ಭಾರತ್ ಜೋಡೋ ಯಾತ್ರೆ: ಟ್ರಾಫಿಕ್ ಸಮಸ್ಯೆ ಸರಿಪಡಿಸಿ ಎಂದು ಕೇರಳ ಹೈಕೋರ್ಟ್ಗೆ ಅರ್ಜಿ
ತಿರುವನಂತಪುರಂ, ಸೆ.21: ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ವೇಳೆಯ ಟ್ರಾಫಿಕ್ ಸಮಸ್ಯೆಗೆ ಅಂತ್ಯ ಹಾಡಲು ಮಧ್ಯಪ್ರವೇಶಿಸುವಂತೆ ಕೋರಿ ಮಂಗಳವಾರ ಕೇರಳ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ. ಸೆಪ್ಟೆಂಬರ್ 11 ರಂದು ಕೇರಳಕ್ಕೆ ಪ್ರವೇಶಿಸಿರುವ ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ 18 ದಿನಗಳ ಕಾಲ ರಾಜ್ಯದಲ್ಲಿ ನಡೆಯಲಿದೆ.
ವಕೀಲ ಕೆ ವಿಜಯನ್ ಅವರು ಸಲ್ಲಿಸಿದ ಅರ್ಜಿಯಲ್ಲಿ, ಯಾತ್ರೆಯನ್ನು ನಿಯಂತ್ರಿಸಲು ನ್ಯಾಯಾಲಯಕ್ಕೆ ನಿರ್ದೇಶನವನ್ನು ಕೋರಿದ್ದಾರೆ. ರಸ್ತೆಯ ಅರ್ಧದಷ್ಟು ಭಾಗವನ್ನು ಮಾತ್ರ ಆಕ್ರಮಿಸಿಕೊಳ್ಳಲು ಅನುಮತಿ ನೀಡುವ ಮೂಲಕ ಇನ್ನು ಅರ್ಧ ಭಾಗದಲ್ಲಿ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.
Viral Video: ಪುಟ್ಟ ಬಾಲಕಿಗೆ ಚಪ್ಪಲಿ ಧರಿಸಲು ಸಹಾಯ ಮಾಡಿದ ರಾಹುಲ್ ಗಾಂಧಿ
ಯಾತ್ರೆಗಾಗಿ ಗಂಟೆಗಟ್ಟಲೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿದ್ದು, ದಿನನಿತ್ಯದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂದು ವಕೀಲ ಕೆ ವಿಜಯನ್ ಮನವಿಯಲ್ಲಿ ತಿಳಿಸಿದ್ದಾರೆ.
ತೆರಿಗೆದಾರರ ಹಣ ಬಳಸಬೇಡಿ ಎಂದ ವಕೀಲ
ಈ ವೇಳೆ ಭಾರತ್ ಜೋಡೋ ಯಾತ್ರೆಯ ಭದ್ರತಾ ವ್ಯವಸ್ಥೆಗೆ ಭಾರಿ ವೆಚ್ಚವಾಗುತ್ತಿದೆ ಮತ್ತು ನೂರಾರು ಪೊಲೀಸರು ರಸ್ತೆಗಳಲ್ಲಿ ಬೀಡುಬಿಟ್ಟಿದ್ದಾರೆ ಎಂದು ಅರ್ಜಿದಾರರು ಮನವಿಯಲ್ಲಿ ತಿಳಿಸಿದ್ದಾರೆ.
ಯಾತ್ರೆಯ ಭದ್ರತಾ ವ್ಯವಸ್ಥೆಗೆ ತಗುಲುತ್ತಿರುವ ವೆಚ್ಚವನ್ನು ತೆರಿಗೆದಾರರ ಹಣದಿಂದ ಪಾವತಿಸುವ ಬದಲು ಕಾಂಗ್ರೆಸ್ ಪಕ್ಷವು ಬಿಲ್ ಪಾವತಿಸಬೇಕು ಎಂದು ಒತ್ತಾಯಿಸಿದ್ದಾರೆ.
ಗುರುವಾರ ಭಾರತ್ ಜೋಡೋ ವಿರುದ್ಧದ ಅರ್ಜಿ ವಿಚಾರಣೆ
ಭಾರತ್ ಜೋಡೋ ಯಾತ್ರೆಯು ಕೇರಳ ಸಾರ್ವಜನಿಕ ಮಾರ್ಗಗಳ ಕಾಯಿದೆ 2011 ಅನ್ನು ಉಲ್ಲಂಘಿಸುತ್ತದೆ ಎಂದು ವಕೀಲ ವಿಜಯನ್ ಹೇಳಿದ್ದಾರೆ. ಈ ಕಾಯ್ದೆ ಸಾರ್ವಜನಿಕ ರಸ್ತೆಗಳಲ್ಲಿ ಅಡಚಣೆಗೆ ಸಂಬಂಧಿಸಿದ ಅಪರಾಧಗಳ ಬಗ್ಗೆ ವ್ಯವಹರಿಸುತ್ತದೆ. ನ್ಯಾಯಾಲಯವು ವಕೀಲ ವಿಜಯನ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಗುರುವಾರ ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ.
ಭಾರತ್ ಜೋಡೋ ಯಾತ್ರೆಯ ಹದಿಮೂರನೇ ದಿನ ಕೇರಳದ ಚೇರ್ತಲದಿಂದ ಆರಂಭವಾಗಿತ್ತು. ರಾಹುಲ್ ಗಾಂಧಿ ನೇತೃತ್ವದ ಯಾತ್ರೆಯು ಅಲಪ್ಪುಳದ ಕುಥಿಯಾಥೋಡು ತನಕ 15 ಕಿಲೋಮೀಟರ್ ವರೆಗೆ ನಡೆದು, ಮಂಗಳವಾರದ ಕೊಚ್ಚಿ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿತ್ತು.
14 ನೇ ದಿನದ ಭಾರತ್ ಜೋಡೋ ಪಾದಯಾತ್ರೆ ಆರಂಭ
"14 ನೇ ದಿನ ಭಾರತ್ ಜೋಡೋ ಪಾದಯಾತ್ರೆ ಕೊಚ್ಚಿ ಜಿಲ್ಲೆಯಲ್ಲಿ ಬೆಳಗ್ಗೆ 6:30 ರ ಸುಮಾರಿಗೆ ಪ್ರಾರಂಭವಾಗಿದೆ. INS ವಿಕ್ರಾಂತ್ ನಿರ್ಮಿಸಿದ ಕೊಚ್ಚಿನ್ ಶಿಪ್ಯಾರ್ಡ್ನಿಂದಾಗಿ ಕೊಚ್ಚಿ ಇತ್ತೀಚೆಗೆ ಸುದ್ದಿಯಲ್ಲಿದೆ. ಶಿಪ್ಯಾರ್ಡ್ ಅನ್ನು 1969 ರಲ್ಲಿ ಯೋಜಿಸಲಾಯಿತು, 1972 ರಲ್ಲಿ ಸ್ಥಾಪಿಸಲಾಯಿತು ಮತ್ತು 1982 ರಲ್ಲಿ ಪ್ರಾರಂಭವಾಯಿತು. ಇದು ಭಾರತದ ಹೆಮ್ಮೆ. ಇನ್ನು ಈ ಶಿಪ್ಯಾರ್ಡ್ 2014 ರ ಹಿಂದಿನದು" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
ಸಂಚಾರಕ್ಕೆ ಅಡ್ಡಿಯಾಗದಂತೆ ಸಂಘಟಕರು ನೋಡಿಕೊಳ್ಳುತ್ತಾರೆ
ಮನವಿಗೆ ಪ್ರತಿಕ್ರಿಯಿಸಿದ ಸಂಸದ ಕಾಂಗ್ರೆಸ್ ಮುಖಂಡ ಕೋಡಿಕುನ್ನಿಲ್ ಸುರೇಶ್, ಸಂಚಾರಕ್ಕೆ ಅಡ್ಡಿಯಾಗದಂತೆ ಸಂಘಟಕರು ಖಚಿತಪಡಿಸಿಕೊಳ್ಳುತ್ತಾರೆ ಎಂದಿದ್ದಾರೆ. ಕೆಲವು ಸ್ಥಳಗಳಲ್ಲಿ ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಪೊಲೀಸರು ರಸ್ತೆಗಳನ್ನು ಸುತ್ತುವರೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಜೊತೆಗೆ ಮುಂದಿನ 157 ದಿನಗಳಲ್ಲಿ ಯಾತ್ರೆಯ ನಡೆಯಲಿರುವ ಎಲ್ಲಾ 12 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಕ್ಷವು ಪೂರ್ವಾನುಮತಿ ತೆಗೆದುಕೊಂಡಿದೆ ಎಂದು ಕೋಡಿಕುನ್ನಿಲ್ ಸುರೇಶ್ ಹೇಳಿದರು.
ಭಾರತ್ ಜೋಡೋ ಪಾದಯಾತ್ರೆಯು 150 ದಿನಗಳಲ್ಲಿ 3,500 ಕಿ.ಮೀ ಸಾಗಲಿದೆ. ಸೆಪ್ಟೆಂಬರ್ 30 ರಂದು ಗುಂಡ್ಲುಪೇಟೆ ಮೂಲಕ ಭಾರತ್ ಜೋಡೋ ಯಾತ್ರೆ ರಾಜ್ಯ ಪ್ರವೇಶ ಮಾಡಲಿದೆ. ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆಯನ್ನು ಯಶಸ್ವಿ ಮಾಡಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಿದ್ಧತೆ ನಡೆಸುತ್ತಿದ್ದಾರೆ.