ಬೋಧಿವೃಕ್ಷ ಅಲ್ಲ, ಯೋಧನ ಮನೆಯ ಅಲ್ಕೋಹಾಲ್ ಎದುರು ಕಳ್ಳನಿಗೆ ಪಶ್ಚಾತಾಪ!
ತಿರುವನಂತಪುರಂ, ಫೆಬ್ರವರಿ.20: ಬೋಧಿವೃಕ್ಷದ ಕೆಳಗೆ ಬುದ್ಧನಿಗೆ ಜ್ಞಾನೋದಯ ಆಯಿತು ಎಂದು ಕೇಳಿದ್ದೀರಾ ಅಲ್ಲವೇ. ಅದೇ ರೀತಿ ತಡರಾತ್ರಿ ಕಳ್ಳತನಕ್ಕೆಂದು ಮನೆಗೆ ನುಗ್ಗಿದ ದರೋಡೆಕೋರನಿಗೆ ಅಲ್ಕೋಹಾಲ್ ಬಾಟಲಿ ಎದುರಿನಲ್ಲಿ ಪಶ್ಚಾತಾಪವಾಗಿದೆ.
ಅಚ್ಚರಿ ಎನಿಸಿದರೂ ಇದೊಂದು ಸತ್ಯ ಘಟನೆ. ಕೇರಳ ಕೊಚ್ಚಿಯ ತ್ರಿಪುನಿತುರಾ ಪ್ರದೇಶದಲ್ಲಿ ನಡೆದಿದೆ. ಕಳೆದ ಎರಡು ದಿನಗಳ ಹಿಂದೆ ತಡರಾತ್ರಿ ಕಳ್ಳತನ ಮಾಡಲೆಂದು ಮನೆಯೊಂದಕ್ಕೆ ನುಗ್ಗಿದ್ದಾನೆ. ಮನೆಯಲ್ಲಿ ಹುಡುಕಾಟ ನಡೆಸಿದ ಸಂದರ್ಭದಲ್ಲಿ ಅದು ಭಾರತೀಯ ಸೇನೆಯ ಯೋಧರ ಮನೆ ಎಂದು ಗೊತ್ತಾಗಿದೆ.
ತಂದೆಯ ಕೊಂದವರ ಕುಟುಂಬಕ್ಕೆ ಆಸ್ತಿ ಬರೆದುಕೊಟ್ಟ ಕೇರಳ ಮಹಿಳೆ: ಕಾರಣವೇನು?
ಭಾರತೀಯ ಸೇನಾ ಯೋಧನ ಮನೆ ಎಂದು ಗೊತ್ತಾಗುತ್ತಿದ್ದಂತೆ ಕಳ್ಳತನ ಮಾಡುವನ್ನೇ ಕೈಬಿಟ್ಟು ಕಳ್ಳ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಆದರೆ, ಮನೆಯಿಂದ ಹೊರಡುವ ಮೊದಲು ಆತ ಮನೆಯ ಗೋಡೆಗಳ ಮೇಲೆ ಬರೆದ ಸಾಲುಗಳು ಪಶ್ಚಾತಾಪಕ್ಕೆ ಕೈಗನ್ನಡಿ ಎನ್ನುವಂತಿವೆ.
ಯೋಧನ ಫೋಟೋ ನೋಡಿ ಕಳ್ಳನಿಗೆ ಪಶ್ಚಾತಾಪ
ಯಾರೂ ಇಲ್ಲದ ಸಮಯವನ್ನೇ ಸಾಧಿಸಿ ಮನೆಗೆ ನುಗ್ಗಿದ ದರೋಡೆಕೋರ ಮನೆಯಲ್ಲಿ ಕಳ್ಳತನಕ್ಕೆ ಮುಂದಾಗಿದ್ದಾನೆೆ. ಮನೆಯಲ್ಲಿ ಹುಡುಕಾಟ ನಡೆಸುತ್ತಿದ್ದ ವೇಳೆಯಲ್ಲಿ ಗೋಡೆಯ ಮೇಲೆ ಭಾರತೀಯ ಸೇನೆಯ ಉಡುಪು ಧರಿಸಿ ಕ್ಯಾಪ್ ತೊಟ್ಟ ಯೋಧನ ಫೋಟೋ ಕಣ್ಣಿಗೆ ಬಿದ್ದಿದೆ. ಈ ಫೋಟೋ ನೋಡುತ್ತಿದ್ದಂತೆ ಕಳ್ಳನ ಮನ ಪರಿವರ್ತನೆ ಆಗಿದೆ.
ದರೋಡೆಕೋರರ ಬರಹದಲ್ಲಿ ಬೈಬಲ್ ಬಗ್ಗೆ ಉಲ್ಲೇಖ
ಯೋಧನ ಮನೆಗೆ ನುಗ್ಗಿದ ಕಳ್ಳನು ತನ್ನ ತಪ್ಪಿನ ಬಗ್ಗೆ ಯೋಧನ ಮನೆಯ ಗೋಡೆಯ ಮೇಲೆ ಬರೆದು ಹೋಗಿದ್ದಾನೆ. ವಿಶೇಷ ಎಂದರೆ ಅದರಲ್ಲಿ ಕಳ್ಳನು ಬೈಬಲ್ ಬಗ್ಗೆ ಉಲ್ಲೇಖಿಸಿದ್ದಾನೆೆ. ಬೈಬಲ್ ನ 7ನೇ ಕಮಾಂಡೆಂಟ್ ನ್ನು ಉಲ್ಲಂಘಿಸಿದ್ದೇನೆ. ಇದು ಯೋಧರ ಮನೆ ಎಂದು ತಿಳಿಯದೇ ನಿಮ್ಮ ಮನೆಯಲ್ಲಿ ಕಳ್ಳತನಕ್ಕೆ ಬಂದು ಬಿಟ್ಟಿದ್ದೆನು. ದಯವಿಟ್ಟು ನನ್ನನ್ನು ಕ್ಷಮಿಸಿ ಆಫೀಸರ್ ಎಂದು ಗೋಡೆಯಲ್ಲಿ ಕಳ್ಳನೇ ಬರೆದು ಹೋಗಿದ್ದಾನೆ.
ಮನೆಯಲ್ಲಿನ ಆಲ್ಕೋಹಾಲ್ ಕುಡಿದಿದ್ದನ್ನು ಬರೆದ ಕಳ್ಳ
ಇನ್ನು, ಯೋಧನ ಮನೆಯಲ್ಲಿ ಹುಡುಕಾಟ ನಡೆಸುತ್ತಿರುವ ಸಂದರ್ಭದಲ್ಲಿ ಆಲ್ಕೋಹಾಲ್ ಪತ್ತೆಯಾಗಿತ್ತು. ಆ ಆಲ್ಕೋಹಾಲ್ ನ್ನು ಸ್ವಲ್ಪ ಕುಡಿದು, ನಾನು ಟೇಸ್ಟ್ ಮಾಡಿದ್ದೇನೆ. ಅದಕ್ಕೂ ಕ್ಷಮೆ ಇರಲಿ. ಹಾಗೆ ನಿಮ್ಮ ಮನೆಯ ಪಕ್ಕದ ಅಂಗಡಿಯಲ್ಲಿ ನಾನು ಕಳ್ಳತನ ಮಾಡಿರುವ ಬ್ಯಾಗ್ ನಲ್ಲಿ ಕೆಲವು ದಾಖಲೆಗಳು ಸಿಕ್ಕಿವೆ. ಆ ದಾಖಲೆಗಳಿರುವ ಬ್ಯಾಗ್ ನ್ನು ನಿಮ್ಮ ಮನೆಯಲ್ಲಿ ಇಟ್ಟಿದ್ದೇನೆ. ದಯವಿಟ್ಟು ಆ ದಾಖಲೆಗಳನ್ನೆಲ್ಲ ಮರೆಯದೇ ಈ ಬ್ಯಾಗ್ ಮಾಲೀಕನಿಗೆೆ ತಲುಪಿಸಿ ಬಿಡಿ ಎಂದು ಗೋಡೆಯ ಮೇಲೆ ಬರೆದು ಹೋಗಿದ್ದಾನೆ.
ಒಂದೇ ರಾತ್ರಿಯಲ್ಲಿ ನಾಲ್ಕು ಅಂಗಡಿಗಳಿಗೆ ಕನ್ನ
ಬೆಳಗ್ಗೆ ಬಂದು ಮನೆಯ ಗೋಡೆ ಮೇಲೆ ಬರೆದ ಬರಹವನ್ನು ನೋಡಿದ ಯೋಧನಿಗೆ ಫುಲ್ ಶಾಕ್ ಆಯಿತು. ತಕ್ಷಣ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದರು. ಸ್ಥಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಮನೆಯ ಸುತ್ತಮುತ್ತಲಿನ ನಾಲ್ಕು ಅಂಗಡಿಗಳಲ್ಲೇ ಅದೇ ದಿನ ರಾತ್ರಿ ಕಳ್ಳತನ ನಡೆದಿರುವ ವಿಚಾರ ಬೆಳಕಿಗೆೆ ಬಂದಿದೆೆ. ಇನ್ನು, ದಾಖಲೆಗೆಳ ಮಾಲೀಕನು ಆ ಬ್ಯಾಗ್ ನಲ್ಲಿ ಇರಿಸಿದ 1 ಸಾವಿರ ರೂಪಾಯಿ ಕಳ್ಳತನ ಆಗಿರುವ ಬಗ್ಗೆ ಪೊಲೀಸರಿಗೆೆ ದೂರು ನೀಡಿದ್ದಾರೆ. ಇದರ ಮಧ್ಯೆ ಪೊಲೀಸರು ಈ ಸರಣಿ ಕಳ್ಳತನದ ಹಿಂದೆ ಒಂದು ಗ್ಯಾಂಗ್ ಇದ್ದು, ಈ ಪೈಕಿ ಒಬ್ಬನು ಈ ಬರಹವನ್ನು ಬರೆದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಹಸ್ತಾಕ್ಷರಗಳನ್ನು ತೆಗೆದುಕೊಂಡು ತನಿಖೆಯನ್ನು ಆರಂಭಿಸಿರುವ ಪೊಲೀಸರು ಆದಷ್ಟು ಬೇಗ ಗ್ಯಾಂಗ್ ನ್ನು ಪತ್ತೆ ಮಾಡುವುದಾಗಿ ತಿಳಿಸಿದ್ದಾರೆೆ.