ನಟಿ ಮೇಲೆ ಅತ್ಯಾಚಾರ ಪ್ರಕರಣ: ಶರತ್ಗೆ ಜಾಮೀನು
ಕೊಚ್ಚಿ, ಮೇ 17: ಐದು ವರ್ಷಗಳ ಹಿಂದಿನ ಕೇರಳ ಅತ್ಯಾಚಾರ ಪ್ರಕರಣದ ಆರೋಪಿ ಶರತ್ ನಾಯರ್ ನಿನ್ನೆ ಸೋಮವಾರ ರಾತ್ರಿ ಜಾಮೀನು ಪಡೆದಿದ್ದಾರೆ. 2017ರಲ್ಲಿ ನಟಿಯೊಬ್ಬರ ಮೇಲೆ ಲೈಂಗಿಕ ಹಲ್ಲೆ ನಡೆದ ಆರೋಪದ ಪ್ರಕರಣ ಇದಾಗಿದ್ದು, ಶರತ್ ನಾಯರ್ನನ್ನು ಕೇರಳ ಕ್ರೈಂ ವಿಭಾಗದ ಪೊಲೀಸರು ಸೋಮವಾರ ಬಂಧಿಸಿದ್ದರು. ಕೆಲ ಗಂಟೆಗಳ ನಂತರ ನ್ಯಾಯಾಲಯದಿಂದ ಜಾಮೀನು ಸಿಕ್ಕು ಹೊರಬಂದಿದ್ದಾರೆ.
ಈ ಪ್ರಕರಣದ ಪ್ರಮುಖ ಆರೋಪಿ ನಟ ದಿಲೀಪ್ನ ಆಪ್ತನೆನ್ನಲಾದ ಶರತ್ ಜಿ ನಾಯರ್ ತಾನು ಅಮಾಯಕ ಎಂದು ಮಾಧ್ಯಮಗಳೆದುರು ಹೇಳಿದ್ದಾರೆ. "ನಾನು ಅಮಾಯಕ. ತನಿಖಾ ತಂಡಕ್ಕೆ ನನಗೆ ಗೊತ್ತಿರುವಷ್ಟನ್ನೂ ಹೇಳಿದ್ದೇನೆ. ನನ್ನ ಮೇಲೆ ಮಾಡಿರುವ ಆರೋಪಗಳು ಸುಳ್ಳು. ಘಟನೆಯ ದೃಶ್ಯಗಳು ನನ್ನ ಬಳಿ ಇಲ್ಲ. ಅದನ್ನು ನಾನಿನ್ನೂ ನೋಡಿಲ್ಲ. ಅಧಿಕಾರಿಗಳು ಬೆಳಗ್ಗೆ 11ರಿಂದ ರಾತ್ರಿ೮ರವರೆಗೆ ನನ್ನ ವಿಚಾರಣೆ ಮಾಡಿದ್ದಾರೆ. ಈಗ ನನಗೆ ಜಾಮೀನು ಸಿಕ್ಕಿದೆ" ಎಂದು ಶರತ್ ನಾಯರ್ ಹೇಳಿದ್ದಾರೆಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸೂಪರ್ ಸ್ಟಾರ್ ದಿಲೀಪ್ ಜೀವನದ ಹೂವು, ಮುಳ್ಳುಗಳ ಹಾದಿ
ದಿಲೀಪ್ ಕೃತ್ಯಗಳಿಗೆ ಶರತ್ ಸಾಥ್
ಈ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಶರತ್ ನಾಯರ್ ಆರನೇ ಆರೋಪಿಯಾಗಿದ್ದಾರೆ. ಪ್ರಕರಣದಲ್ಲಿ ಸಾಕ್ಷ್ಯಾಧಾರವನ್ನು ಮರೆಮಾಚಿದ ಮತ್ತು ನಾಶ ಮಾಡಿದ ಆರೋಪ ಅವರ ಮೇಲಿದೆ. ನಟಿಯ ಮೇಲೆ ಲೈಂಗಿಕ ಹಲ್ಲೆ ಎಸಗುವ ದೃಶ್ಯವನ್ನು ಚಿತ್ರೀಕರಿಸಲಾಗಿದ್ದು ವಿಡಿಯೋವನ್ನು ಪ್ರಮುಖ ಆರೋಪಿ ದಿಲೀಪ್ ಮನೆಗೆ ತಂದದ್ದು ಇದೇ ಶರತ್ ಎನ್ನಲಾಗಿದೆ. ತನಿಖಾ ತಂಡದ ಅಧಿಕಾರಿಗಳನ್ನು ಕೊಲ್ಲಲು ಸಂಚು ರೂಪಿಸಿದ ಆರೋಪವೂ ಶರತ್ ಮೇಲಿದೆ.
ನಟ ದಿಲೀಪ್ ಮಾಜಿ ಪತ್ನಿ, ಸೂಪರ್ ಸ್ಟಾರ್ ನಟಿ ಚುನಾವಣಾ ಕಣಕ್ಕೆ
ಯಾರು ಈ ಶರತ್ ನಾಯರ್?
ಕೇರಳದ ಕೆಲ ಮಾಧ್ಯಮಗಳಲ್ಲಿ ಬಂದ ವರದಿಗಳ ಪ್ರಕಾರ ನಟ ದಿಲೀಪ್ರ ಸ್ನೇಹಿತನಾದ ಶರತ್ ಮೂಲತಃ ಬಡಕುಟುಂಬದಿಂದ ಬೆಳೆದು ಸಿರಿವಂತನಾದ ವ್ಯಕ್ತಿ. ಊಟಿಯಲ್ಲಿ ರೆಸಾರ್ಟ್, ಅಳುವಾದಲ್ಲಿ ಹೋಟೆಲ್ ಹೊಂದಿದ್ದಾರೆ. 25 ಟೂರಿಸ್ಟ್ ಬಸ್ಗಳ ಒಡೆಯರಾಗಿದ್ದಾರೆ. ತನ್ನ ಸಹಪಾಠಿಯೊಬ್ಬರ ಮೂಲಕ ನಟ ದಿಲೀಪ್ನ ಪರಿಚಯವಾಗಿದೆ. ಇದಾದ ಬಳಿಕ ದಿಲೀಪ್ ಮತ್ತು ಶರತ್ ಇಬ್ಬರೂ ಆಪ್ತರಾಗಿದ್ದಾರೆ. ದಿಲೀಪ್ ಇದ್ದ ಹೋಟೆಲ್ಗೆ ತಿಂಡಿ ಊಟ ಇತ್ಯಾದಿಯನ್ನು ಶರತ್ ವ್ಯವಸ್ಥೆ ಮಾಡುತ್ತಿದ್ದನೆನ್ನಲಾಗಿದೆ.
ಏನಿದು ನಟಿ ಅತ್ಯಾಚಾರ ಪ್ರಕರಣ?
2017ರಲ್ಲಿ ಮಲಯಾಳಂ, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದ ನಟಿಯೊಬ್ಬರನ್ನು ಅಪಹರಿಸಲಾಗಿತ್ತು. ಕಾರೊಂದರಲ್ಲಿ ಆಕೆಯ ಮೇಲೆ ಲೈಂಗಿಕ ಕಿರುಕುಳ ನೀಡಲಾಗಿದೆ. ಈ ಕೃತ್ಯದಲ್ಲಿ ಹಲವು ಭಾಗಿಯಾಗಿದ್ದರೆಂಬ ಆರೋಪ ಇದೆ. ಪಲ್ಸರ್ ಸುನಿ ಈ ಪ್ರಕರಣದಲ್ಲಿ ಪ್ರಮುಖ ಆರೋಪಿ. ನಟ ದಿಲೀಪ್ ಸೂಚನೆ ಮೇರೆಗೆ ಆಕೆಯನ್ನು ಅಪಹರಿಸಿ ಹಲ್ಲೆ ಮಾಡಲಾಗಿತ್ತೆನ್ನಲಾಗಿದೆ. ಈ ವರ್ಷ ಜನವರಿಯಲ್ಲಿ ಸಾಕ್ಷ್ಯಾಧಾರ ಕೊರತೆಯಿಂದ ಪ್ರಕರಣ ಮುಚ್ಚಿಹೋಗುತ್ತಿತ್ತು. ಆದರೆ, ನಿರ್ದೇಶಕ ಬಾಲಚಂದ್ರ ಕುಮಾರ್ ಕೆಲ ಸಾಕ್ಷ್ಯಗಳನ್ನು ಒದಗಿಸಿದ ಹಿನ್ನೆಲೆಯಲ್ಲಿ ಮತ್ತೆ ಹೊಸ ಪ್ರಕರಣ ಶುರುವಾಯಿತು. ಪ್ರಕರಣದ ತನಿಖಾಧಿಕಾರಿಗಳನ್ನು ಕೊಲ್ಲಲು ಸಂಚು ರೂಪಿಸಿದ ಸಂಗತಿ ಬೆಳಕಿಗೆ ಬಂದಿತ್ತು.
ನಟಿ ಕಾವ್ಯಾ ಮಾಧವನ್ ಪಾತ್ರ?
ನಟ ದಿಲೀಪ್ನ ಹೆಂಡತಿ ಕಾವ್ಯಾ ಮಾಧವನ್ ಈ 2017ರ ಘಟನೆಯಲ್ಲಿ ಪಾತ್ರ ಹೊಂದಿದ್ದಾರೆ. ನಟಿಯ ಅಪಹರಣಕ್ಕೆ ಸಂಚು ರೂಪಿಸಿದವರಲ್ಲಿ ಈಕೆಯೂ ಇದ್ದಾರೆ ಎಂಬ ಆರೋಪ ಇದೆ. ಅಲ್ಲದೇ ತನಿಖಾಧಿಕಾರಿಗಳ ಹತ್ಯೆಗೆ ಸಂಚು ರೂಪಿಸಿದ ಆರೋಪವೂ ಇದೆ. ಇತ್ತೀಚೆಗೆ ತನಿಖಾ ತಂಡದಿಂದ ಸುದೀರ್ಘವಾಗಿ ನಟಿ ಕಾವ್ಯ ಮಾಧವನ್ ವಿಚಾರಣೆ ನಡೆಸಲಾಗಿದ್ದು, ಕಾವ್ಯ ಬ್ಯಾಂಕ್ ಖಾತೆ, ಆರ್ಥಿಕ ವ್ಯವಹಾರ, ಈ ಪ್ರಕರಣದ ಸಂಚು ರೂಪಿಸುವಲ್ಲಿ ಆಕೆ ಪಾತ್ರ ಬಗ್ಗೆ ಹೆಚ್ಚಿನ ತನಿಖೆಯನ್ನು ನಿರೀಕ್ಷಿಸಲಾಗಿದೆ.
(ಒನ್ಇಂಡಿಯಾ ಸುದ್ದಿ)