ಕೇರಳದಲ್ಲಿ ಮತ್ತೊಮ್ಮೆ ಸಾವಿನ ನಗಾರಿ ಬಾರಿಸಿದ ಹಂದಿಜ್ವರ ಭೀತಿ
ತಿರುವನಂತಪುರಂ, ಜನವರಿ.09: ಕೇರಳದಲ್ಲಿ ಸಾವಿನ ನಗಾರಿ ಬಾರಿಸಿದ ಮಾರಕ ರೋಗ ಹಂದಿಜ್ವರ ಮತ್ತೊಮ್ಮೆ ಜನರನ್ನು ಆಂತಕಕ್ಕೆ ತಳ್ಳಿದೆ. ಒಂದೇ ಒಂದು ಶಾಲೆಯಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ 150ಕ್ಕೂ ಹೆಚ್ಚು ಜನರಲ್ಲಿ ಹೆಚ್1ಎನ್1 ರೋಗದ ಲಕ್ಷಣಗಳು ಕಾಣಿಸಿಕೊಂಡಿವೆ.
ಕೇರಳ ಕೋಜಿಕೋಡ್ ನ ಕರೆಸೆರ್ರಿ ಪಂಚಾಯಿತಿ ವ್ಯಾಪ್ತಿಯಲ್ಲಿ ಹಂದಿಜ್ವರದ ಭೀತಿ ಹೆಚ್ಚಾಗಿದೆ. ಅನಯಂಕಣ್ಣು ಪ್ರೌಢಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ 150ಕ್ಕೂ ಹೆಚ್ಚು ಜನರಲ್ಲಿ ಹಂದಿಜ್ವರದ ಲಕ್ಷಣಗಳು ಕಂಡು ಬಂದಿದ್ದು, ಜನರಲ್ಲಿ ಆಂತಕವನ್ನು ಹೆಚ್ಚಿಸಿದೆ.
ರಾಜ್ಯದಲ್ಲಿ ಎಚ್1ಎನ್1ನಿಂದ 39 ಮಂದಿ ಸಾವು: ಸೋಂಕಿತರ ಸಂಖ್ಯೆ 1428
ಮಾರಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ವೈಯನಾಡು ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಎಐಸಿಸಿಯ ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ, ಕೇರಳದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರಿಗೆ ಪತ್ರವನ್ನು ಬರೆದಿದ್ದಾರೆ.
ಹೆಚ್1ಎನ್1 ಕಡಿವಾಣಕ್ಕೆ ರಾಹುಲ್ ಗಾಂಧಿ ಮನವಿ:
ಕೇರಳದಲ್ಲಿ ಹರಡುತ್ತಿರುವ ಹಂದಿಜ್ವರವನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿ ರಾಹುಲ್ ಗಾಂಧಿ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ. ರಾಜ್ಯದ ಹಲವೆಡೆಗಳಲ್ಲಿ ಸರ್ಕಾರದ ವತಿಯಿಂದ ಆರೋಗ್ಯ ಶಿಬಿರಗಳನ್ನು ನಡೆಸಬೇಕು. ಜನರಲ್ಲಿ ರೋಗ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಬೇಕು. ಈಗಾಗಲೇ ಹೆಚ್1ಎನ್1 ಲಕ್ಷಣಗಳು ಕಾಣಿಸಿಕೊಂಡ ಜನರಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ರಾಹುಲ್ ಗಾಂಧಿ ಕೇರಳ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.