ಕೇರಳ ವಿಮಾನ ದುರಂತ; ಡಿಸಿ ಸೇರಿ 600 ಜನರಿಗೆ ಕ್ವಾರಂಟೈನ್
ತಿರುವನಂತಪುರಂ, ಆಗಸ್ಟ್ 10 : ಕೇರಳದಲ್ಲಿ ವಿಮಾನ ದುರಂತ ನಡೆದಾಗ ನೂರಾರು ಜನರು ರಕ್ಷಣಾ ಕಾರ್ಯಕ್ಕೆ ನೆರವು ನೀಡಿದ್ದರು. ಈಗ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ 600 ಜನರು ಕ್ವಾರಂಟೈನ್ಗೆ ಒಳಗಾಗಿದ್ದಾರೆ.
Recommended Video
ಕೇರಳದ ಕೋಯಿಕ್ಕೋಡ್ನಲ್ಲಿ ನಡೆದ ವಿಮಾನ ದುರಂತದಲ್ಲಿ 18 ಜನರು ಮೃತಪಟ್ಟಿದ್ದರು. 56 ಪ್ರಯಾಣಿಕರು ಗಾಯಗೊಂಡಿದ್ದರು. ದುಬೈನಿಂದ ವಂದೇ ಭಾರತ್ ಮಿಷನ್ ಅಡಿ ಕೇರಳಕ್ಕೆ ಆಗಮಿಸಿದ್ದ ವಿಮಾನ ಅಪಘಾತಕ್ಕೀಡಾಗಿತ್ತು.
'ಕೇರಳ ವಿಮಾನ ದುರಂತಕ್ಕೆ ಟೇಬಲ್ಟಾಪ್ ರನ್ವೇ ಕಾರಣವಲ್ಲ'
ಶುಕ್ರವಾರ ರಾತ್ರಿ ವಿಮಾನ ದುರಂತ ನಡೆದಾಗ ನೂರಾರು ಜನರು ಕೋವಿಡ್ ಪರಿಸ್ಥಿತಿಯನ್ನೂ ಲೆಕ್ಕಿಸದೇ ರಕ್ಷಣಾ ಕಾರ್ಯಕ್ಕೆ ನೆರವಾಗಿದ್ದರು. ಈಗ ಮಲಪ್ಪುರಂ ಜಿಲ್ಲಾಧಿಕಾರಿ ಕೆ. ಗೋಪಾಲಕೃಷ್ಣನ್ ಸೇರಿದಂತೆ 600 ಜನರು ಕ್ವಾರಂಟೈನ್ಗೆ ಒಳಗಾಗಿದ್ದಾರೆ.
ವಿಮಾನ ದುರಂತ: ಮೃತಪಟ್ಟ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಿಸಿದ ಕೇರಳ
ಪ್ರಯಾಣಿಕರು ಮತ್ತು ರಕ್ಷಣಾ ಕಾರ್ಯಕ್ಕೆ ಬಂದಿದ್ದವರಲ್ಲಿ ಯಾರಿಗೆ ಕೋವಿಡ್ ಸೋಂಕು ಇತ್ತು? ಎಂಬುದು ತಿಳಿದಿಲ್ಲ. ಆದ್ದರಿಂದ, ಮುಂಜಾಗ್ರತಾ ಕ್ರಮವಾಗಿ ಎಲ್ಲರೂ ಕ್ವಾರಂಟೈನ್ಗೆ ಒಳಗಾಗಿದ್ದಾರೆ. 14 ದಿನದ ಕ್ವಾರಂಟೈನ್ನಲ್ಲಿ ಎಲ್ಲರೂ ಇರಲಿದ್ದಾರೆ.
ಕೇರಳ ವಿಮಾನ ದುರಂತದ ಹಿಂದಿರುವ ಮೂರು ಸಂಭಾವ್ಯ ಕಾರಣಗಳು
ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿದ್ದ ಶಬೀರ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. "ವಿಮಾನ ಅಪ್ಪಳಿಸಿದ ಸದ್ದು ಕೇಳಿ ಅಲ್ಲಿಗೆ ಆಗಮಿಸಿದೆವು. ಆಗಲೇ ಸುಮಾರು 10 ಜನರು ಅಲ್ಲಿಗೆ ಆಗಮಿಸಿದ್ದರು. ವಿಮಾನಕ್ಕೆ ಬೆಂಕಿ ಹೊತ್ತಿಕೊಳ್ಳುವ ಆತಂಕ ಎದುರಾಗಿತ್ತು. ಪ್ರಯಾಣಿಕರ ಚೀರಾಟ ಕೇಳಿದಾಗ ಯಾವುದನ್ನೂ ಲೆಕ್ಕಿಸಿದೆ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆವು" ಎಂದು ಹೇಳಿದ್ದಾರೆ.
ವಿಮಾನ ಅಪಘಾತಗೊಂಡ ಸ್ಥಳ ಕಂಟೈನ್ಮೆಂಟ್ ಝೋನ್ ಆಗಿತ್ತು. ಆದರೆ, ವಿಮಾನ ದುರಂತ ಸಂಭವಿಸಿದಾಗ ಅಧಿಕಾರಿಗಳು ಜನರನ್ನು ತಡೆಯಲಿಲ್ಲ. ವಿಮಾನದಲ್ಲಿದ್ದವರ ರಕ್ಷಣೆ ಮೊದಲ ಆದ್ಯತೆ ಆಗಿತ್ತು. ಜೋರಾಗಿ ಸುರಿಯುತ್ತಿದ್ದ ಮಳೆಯ ನಡುವೆಯೂ ರಕ್ಷಣಾ ಕಾರ್ಯಾಚರಣೆ ನಡೆದಿತ್ತು.
ನೂರಾರು ಜನರು ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಕಾರು, ಆಟೋ, ಜೀಪ್ಗಳ ಮೂಲಕವೂ ಪ್ರಯಾಣಿಕರನ್ನು ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗೆ ಜನರು ಕರೆದುಕೊಂಡು ಹೋದರು. ದುರಂತ ನಡೆದಾಗ ಜನರು ಸ್ಪಂದಿಸಿದ ರೀತಿಗೆ ಏರ್ ಇಂಡಿಯಾ ಸಹ ಮೆಚ್ಚುಗೆ ಸೂಚಿಸಿದೆ.