ಶಬರಿಮಲೆ ದೇಗುಲಕ್ಕೆ ಭೇಟಿ ನೀಡಿದ ಕ್ಷಣಗಳ ಅನುಭವ ಹಂಚಿಕೊಂಡ ಬಿಂದು
ತಿರುವನಂತಪುರಂ, ಜನವರಿ 2 : ಎಲ್ಲ ವಯಸ್ಸಿನ ಮಹಿಳೆಯರು ಶಬರಿಮಲೆಯಲ್ಲಿನ ಅಯ್ಯಪ್ಪ ದೇಗುಲ ಪ್ರವೇಶ ಮಾಡಬಹುದು ಎಂದು ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಆದರೆ ಭಾರೀ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಹಲವು ಪ್ರಯತ್ನಗಳು ವಿಫಲವಾದವು. ಆದರೆ ಬುಧವಾರ ಇಬ್ಬರು ಮಹಿಳೆಯರು ಅಯ್ಯಪ್ಪ ದೇಗುಲ ಪ್ರವೇಶಿಸಿದರು.
ಆ ಮೂಲಕ ಇಡೀ ದೇಶದ ಗಮನ ಸೆಳೆದರು. ಅಷ್ಟೇ ಅಲ್ಲ ಅಯ್ಯಪ್ಪ ಭಕ್ತರು ಹಲವರು ಸಿಟ್ಟಿಗೂ ತುತ್ತಾದರು. ಆ ಇಬ್ಬರು ಮಹಿಳೆಯರ ಪೈಕಿ ಕೋಳಿಕ್ಕೋಡ್ ಜಿಲ್ಲೆಯಲ್ಲಿ ಅತಿಥಿ ಉಪನ್ಯಾಸಕಿ ಆಗಿರುವ ನಲವತ್ತೆರಡರ ಹರೆಯದ ಬಿಂದು ಅಮ್ಮಿಣಿಯವರು ಮಾಧ್ಯಮದವರ ಜತೆ ಮಾತನಾಡಿದ್ದಾರೆ.
ಶಬರಿಮಲೆಗೆ ಮಹಿಳೆಯರ ಪ್ರವೇಶ ವಿರೋಧಿಸಿ ಕೇರಳ ರಾಜ್ಯ ಬಂದ್ ಗೆ ಕರೆ
ಇಬ್ಬರೂ ಮಹಿಳೆಯರು ಅಯ್ಯಪ್ಪನ ಭಕ್ತರೇ ವಿನಾ ಹೋರಾಟಗಾರ್ತಿಯರಲ್ಲ ಎಂಬ ವಿಚಾರ ಸ್ಪಷ್ಟಪಡಿಸಿದ್ದಾರೆ. ನಮ್ಮ ಬಹುಕಾಲದ ಕನಸು ಈಗ ಈಡೇರಿದೆ ಎಂದು ಮನಸಾರೆ ಹೇಳಿಕೊಂಡಿದ್ದಾರೆ. ಹೀಗೆ ಬಿಂದು ಅಮ್ಮಿಣಿ ಅವರು ಹೇಳಿಕೊಂಡ ವಿಚಾರಗಳ ಆಯ್ದ ಭಾಗವನ್ನು ಇಲ್ಲಿ ಕೊಡಲಾಗುತ್ತಿದೆ.
ಪ್ರಶ್ನೆ: ಪ್ರತಿಭಟನಾಕಾರರ ಮಧ್ಯೆ ನೀವು ಬೆಟ್ಟ ಏರುವ ಯೋಜನೆ ಹೇಗೆ ರೂಪಿಸಿದಿರಿ?
ಬಿಂದು: ನಾವು ತಿಂಗಳಿಗೂ ಮೊದಲಿನಿಂದ ಉಪವಾಸ ವ್ರತ ಮಾಡುತ್ತಿದ್ದೆವು. ಡಿಸೆಂಬರ್ ಇಪ್ಪತ್ನಾಲ್ಕನೇ ತಾರೀಕು ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಪ್ರಯತ್ನಿಸಿದೆವು. ಆದರೆ ನಮ್ಮ ಯೋಜನೆಯನ್ನು ಪ್ರತಿಭಟನಾಕಾರರ ಒಂದು ಗುಂಪು ವಿಫಲಗೊಳಿಸಿತು. ಆದರೆ ವಿವೇಚನಾಯುತ ನಿರ್ಧಾರ, ಯೋಜನೆಯೊಂದಿಗೆ ಬಂದರೆ ಭದ್ರತೆ ಒದಗಿಸುವುದಾಗಿ ಪೊಲೀಸರು ಹೇಳಿದರು.
ನಾವು ಕೊಟ್ಟಾಯಂ ಎಸ್ ಪಿ (ಸೂಪರಿಂಟೆಂಡೆಂಟ್ ಆಫ್ ಪೊಲೀಸ್) ಜತೆಗೆ ಸಂಪರ್ಕದಲ್ಲಿದ್ದೆವು. ಮಧ್ಯರಾತ್ರಿ ಹೊತ್ತಿಗೆ ಪಂಬಾಗೆ ಬಂದೆವು ಮತ್ತು ಬೆಟ್ಟ ಹತ್ತಲು ಆರಂಭಿಸಿದೆವು. ಕನಿಷ್ಠ ಇಪ್ಪತ್ನಾಲ್ಕು ಮಂದಿ ಪೊಲೀಸ್ ಅಧಿಕಾರಿಗಳು, ಎಲ್ಲರೂ ಸಾಮಾನ್ಯ ದಿರಿಸಿನಲ್ಲಿದ್ದರು. ನಮ್ಮ ಜತೆಗೆ ಬಂದರು. ನಾವು ನಸುಕಿನ 3.45ರ ಸುಮಾರಿಗೆ ಬೆಟ್ಟದ ಮೆಲೆ ತಲುಪಿದೆವು. ಕೆಲ ನಿಮಿಷ ದೇವಸ್ಥಾನದಲ್ಲಿ ಕಳೆದೆವು, ಪ್ರಾರ್ಥನೆ ಸಲ್ಲಿಸಿದ ನಂತರ ಹಿಂತಿರುಗಿದೆವು. ನಮ್ಮ ಪಾಲಿಗೆ ಕನಸೊಂದು ನನಸಾದ ಕ್ಷಣವದು.
ಪ್ರಶ್ನೆ: ನೀವು ಪುರುಷ ವೇಷಧಾರಿಗಳಾಗಿ ತೆರಳಿದ ಬಗ್ಗೆ ವರದಿ ಇದೆಯಲ್ಲಾ?
ಬಿಂದು: ಅದು ನಿಜವಲ್ಲ. ಆದರೆ ನಾವು ದೊಗಲೆಯಾದ ಬಟ್ಟೆ ಹಾಕಿಕೊಂಡಿದ್ದೆವು. ಪೊಲೀಸರು ತಿಳಿಸಿದಂತೆ ಮುಖವನ್ನು ಭಾಗಶಃ ಮುಚ್ಚಿಕೊಂಡಿದ್ದೆವು. ಕೆಲವು ಭಕ್ತರು ನಮ್ಮನ್ನು ಗುರುತು ಹಿಡಿದರು. ಆದರೆ ಅವರು ಯಾವುದೇ ತೊಂದರೆ ನೀಡಲಿಲ್ಲ. ನಿಜವಾದ ಭಕ್ತರು ಮಹಿಳೆಯರ ಪ್ರವೇಶದ ಬಗ್ಗೆ ಚಿಂತಿಸಲ್ಲ ಅನ್ನೋದು ಅದರಿಂದ ಗೊತ್ತಾಗುತ್ತದೆ.
ಪ್ರಶ್ನೆ: ನಿಮಗೆ ಈ ಕೆಲಸದ ಪರಿಣಾಮದ ಬಗ್ಗೆ ಗೊತ್ತಿದೆ ಅಂದುಕೊಳ್ತೀವಿ?
ಬಿಂದು: ನಾವು ಯಾವುದೇ ಕಾನೂನುಬಾಹಿರ ಕೆಲಸ ಮಾಡಿಲ್ಲ. ನಮಗೆ ಪೊಲೀಸರ ಹಾಗೂ ಆಡಳಿತದವರ ಬೆಂಬಲ ಇದೆ. ಆರಂಭದ ಈ ಉದ್ವೇಗ ಕ್ರಮೇಣ ಕಡಿಮೆ ಆಗುತ್ತದೆ ಎಂಬ ಭರವಸೆ ಇದೆ. ಕೆಲವರು ನಮ್ಮನ್ನು ಮಾವೋವಾದಿಗಳು ಎಂದಿದ್ದಾರೆ. ಆದರೆ ಅದು ನಿಜವಲ್ಲ. ನಾವು ಭಕ್ತರಂತೆ ಬಂದೆವು, ಪ್ರಾರ್ಥನೆ ಸಲ್ಲಿಸಿದೆವು. ಈಗಿನ್ನೂ ಆರಂಭ. ಇನ್ನಷ್ಟು ಮಹಿಳೆಯರು ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಬಹುದು.
ಇದು ನಮ್ಮ ಹಕ್ಕು. ಈ ದೇಶದ ಸರ್ವೋಚ್ಚ ನ್ಯಾಯಾಲಯ ನಮಗೆ ಹಸಿರು ನಿಶಾನೆ ತೋರಿದೆ. ನಾವೀಗ ಪೊಲೀಸರ ಭದ್ರತೆಯಲ್ಲಿ ಇದ್ದೀವಿ. ನಮ್ಮ ವಾಸ ಸ್ಥಳ ಅಥವಾ ಇತರ ಮಾಹಿತಿ ನೀಡಬಾರದು ಎಂದು ಪೊಲೀಸರು ಸಲಹೆ ನೀಡಿದ್ದಾರೆ. ಎಲ್ಲವೂ ಸರಿಯಾದ ನಂತರ ನಾವು ಇನ್ನಷ್ಟು ಮಾಹಿತಿ ನೀಡುತ್ತೇವೆ.