Just in: ಕೇರಳದ ಪಾಲಕ್ಕಾಡ್ನಲ್ಲಿ ಸಿಪಿಐ(ಎಂ) ನಾಯಕನ ಹತ್ಯೆ
ತಿರುವನಂತಪುರಂ , ಆಗಸ್ಟ್ 15: ಕೇರಳದ ಪಾಲಕ್ಕಾಡ್ನ ಮರುತರೋಡ್ನ ಸಿಪಿಐ (ಎಂ) ಸ್ಥಳೀಯ ಸಮಿತಿ ಸದಸ್ಯರೊಬ್ಬರನ್ನು ರಾತ್ರಿ 9.15 ರ ಸುಮಾರಿಗೆ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೃತರನ್ನು ಶಾಜಹಾನ್ ಎಂದು ಗುರುತಿಸಲಾಗಿದೆ. ಪೊಲೀಸರ ಆರಂಭಿಕ ವರದಿಗಳ ಪ್ರಕಾರ, ಶಾಜಹಾನ್ ಮೇಲೆ 5 ರಿಂದ 8 ಜನರ ಗುಂಪು ಅವರ ಮನೆಯ ಬಳಿಯೇ ದಾಳಿ ಮಾಡಿ ಕೊಲೆ ಮಾಡಿದೆ ಎಂದಿದೆ.
ರಸ್ತೆಗಳನ್ನು ಸರಿಪಡಿಸಲು NHAIಗೆ ಒಂದು ವಾರ ಗಡುವು ನೀಡಿದ ಕೇರಳ ಹೈಕೋರ್ಟ್
"ನಿನ್ನೆ ರಾತ್ರಿ ಎಂಟು ಜನರ ಗುಂಪು ಶಾಜಹಾನ್ ಅವರ ಮನೆಯ ಬಳಿಗೆ ಬಂದು ದಾಳಿ ಮಾಡಿದೆ. ಆತ ರಾಜಕೀಯ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದನು. ಹೀಗಾಗಿ ಇದು ಕೂಡ ರಾಜಕೀಯ ಪೈಪೋಟಿಯ ಭಾಗವಾಗಿದೆ ಎಂದು ಅನುಮಾನ ಬರುತ್ತಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆಗಳು ನಡೆಯುತ್ತಿವೆ" ಎಂದು ಪೊಲೀಸರು ತಿಳಿಸಿದ್ದಾರೆ.
"ಸಿಪಿಐ(ಎಂ)ನ ಮರ್ತುತಾ ರಸ್ತೆಯ ಸ್ಥಳೀಯ ಸಮಿತಿ ಸದಸ್ಯ ಕಾಮ್ರೇಡ್ ಶಾಜಹಾನ್ ಅವರನ್ನು ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನದಂದು ಕಡಿದು ಹತ್ಯೆ ಮಾಡಲಾಗಿದೆ. ಇದನ್ನು ಸಿಪಿಐ(ಎಂ) ತೀವ್ರವಾಗಿ ಖಂಡಿಸುತ್ತದೆ. ರೆಡ್ ಸೆಲ್ಯೂಟ್ ಕಾಮ್ರೇಡ್ ಶಾಜಹಾನ್. ನಿಮ್ಮ ಹೋರಾಟ ಮುಂದುವರಿಯುತ್ತದ" ಎಂದು ಸಿಪಿಐ(ಎಂ) ಸಂತಾಪ ವ್ಯಕ್ತಪಡಿಸಿದೆ.
ಈ ಹಿಂದೆ ಏಪ್ರಿಲ್ 19 ರಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ನಾಯಕನ ಹತ್ಯೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿತ್ತು. ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿಯೇ ತನ್ನ ತಂದೆಯ ಎದುರೇ ಸುಬೈರ್ ಎಂಬ ಪಿಎಫ್ಐ ನಾಯಕನನ್ನು ಹತ್ಯೆ ಮಾಡಲಾಗಿತ್ತು.
ಬಂಧಿತ ಮೂವರನ್ನು ಆರ್ಎಸ್ಎಸ್ ಕಾರ್ಯಕರ್ತರಾದ ರಮೇಶ್, ಅರ್ಮುಗಂ ಮತ್ತು ಸರವಣನ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಿಎಫ್ಐ ನಾಯಕನ ಹತ್ಯೆಯಾದ 24 ಗಂಟೆಯೊಳಗೆ ಪಾಲಕ್ಕಾಡ್ನಲ್ಲಿ ಆರ್ಎಸ್ಎಸ್ ಕಾರ್ಯಕರ್ತ ಶ್ರೀನಿವಾಸನ್ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಹತ್ಯೆಯ ಹಿಂದೆ ಪಿಎಫ್ಐನ ರಾಜಕೀಯ ಶಾಖೆಯಾದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿತ್ತು.
"ಆರೋಪಿ ರಮೇಶ್, ಹತ್ಯೆಗೀಡಾದ ಆರ್ಎಸ್ಎಸ್ ಕಾರ್ಯಕರ್ತ ಸಂಜಿತ್ನ ಆತ್ಮೀಯ ಸ್ನೇಹಿತ ಎಂಬುದು ನಮಗೆ ತಿಳಿದಿದೆ. ಸಂಜಿತ್ ಹತ್ಯೆಗೂ ಮುನ್ನ, ತನಗೆ ಏನಾದರೂ ಸಂಭವಿಸಿದರೆ ಅದರಲ್ಲಿ ಸುಬೈರ್ ಪಾತ್ರವಿದೆ ಎಂದು ರಮೇಶ್ಗೆ ಹೇಳಿದ್ದ. ಅದೇ ತಂಡ. ಈ ಹಿಂದೆ ಎರಡು ಬಾರಿ ಸುಬೈರ್ ಹತ್ಯೆಗೆ ಯತ್ನಿಸಿದ್ದರು" ಎಂದು ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ವಿಜಯ್ ಸಾಖರೆ ಸುದ್ದಿಗಾರರಿಗೆ ತಿಳಿಸಿದ್ದರು.
ಹೀಗಾಗಿ ಈ ಹತ್ಯೆಯೂ ಕೂಡ ರಾಜಕೀಯ ಕೊಲೆ ಪ್ರಕರಣಗಳಿಗೆ ಸೇರಿದ್ದವಾಗಿದೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.