ಶಬರಿಮಲೆಯಲ್ಲಿ 6 ಅರ್ಚಕರನ್ನೊಳಗೊಂಡು 37 ಮಂದಿಗೆ ಕೊರೊನಾ ಸೋಂಕು
ತಿರುವನಂತಪುರಂ, ಜನವರಿ 02: ಕೊರೊನಾ ಸೋಂಕಿನ ಭೀತಿ ನಡುವೆಯೇ ಶಬರಿಮಲೆಯಲ್ಲಿ ಭಕ್ತರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಶಬರಿಮಲೆ ಸನ್ನಿಧಾನಕ್ಕೆ ಮಕರವಿಳಕ್ಕು ಅವಧಿಯಲ್ಲಿ ಬರುವ ಭಕ್ತರ ಸಂಖ್ಯೆಯನ್ನೂ 5000ಕ್ಕೆ ಏರಿಸಲಾಗಿದೆ.
ಇದೀಗ ಶಬರಿಮಲೆಯಲ್ಲಿ ಆರು ಅರ್ಚಕರನ್ನೊಳಗೊಂಡಂತೆ 37 ಜನರಿಗೆ ಕೊರೊನಾ ಸೋಂಕು ಇರುವುದಾಗಿ ತಿಳಿದುಬಂದಿದೆ. ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿದ್ದಂತೆ ದೇವಸ್ಥಾನ ಆಡಳಿತ ಮಂಡಳಿಯು ಎಚ್ಚೆತ್ತುಕೊಂಡಿದೆ. ಕೊರೊನಾ ಲಕ್ಷಣಗಳು ಕಾಣಿಸಿಕೊಂಡ ತಕ್ಷಣವೇ ಎಲ್ಲರನ್ನೂ ಐಸೊಲೇಷನ್ ನಲ್ಲಿರಿಸಲಾಗಿದೆ.
ಶಬರಿಮಲೆ: ಭಕ್ತರಿಂದ 40 ನಕಲಿ ಕೋವಿಡ್ ಪರೀಕ್ಷೆ ಪ್ರಮಾಣ ಪತ್ರ ವಶ
ಜೊತೆಗೆ ಅವರ ಜೊತೆ ಕೆಲವು ದಿನಗಳಿಂದ ಸಂಪರ್ಕದಲ್ಲಿದ್ದವರಿಗೆ ತಕ್ಷಣವೇ ಕೊರೊನಾ ಪರೀಕ್ಷೆಗೆ ಒಳಪಡುವಂತೆ ತಿರುವನಂತಪುರಂ ಅಧಿಕಾರಿಗಳು ಸೂಚಿಸಿದ್ದಾರೆ.
ಶಬರಿಮಲೆಗೆ ಕೆಲವು ನಿಬಂಧನೆಗಳೊಂದಿಗೆ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಶಬರಿಮಲೆ ಪ್ರವೇಶಿಸುವವರು ಕನಿಷ್ಠ 48 ಗಂಟೆಗಳ ಮುನ್ನ ಪರೀಕ್ಷೆಗೊಳಗಾಗಿ ಕೋವಿಡ್ ನೆಗೆಟಿವ್ ವರದಿ ತರುವುದು ಕಡ್ಡಾಯವಾಗಿದೆ. ಹೆಚ್ಚಿನವರಿಗೆ ಕೋವಿಡ್ ಪರೀಕ್ಷೆ ಪ್ರಮಾಣ ಪತ್ರವಿಲ್ಲದ ಕಾರಣ ಪ್ರವೇಶಾವಕಾಶ ದೊರೆತಿರಲಿಲ್ಲ. ಇದರ ಬೆನ್ನಲ್ಲೇ ಗುರುವಾರ ಒಂದೇ ದಿನ ನಿಳಕ್ಕಳ್ ನಲ್ಲಿ ಕಂಟ್ರೋಲ್ ರೂಂನ ಪೊಲೀಸರು ಭಕ್ತರಿಂದ ಸುಮಾರು 40 ನಕಲಿ ಕೋವಿಡ್ ಪ್ರಮಾಣಪತ್ರಗಳನ್ನು ವಶಪಡಿಸಿಕೊಂಡಿದ್ದರು.
ಇದೀಗ 37 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ದೇವಸ್ಥಾನ ಆಡಳಿತ ಮಂಡಳಿಯಲ್ಲಿ ಆತಂಕ ತಂದಿದೆ.