ಕೇರಳದಲ್ಲಿ ಪೊಲೀಸರ ಕಾರ್ಯಾಚರಣೆ: ಕರ್ನಾಟಕ ಮೂಲದ ನಕ್ಸಲರ ಹತ್ಯೆ
ಕೊಚ್ಚಿ, ಅಕ್ಟೋಬರ್ 29: ಕೇರಳದಲ್ಲಿ ಪೊಲೀಸರು ಹಾಗೂ ಮಾವೋವಾದಿಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮಾವೋವಾದಿಗಳನ್ನು ಹತ್ಯೆ ಮಾಡಲಾಗಿದೆ.
ಮೃತಪಟ್ಟ ಮೂವರಲ್ಲಿ ಇಬ್ಬರು ನಕ್ಸಲರು ಕರ್ನಾಟಕದವರು ಎನ್ನುವ ಮಾಹಿತಿ ಲಭ್ಯವಾಗಿದೆ. ಆ ಇಬ್ಬರು ಚಿಕ್ಕಮಗಳೂರಿನವರು, ಶ್ರೀಮತಿ ಹಾಗೂ ಸುರೇಶ್ ಹತ್ಯೆಯಾದ ನಕ್ಸಲರಾಗಿದ್ದಾರೆ.
ಶ್ರೀಮತಿ 2008ರಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದಳು, ಇವಳ ಮೇಲೆ ಸುಮಾರು 10-12 ಪ್ರಕರಣಗಳು ದಾಖಲವಾಗಿವೆ. ಶೃಂಗೇರಿ ತಾಕೂಲಿನ ಬೆಳಗೋಡು ಕೂಡಿಗೆ ಗ್ರಾಮದವಳಾಗಿದ್ದಾಳೆ.
ಸುರೇಶ್ ಅಲಿಯಾಸ್ ಮಹೇಶ್ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದವನಾಗಿದ್ದ. 2004ರಲ್ಲೇ ನಕ್ಸಲ್ಗೆ ಸೇರಿದ್ದ, ನಕ್ಸಲ್ ಆರಂಭ ದಿನಗಳಲ್ಲೇ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದ, ಆತನ ಮೇಲೆ ಸುಮಾರು 40 ಪ್ರಕರಣಗಳಿವೆ.
ಪಾಲಕ್ಕಡ್ನ ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಪೊಲೀಸರ ಗುಂಡಿಗೆ ಮೂವರು ಮಾವೋವಾದಿಗಳು ಹತರಾಗಿದ್ದಾರೆ. ಕೇರಳದ ಥಂಡರ್ಬೋಲ್ಟ್ ಕಮಾಂಡೋ ತಂಡವು ಈ ಕಾರ್ಯಚರಣೆ ನಡೆಸಿದ್ದು, ಯಶಸ್ವಿಯಾಗಿ ಮೂವರನ್ನು ಹತ್ಯೆ ಮಾಡಿದೆ.
ಇತ್ತೀಚಿಗೆ ಮಾವೋವಾದಿಗಳ ಉಪಟಳ ಕೇರಳದಲ್ಲಿ ಜಾಸ್ತಿಯಾಗಿದ್ದು, ಇವರನ್ನು ಸದೆಬಡಿಯಲು ಕೇರಳ ಪೊಲೀಸರು ಕಾದು ಕುಳಿತಿದ್ದರು.
ಅದರಂತೆ ಇಂದು ಬೆಳಗ್ಗೆ ಮಾವೋವಾದಿಗಳು ಪಲಕ್ಕಾಡ್ನ ಅರಣ್ಯ ಪ್ರದೇಶದಲ್ಲಿ ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ದಾರೆ. ಈ ವೇಳೆ ಪಲಕ್ಕಾಡ್ ಅರಣ್ಯದ ಮಂಚಕತ್ತಿ ಎಂಬ ಪ್ರದೇಶದಲ್ಲಿ ಪೊಲೀಸರು ಮತ್ತು ಮಾವೋವಾದಿಗಳ ನಡುವೆ ಗುಂಡಿನ ಚಕಮಕಿಯಾಗಿ ಮೂವರು ಸಾವನ್ನಪ್ಪಿದ್ದಾರೆ.
ಇನ್ನೂ ಅಪಾರ ಪ್ರಮಾಣದಲ್ಲಿ ಮಾವೋವಾದಿಗಳು ಈ ಪ್ರದೇಶದಲ್ಲಿ ಅಡಗಿರಬಹುದು ಎಂದು ಕೊಂಬಿಂಗ್ ಕಾರ್ಯ ಮುಂದುವರೆದಿದೆ. ಉಳಿದ ಮಾವೋವಾದಿಗಳಿಗಾಗಿ ಕೇರಳ ಪೊಲೀಸರು ಶೋಧ ಕಾರ್ಯ ಮಾಡುತ್ತಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳೆಲ್ಲ ಸ್ಥಳಕ್ಕೆ ಬಂದಿದ್ದು, ಪರೀಶಿಲನೆ ಮಾಡುತ್ತಿದ್ದಾರೆ. ಸದ್ಯ ಸಾವನ್ನಪ್ಪಿದ ಮಾವೋವಾದಿಗಳ ಗುರುತು ಪತ್ತೆಯಾಗಿಲ್ಲ.2014 ರಿಂದ 2017 ರ ವರೆಗೆ ಕೇರಳದಲ್ಲಿ ಮಾವೋವಾದಿಗಳಿಂದ 23 ವಿವಿಧ ಕೇಸ್ಗಳು ದಾಖಲಾಗಿದ್ದವು.
ಕೆಳೆದ ಕೆಲ ವರ್ಷಗಳಿಂದ ಕರ್ನಾಟಕ ತಮಿಳುನಾಡು ಮತ್ತು ಕೇರಳದಲ್ಲಿ ಮಾವೋವಾದಿಗಳು ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಲು ಪ್ರಯತ್ನ ಪಡುತ್ತಿದ್ದಾರೆ ಎಂದು ಹೇಳಲಾಗಿತ್ತು.
ಆದ್ದರಿಂದ ಕೆಲ ಸೂಕ್ಷ್ಮ ಪ್ರದೇಶದ ಮೇಲೆ ಪೊಲೀಸರು ಕಣ್ಣಿಟ್ಟಿದ್ದರು. ಆದರೆ ಕೇರಳದಲ್ಲಿ ಬಿಟ್ಟರೆ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಮಾವೋವಾದಿಗಳು ಕಾಣಿಸಿಕೊಂಡಿರಲಿಲ್ಲ.