನು ಅವರಿಗಾಗಿ ಮಾಡಬೇಕು ಎಂಬುದನ್ನು ತಿಳಿದಿದ್ದೇನೆ ಎಂದು ಮೋಹನ್ ಲಾಲ್ ಹೇಳಿದ್ದಾರೆ ಎಂದು ನ್ಯೂಸ್ 18 ವರದಿ ಮಾಡಿದೆ.
ಕೇರಳದಲ್ಲಿ ಬಿಜೆಪಿ ತನ್ನ ಬಲ ಹೆಚ್ಚಿಸಿಕೊಳ್ಳಬೇಕಿದೆ
ಮಾಜಿ ಕೇಂದ್ರ ಸಚಿವ ಓ ರಾಜಗೋಪಾಲ್ ಅವರು ಒಂದು ಅಸೆಂಬ್ಲಿ ಸ್ಥಾನ ಗಳಿಸಿದ್ದು ಬಿಟ್ಟರೆ, ಮಲೆಯಾಳಂನ ಸ್ಟಾರ್ ನಟ ಸುರೇಶ್ ಗೋಪಿ ಅವರು ಬಿಜೆಪಿ ಪರ ಅಸೆಂಬ್ಲಿ ಚುನಾವಣೆಯಲ್ಲಿ ಪ್ರಚಾರ ನಡೆಸಿದ್ದರು. ತೆರಿಗೆ ವಂಚನೆ ಪ್ರಕರಣದಲ್ಲಿ ಸಿಲುಕಿದ್ದ ಗೋಪಿ ಸದ್ಯ ರಾಜ್ಯಸಭಾ ಸದಸ್ಯರಾಗಿದ್ದಾರೆ. ಈಗ ಮೋಹನ್ ಲಾಲ್ ಅವರನ್ನು ಕರೆ ತಂದು ಕೇರಳದಲ್ಲಿ ತನ್ನ ವರ್ಚಸ್ಸು ಹೆಚ್ಚಿಸಿಕೊಳ್ಳಲು ಯೋಜನೆ ಹಾಕಿಕೊಳ್ಳಲಾಗಿದೆ.