ಪಂಬಾದಲ್ಲಿ ಮತ್ತೆ ಭುಗಿಲೆದ್ದ ಆಕ್ರೋಶ, ಮಹಿಳೆಯರ ಪ್ರವೇಶಕ್ಕೆ ವಿರೋಧ
ಪಂಬಾ (ಕೇರಳ), ಡಿಸೆಂಬರ್ 23: ಐವತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಹನ್ನೊಂದು ಮಹಿಳೆಯರು ಭಾನುವಾರ ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ತೆರಳುವುದನ್ನು ತಡೆಯಲಾಗಿದೆ. ಅಯ್ಯಪ್ಪ ದೇಗುಲಕ್ಕೆ ವಾರ್ಷಿಕ ಯಾತ್ರೆ ನಡೆಯುತ್ತಿದ್ದು, ನೂರಾರು ಸಂಖ್ಯೆಯಲ್ಲಿದ್ದವರ ಪ್ರತಿಭಟನೆಗೆ ಮಣಿದ ಪೊಲೀಸರು ದರ್ಶನಕ್ಕೆ ತೆರಳುವವರಿಗೆ ಭದ್ರತೆ ಒದಗಿಸಲು ಸಾಧ್ಯವಿಲ್ಲ ಎಂದು ಪಂಬಾದಲ್ಲಿ ತಡೆದಿದ್ದಾರೆ.
ಹನ್ನೊಂದರ ಪೈಕಿ ಆರು ಮಹಿಳೆಯರು ದೇಗುಲದಲ್ಲಿ ಅಯ್ಯಪ್ಪ ದರ್ಶನಕ್ಕೆ ತೆರಳಲು ನಿರ್ಧರಿಸಿದ್ದರು. "ಭದ್ರತೆ ಒದಗಿಸಲು ಸಾಧ್ಯವೇ ಇಲ್ಲ ಎಂದು ದೇಗುಲಕ್ಕೆ ನಾಲ್ಕು ಕಿಲೋಮೀಟರ್ ಹಿಂದೆಯೇ ಪಂಬಾ ಬಳಿಯೇ ತಡೆಯಲಾಗಿದೆ" ಎಂದು ಮಹಿಳೆಯರು ತಮ್ಮ ಅಸಮಾಧಾನ ಹೇಳಿಕೊಂಡಿದ್ದಾರೆ.
ಶಬರಿಮಲೆ ದೇವಾಲಯದಲ್ಲಿ ಭಾರೀ ಅಪಚಾರ: ಕ್ಷಮೆಯಾಚಿಸಿದ ಪೊಲೀಸ್
ಯಾವಾಗ ಮಹಿಳೆಯರು ಪ್ರವೇಶಕ್ಕೆ ಯತ್ನಿಸುತ್ತಿದ್ದಾರೆ ಎಂದು ಗೊತ್ತಾಯಿತೋ ಪ್ರತಿಭಟನೆ ಜೋರಾಗಿದೆ. ಈ ಮಹಿಳೆಯರನ್ನು ಬೆಟ್ಟದ ಮೇಲೆ ಬಿಡಲು ಸಾಧ್ಯವೇ ಇಲ್ಲ ಎಂದು ಪ್ರತಿಭಟನಾನಿರತರು ಪಟ್ಟು ಹಿಡಿದಿದ್ದಾರೆ. ಅದಕ್ಕೂ ಮುನ್ನ, ದೇವರ ದರ್ಶನ ಪಡೆದು, ಪ್ರಾರ್ಥನೆ ಸಲ್ಲಿಸದ ಹೊರತು ವಾಪಸ್ ಹೋಗುವುದಿಲ್ಲ ಎಂದಿದ್ದಾರೆ.
ಮದುರೈನಿಂದ ಪಂಬಾ ತನಕ ಭದ್ರತೆ
ಪಂಬಾಗೆ ಬರುವ ಮುನ್ನ ಹನ್ನೊಂದು ಮಹಿಳೆಯರಿಗೆ ಮದುರೈನಿಂದಲೇ ಭದ್ರತೆ ನೀಡಲಾಗಿತ್ತು. ಆ ಪೈಕಿ ಐವರು, ನಾವು ದೇಗುಲ ಪ್ರವೇಶ ಮಾಡುವುದಿಲ್ಲ. ಬೆಂಬಲ ಸೂಚಿಸುವ ಸಲುವಾಗಿ ಬಂದಿದ್ದೇವೆ ಎಂದು ಹೇಳಿದ್ದಾರೆ. ಈ ಹನ್ನೊಂದು ಮಹಿಳೆಯರೂ ಸೇರಿ ಐವತ್ತು ಮಂದಿ ತಮಿಳುನಾಡು, ಕೇರಳ, ಪಶ್ಚಿಮಬಂಗಾಲ ಹಾಗೂ ಒಡಿಶಾದಿಂದೆಲ್ಲ ಸೇರಿ ಬಂದಿದ್ದರು. ಹನ್ನೆರಡರಷ್ಟಿದ್ದ ಮಹಿಳೆಯರ ಗುಂಪೊಂದು ಪ್ರತ್ಯೇಕವಾಗಿ ಅಯ್ಯಪ್ಪ ದೇಗುಲ ಪ್ರವೇಶಿಸಲು ಪ್ರಯತ್ನಿಸಿದಾಗ ಅದನ್ನು ವಿಫಲಗೊಳಿಸಲಾಯಿತು. ಕಳೆದ ಸೆಪ್ಟೆಂಬರ್ ನಲ್ಲಿ ತೀರ್ಪು ನೀಡಿದ ಪ್ರಕಾರ, ಎಲ್ಲ ವಯಸ್ಸಿನ ಮಹಿಳೆಯರು ಅಯ್ಯಪ್ಪ ದೇಗುಲ ಪ್ರವೇಶ ಮಾಡಬಹುದು ಎಂದು ತೀರ್ಪು ನೀಡಿತ್ತು.
ರಾಜ್ಯ ಪೊಲೀಸರು, ಸರಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕು
"ನಾವು ಲೆಕ್ಕಾಚಾರದ ಪ್ರಕಾರವೇ ಸಾಗುತ್ತಿದ್ದೇವೆ. ಈ ದಿನ ಅಯ್ಯಪ್ಪನ ದರ್ಶನಕ್ಕೆ ತೆರಳಿದವರಲ್ಲಿ ದಲಿತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಾಜ್ಯ ಪೊಲೀಸರು ಹಾಗೂ ಸರಕಾರ ಅಗತ್ಯ ಇಚ್ಛಾಶಕ್ತಿ ಪ್ರದರ್ಶಿಸಬೇಕು. ನಮ್ಮ ಹಕ್ಕು ದೊರೆಯುವಂತೆ ಮಾಡಬೇಕು. ದರ್ಶನಕ್ಕೂ ಮುನ್ನ ಮಾಡಬೇಕಾದ ಉಪವಾಸವನ್ನು ಸಹ ನಾವು ಮಾಡಿದ್ದೇವೆ" ಎಂದು ಮಹಿಳೆಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸೆಲ್ವಿ ಎಂಬುವವರು ಮಾತನಾಡಿ, ಅವರು ನಿಜವಾದ ಭಕ್ತರು. ಶಬಿಮಲೆಯ ನೀತಿ-ನಿಯಮಗಳನ್ನು ಪಾಲಿಸುವವರು. ನಾವು ದೊಡ್ಡ ಸಂಖ್ಯೆಯಲ್ಲಿ ಇರುವುದರಿಂದ ಶಬರಿಮಲೆ ದೇಗುಲ ಪ್ರವೇಶಿಸಲು ಸಾಧ್ಯವಾಗುತ್ತದೆ ಎಂದು ನಂಬಿದ್ದೇವೆ. ನಮ್ಮಲ್ಲಿ ಹಲವರು ಇಪ್ಪತ್ತರಿಂದ ಮೂವತ್ತು ವಯಸ್ಸಿನ ಮಧ್ಯದವರು ಎಂದಿದ್ದಾರೆ.
ಕೊಚ್ಚಿಯಲ್ಲಿ ಸಾಮಾಜಿಕ ಕಾರ್ಯಕರ್ತೆ ರೆಹನಾ ಫಾತಿಮಾ ಬಂಧನ
ಕೊಚ್ಚಿ ವಿಮಾನ ನಿಲ್ದಾಣದಲ್ಲೇ ತಡೆಯಲಾಗಿತ್ತು
ನವೆಂಬರ್ ತಿಂಗಳ ಮಧ್ಯದಲ್ಲಿ ಶಬರಿಮಲೆ ಅಯ್ಯಪ್ಪ ದರ್ಶನಕ್ಕಾಗಿ ಬಂದಿದ್ದ ತೃಪ್ತಿ ದೇಸಾಯಿ ಅವರನ್ನು ಕೊಚ್ಚಿ ವಿಮಾನ ನಿಲ್ದಾಣದಲ್ಲೇ ತಡೆಯಲಾಗಿತ್ತು. ಪಂಬಾವರೆಗೂ ತೃಪ್ತಿ ಅವರನ್ನು ಕರೆದೊಯ್ಯಲು ಯಾವ ಟ್ಯಾಕ್ಸಿ ಚಾಲಕರೂ ಮುಂದಾಗಲಿಲ್ಲ. ದೇಗುಲ ಪ್ರವೇಶಕ್ಕೆ ಸಂಬಂಧಿಸಿದಂತೆ ಪುನರ್ ಪರಿಶೀಲನಾ ಅರ್ಜಿ ವಿಚಾರಣೆಯನ್ನು ಜನವರಿಯಲ್ಲಿ ಆಲಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ಶಬರಿಮಲೆ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡು 'ಸ್ವಾಮಿಯೇ ಶರಣಂ' ಎಂದ ಭಕ್ತ
ಸ್ತ್ರೀಯರು ಪ್ರವೇಶಿಸಿದರೆ ದೇಗುಲಕ್ಕೇ ಬಾಗಿಲು ಹಾಕ್ತೀವಿ
ಕೇರಳ ರಾಜ್ಯ ಸರಕಾರ ಮಹಿಳಾ ಯಾತ್ರಾರ್ಥಿಗಳಿಗೆ ಭದ್ರತೆ ಒದಗಿಸುವುದಾಗಿ ಹೇಳಿದೆ. ಆದರೆ ದೇವಳದ ಮುಖ್ಯ ಅರ್ಚಕರು ಮಾತನಾಡಿ, ಈಗಿರುವ ನಿಯಮಗಳನ್ನು ಮುರಿಯುವಂತೆ ಹತ್ತರಿಂದ ಐವತ್ತು ವರ್ಷದೊಳಗಿನ ಸ್ತ್ರೀಯರಿಗೆ ಪ್ರವೇಶಕ್ಕೆ ಅನುವು ಮಾಡಿಕೊಟ್ಟರೆ ದೇವಾಲಯವನ್ನು ಮುಚ್ಚಿ, ಪೂಜೆಗಳನ್ನು ನಿಲ್ಲಿಸುವುದಾಗಿ ಹೇಳಿದ್ದಾರೆ. ಈ ಮಧ್ಯೆ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಮಹಿಳೆಯರಿಗೆ ಪ್ರವೇಶ ನೀಡುವುದನ್ನು ವಿರೋಧಿಸಿವೆ.