ಕೇರಳದಲ್ಲಿ ಸಿಎಎ ವಿರುದ್ಧ 620 ಕಿಲೋ ಮೀಟರ್ ಮಾನವಸರಪಳಿ
ತಿರುವನಂತಪುರಂ, ಜನವರಿ.26: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೊಂದಣಿ ವಿರುದ್ಧ ಕೇರಳ ಸರ್ಕಾರ ಸಮರ ಸಾರಿದೆ. 71ನೇ ಗಣರಾಜ್ಯೋತ್ಸವ ದಿನಾಚರಣೆ ದಿನವೇ ಸಿಎಎ ಹಾಗೂ ಎನ್ಆರ್ ಸಿ ವಿರುದ್ಧ 620 ಕಿಲೋ ಮೀಟರ್ ಉದ್ದದ ಮಾನವಸರಪಳಿ ನಿರ್ಮಾಣ ಮಾಡಲಾಗಿದೆ.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯು ಅಸಂವಿಧಾನಿಕವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಆರೋಪಿಸಿದ್ದಾರೆ. ಸಿಎಎ ವಾಪಸ್ ಪಡೆಯುವಂತೆ ಆಗ್ರಹಿಸಿ ಭಾನುವಾರ ಕಾಸರಗೂಡಿನಿಂದ ಕೊಯಂತ್ತೂರಿನ ಕಾಲಿಯಕ್ಕವಿಲಾವರೆಗೂ 620 ಕಿಲೋ ಮೀಟರ್ ಮಾನವಸರಪಳಿ ನಿರ್ಮಾಣ ಮಾಡಲಾಗಿತ್ತು.
ದೇವರಿಗೂ ಸಿಎಎ: ತಿರುಪತಿ ತಿಮ್ಮಪ್ಪ, ಶಬರಿಮಲೆ ಅಯ್ಯಪ್ಪಗೂ ಪೌರತ್ವ!
ಕೇರಳದ ಲೆಫ್ಟ್ ಡೆಮಾಕ್ರಟಿಕ್ ಫ್ರೆಂಟ್ ಸಿಎಎ ವಿರುದ್ಧ ಮಾನವಸರಪಳಿ ನಿರ್ಮಾಣಕ್ಕೆ ಕರೆ ನೀಡಿತ್ತು. ರಾಜ್ಯಾದ್ಯಂತ 37 ಸಾವಿರ ಸಭೆಗಳನ್ನು ನಡೆಸಿದ್ದು, ಅಸಂವಿಧಾನಿಕ ಕಾಯ್ದೆಯಾಗಿರುವ ಸಿಎಎ ವಿರುದ್ಧ ಹೋರಾಟ ನಡೆಸಲು ಆಹ್ವಾನ ನೀಡಲಾಗಿತ್ತು.
70 ಲಕ್ಷ ಜನರಿಂದ ಮಾನವಸರಪಳಿ ನಿರ್ಮಾಣ:
71ನೇ ಗಣರಾಜ್ಯೋತ್ಸವ ದಿನಾಚರಣೆ ಹಿನ್ನೆಲೆ ಮಾತನಾಡಿದ ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದರು. ದೇಶವನ್ನು ಜಾತೀಯತೆಯ ಹೆಸರಿನಲ್ಲಿ ಭಯ ಬೀಳಿಸುವ ಸಂಚು ನಡೆಸಲಾಗುತ್ತಿದೆ. ಕೇರಳ ಸರ್ಕಾರ ಈಗಾಗಲೇ ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ನಾಗರಿಕ ನೊಂದಣಿಯನ್ನು ಅನುಷ್ಠಾನಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಪವಿತ್ರ ಭೂಮಿಯಲ್ಲಿ ಸಿಎಎ ಜಾರಿಗೊಳಿಸುವುದಿಲ್ಲ ಎಂದು ಸಿಎಂ ಪಿಣರಾಯ್ ವಿಜಯನ್ ಹೇಳಿದರು.
ಇನ್ನು, ಭಾನುವಾರವು ಕಾಸರಗೂಡಿನಿಂದ ಕೊಯಂತ್ತೂರ್ ವರೆಗೂ 620 ಕಿಲೋ ಮೀಟರ್ ಉದ್ದದ ಮಾನವ ಸರಪಳಿಯಲ್ಲಿ ಬರೋಬ್ಬರಿ 70 ಲಕ್ಷ ಜನರು ಭಾಗವಹಿಸಿದ್ದರು. ಇದರಲ್ಲಿ ಎಲ್ಲ ಜಾತಿ-ಧರ್ಮದ ಜನರು ಒಕ್ಕೊರಲಿನಿಂದ ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದು ಹೊಸ ದಾಖಲೆ ಬರೆದಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.