ಶಬರಿಮಲೆ ಬಾಗಿಲು ತೆರೆದು ಈವರೆಗೆ 39 ಕೊರೊನಾ ಸೋಂಕಿತರು ಪತ್ತೆ
ಶಬರಿಮಲೆ, ನವೆಂಬರ್ 27:ಕೊರೊನಾ ಲಾಕ್ಡೌನ್ ಬಳಿಕ ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲ ಬಾಗಿಲು ತೆಗೆದಾಗಿನಿಂದ ಇಲ್ಲಿಯವರೆಗೆ 39 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.
ನವೆಂಬರ್ 16 ರಂದು ಅಯ್ಯಪ್ಪಸ್ವಾಮಿ ದೇವಾಲಯ ಬಾಗಿಲು ತೆರೆದಿತ್ತು. ಪೊಲೀಸ್ ಸಿಬ್ಬಂದಿ, ದೇವಾಲಯ ನೌಕರರು ಸೇರಿ 39 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಶಬರಿಮಲೆ ಭಕ್ತರ ಸಂಖ್ಯೆ ಹೆಚ್ಚಳಕ್ಕೆ ತೀರ್ಮಾನ
ಒಟ್ಟು ಕೊರೊನಾ ಸೋಂಕಿತರಲ್ಲಿ ನಾಲ್ವರು ಟಿಡಿಬಿಯ ಸಿಬ್ಬಂದಿ , ಇಬ್ಬರು ತಾತ್ಕಾಲಿಕ ಸಿಬ್ಬಂದಿಯೂ ಸೇರಿದ್ದಾರೆ.
ಪ್ರತಿ ವರ್ಷವು ಲಕ್ಷಾಂತರ ಮಂದಿ ಭಕ್ತರು ಭೇಟಿ ನೀಡುತ್ತಾರೆ. ಈ ಬಾರಿ ಕೊವಿಡ್ ಮಾರ್ಗಸೂಚಿಯ ಪ್ರಕಾರ 10-60 ವಯಸ್ಸಿನವರಿಗೆ ಮಾತ್ರ ದೇಗುಲಕ್ಕೆ ಅವಕಾಶ ನೀಡಲಾಗಿದೆ.ದೇವಸ್ಥಾನದಲ್ಲಿ ಕೊವಿಡ್ 19 ಮಾರ್ಗಸೂಚಿಗಳನ್ನು ಬಿಡದೇ ಪಾಲಿಸಲಾಗುತ್ತಿದೆ. ದೇವಾಲಯದ ಮೂಲ ಶಿಬಿರ, ಆವರಣದಲ್ಲಿ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ತಿರುವಂಕೂರು ದೇವಸ್ವಂ ಮಂಡಳಿಯ ಮೂಲಗಳ ಪ್ರಕಾರ, ಒಟ್ಟು ಪ್ರಕರಣಗಳಲ್ಲಿ 27 ಮಂದಿ ವಿವಿಧ ಇಲಾಖೆಗಳ ನೌಕರರಾಗಿದ್ದು, ಎಲ್ಲರೂ ಕೊವಿಡ್ ಚಿಕಿತ್ಸಾ ಕೇಂದ್ರಗಳಿಗೆ ಕಳುಹಿಸಲಾಗಿದೆ.
ಶಬರಿಮಲೆ ಸ್ವಾಮಿ ಅಯ್ಯಪ್ಪನ ಸನ್ನಿಧಿಗೆ ಮಂಡಲಂ-ಮಕರವಿಳಕ್ಕು ಅವಧಿಯಲ್ಲಿ ಬರುತ್ತಿರುವ ಭಕ್ತರ ಗರಿಷ್ಠ ಸಂಖ್ಯೆಯ ಮಿತಿಯನ್ನು ಹೆಚ್ಚಿಸಲು ಅನುಮತಿ ನೀಡಲಾಗಿದೆ.
ಮುಖ್ಯ ಕಾರ್ಯದರ್ಶಿ ವಿಶ್ವಾಸ್ ಮೆಹ್ತಾ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಭಕ್ತರ ಸಂಖ್ಯೆಯ ಹೆಚ್ಚಳಕ್ಕೆ ಅವಕಾಶ ನೀಡುವ ಪ್ರಸ್ತಾಪಕ್ಕೆ ಅನುಮೋದನೆ ನೀಡಲಾಗಿದೆ.
ಕೇರಳ ಸರ್ಕಾರದೊಂದಿಗೆ ಸಮಾಲೋಚಿಸಿ ಶುಕ್ರವಾರದ ಬಳಿಕ ಭಕ್ತರ ಸಂಖ್ಯೆಯನ್ನು ಎಷ್ಟು ಹೆಚ್ಚಿಸಬೇಕು ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.
ಭಕ್ತರ ಸಂಖ್ಯೆ ಹೆಚ್ಚಿಸಲು ಟ್ರಾವಂಕೋರ್ ದೇವಸ್ವಂ ಮಂಡಳಿ ಸರ್ಕಾರಕ್ಕೆ ಮನವಿ ಮಾಡಿತ್ತು. ಎಷ್ಟರ ಮಟ್ಟಿಗೆ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ ಎನ್ನುವುದು ದೃಢಪಟ್ಟಿಲ್ಲ.