ಶಬರಿಮಲೆ ಅಯ್ಯಪ್ಪಸ್ವಾಮಿ ಭಕ್ತರಿಗೆ ಸಂತಸದ ಸುದ್ದಿ
ತಿರುವನಂತಪುರಂ, ಡಿಸೆಂಬರ್ 17: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವರ ಸನ್ನಿಧಿಗೆ ಬರುವ ಭಕ್ತರ ಸಂಖ್ಯೆಗೆ ವಿಧಿಸಲಾಗಿರುವ ಗರಿಷ್ಠ ಮಿತಿಯನ್ನು ಹೆಚ್ಚಿಸಲು ಟ್ರ್ಯಾವಂಕೋರ್ ದೇವಸ್ವಂ ಮಂಡಳಿ ನಿರ್ಧರಿಸಿದೆ. ಭಕ್ತರ ಸಂಖ್ಯೆನ್ನು 2,000 ದಿಂದ 5,000ಕ್ಕೆ ಹೆಚ್ಚಿಸುವಂತೆ ಕೇರಳ ಹೈಕೋರ್ಟ್ ಬುಧವಾರ ಸೂಚನೆ ನೀಡಿತ್ತು. ನ್ಯಾಯಾಲಯದ ನಿರ್ದೇಶನದಂತೆ ದೇವಸ್ಥಾನದ ಮಂಡಳಿಯು ಭಕ್ತರ ಸಂಖ್ಯೆ ಹೆಚ್ಚಳಕ್ಕೆ ಒಪ್ಪಿಗೆ ನೀಡಿದೆ.
ಶಬರಿಮಲೆಗೆ ಮಂಡಲ-ಮಕರವಿಳಕ್ಕು ಅವಧಿಯಲ್ಲಿ ಭೇಟಿ ನೀಡುವ ಭಕ್ತರ ಸಂಖ್ಯೆಗೆ ಕೊರೊನಾ ವೈರಸ್ ಸೋಂಕಿನ ಕಾರಣದಿಂದ ಮಿತಿ ಹೇರಲಾಗಿದೆ. ಕಳೆದ ತಿಂಗಳಷ್ಟೇ ಭಕ್ತರ ಪ್ರವೇಶದ ಸಂಖ್ಯೆಯನ್ನು 1,000 ದಿಂದ 2,000ಕ್ಕೆ ವಾರದ ದಿನಗಳಲ್ಲಿ ಮತ್ತು ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ 3,000ಕ್ಕೆ ಹೆಚ್ಚಿಸಲಾಗಿತ್ತು. ಈಗ ಹೈಕೋರ್ಟ್ ಸೂಚನೆಯಂತೆ ದೈನಂದಿನ ಭಕ್ತರ ಸಂಖ್ಯೆಯ ಮಿತಿಯನ್ನು 5,000ಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದೆ.
ಶಬರಿಮಲೆ: ಮಾರ್ಗಸೂಚಿ ಪರಿಷ್ಕರಣೆ, ಭಕ್ತರು ಪಾಲಿಸಬೇಕಾಗಿದ್ದಿಷ್ಟು
ಈ ನಿರ್ಧಾರವು ಡಿಸೆಂಬರ್ 20ರಿಂದ ಜಾರಿಗೆ ಬರಲಿದೆ. ಆದರೆ ದೇವಸ್ಥಾನಕ್ಕೆ ಬರುವ ಭಕ್ತರು ಎಲ್ಲ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ. ಈ ಸಂಬಂಧ ಕೇರಳ ಆರೋಗ್ಯ ಇಲಾಖೆ ಪರಿಷ್ಕೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಶನಿವಾರ ಮತ್ತು ಭಾನುವಾರದ ರಜಾ ದಿನಗಳಂದು ಭಕ್ತರ ಸಂಖ್ಯೆ ಹೆಚ್ಚಿಸುವ ನಿರ್ಧಾರವನ್ನು ಉನ್ನತ ಮಟ್ಟದ ಸಮಿತಿ ತೆಗೆದುಕೊಳ್ಳಲಿದೆ.
ಸ್ವಾಮಿ ಅಯ್ಯಪ್ಪನಿಗೆ ಪತ್ರ ತಲುಪಿಸುವ ವಿಶಿಷ್ಟ ಅಂಚೆ ಕಚೇರಿ
ಶಬರಿಮಲೆ ದೇವಸ್ಥಾನದ ಭಕ್ತರ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಭಕ್ತರು ಭೇಟಿಗೂ 48 ಗಂಟೆಗಳ ಮುನ್ನ ಆರ್ಟಿ-ಪಿಸಿಆರ್ ಪರೀಕ್ಷೆ ಮೂಲಕ ಕೋವಿಡ್ ಸೋಂಕಿನ ಪರೀಕ್ಷೆಗೆ ಒಳಗಾಗಬೇಕು ಎಂದು ಸೂಚಿಸಿದೆ.