ಎಲ್ಲ ಅಹಿತಕರ ಘಟನೆಗಳಿಗೂ ಕಾಂಗ್ರೆಸ್ ಸರ್ಕಾರ ಕಾರಣ: ನಳಿನ್
ಕಾರವಾರ, ಡಿಸೆಂಬರ್ 14: "ಸಿರಿಯಾ ಮತ್ತು ಅಪ್ಘಾನಿಸ್ಥಾನದಲ್ಲಿ ನಡೆಯುವ ರೀತಿಯಲ್ಲಿ ಹೊನ್ನಾವರದಲ್ಲಿ ಪರೇಶ ಮೇಸ್ತನ ಹತ್ಯೆ ನಡೆದಿದೆ. ಗುರುವಾರ ನಡೆದ ಕಾವ್ಯಾ ನಾಯ್ಕ ಎನ್ನುವ ವಿದ್ಯಾರ್ಥಿನಿಯ ಮೇಲಿನ ಹಲ್ಲೆಗೂ ಕಾಂಗ್ರೆಸ್ ಸರ್ಕಾರವೇ ಹೊಣೆ" ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದರು.
ಕುಮಟಾ ಪಟ್ಟಣದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, "ಪರೇಶ ಮೇಸ್ತ ಹತ್ಯೆ ಸಂದರ್ಭದಲ್ಲಿ ಹೊನ್ನಾವರದ ಗುಡ್ ಲಕ್ ಹೊಟೇಲ್ ಬಳಿ ಮಾರಾ ಮಾರಿ ನಡೆದಿದೆ. ಅಲ್ಲಿ ಕೆಲವರು ಮಾರಾಕಾಸ್ತ್ರ ಹಿಡಿದುಕೊಂಡು ಓಡಾಡುತ್ತಿದ್ದರೂ ಅವರನ್ನು ಪೊಲೀಸರು ಬಂಧಿಸಿಲ್ಲ. ಪೊಲೀಸರ ಕೈ ಕಟ್ಟಿ ಹಾಕಿ ಕಾಂಗ್ರೆಸ್ ರಾಜಕಾರಣ ಮಾಡಿದೆ" ಎಂದು ಆರೋಪಿಸಿದರು.
"ಹೊನ್ನಾವರ ಪೊಲೀಸ್ ಇನ್ಸ್ ಪೆಕ್ಟರ್ ಕುಮಾರಸ್ವಾಮಿ ಅವರು ಕಣ್ಮುಚ್ಚಿ ಕುಳಿತಿದ್ದರಿಂದ ಗಲಾಟೆ ಸಂದರ್ಭದಲ್ಲಿ ಪರೇಶನ ಹತ್ಯೆ ನಡೆದಿದೆ. ಆದ್ದರಿಂದ ಅವರನ್ನು ಅಮಾನತುಗೊಳಿಸಬೇಕು. 1993ರಲ್ಲಿ ವೀರಪ್ಪ ಮೋಯ್ಲಿ ಮುಖ್ಯಮಂತ್ರಿ ಆಗಿದ್ದಾಗ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೋಮು ಗಲಭೆ ನಡೆದಿತ್ತು. ಈ ಬಾರಿ ಮುಖ್ಯಮಂತ್ರಿ ಜಿಲ್ಲೆಗೆ ಆಗಮಿಸಿದಾಗಲೇ ಇವೆಲ್ಲ ಸಂಭವಿಸಿದೆ. ಆದರೆ ಬಿಜೆಪಿ ಸರ್ಕಾರವಿದ್ದಾಗ ಇಂಥ ಯಾವ ಗಲಾಟೆಯೂ ಆಗಿರಲಿಲ್ಲ. ಯಾಕೆಂದರೆ ಸರ್ಕಾರ ಪೊಲೀಸರಿಗೆ ಎಲ್ಲ ಅಧಿಕಾರ ನೀಡಿತ್ತು," ಎಂದಿದ್ದಾರೆ.
"ಜಿಲ್ಲೆಯಲ್ಲಿ ನಡೆದ ಘಟನೆಗಳಲ್ಲಿ ಸರ್ಕಾರ ಅಮಾಯಕ ಹಿಂದುಗಳನ್ನು ಬಂಧಿಸುವ ಕೆಲಸ ಮಾಡುತ್ತಿದೆ. ಪರೇಶ ಹತ್ಯೆ ಖಂಡಿಸಿ ಜಿಲ್ಲೆ ಹಾಗೂ ರಾಜ್ಯದ ಜನತೆ ಪ್ರತಿಭಟಿಸದಿದ್ದರೆ ಸರ್ಕಾರ ಪ್ರಕರಣವನ್ನು ಸಿ.ಬಿ.ಐ ವಿಚಾರಣೆಗೆ ವಹಿಸುತ್ತಿರಲಿಲ್ಲ. ಸಿ.ಬಿ.ಐ ವಿಚಾರಣೆಗೆ ವಹಿಸಿದ್ದರಿಂದ ಡಿ.18 ರಂದು ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯಬೇಕಿದ್ದ ಪ್ರತಿಭಟನೆಯನ್ನು ಬಿ.ಜೆ.ಪಿ ಮುಂದೂಡಿದ," ಎಂದು ಅವರು ಹೇಳಿದರು.
'ಹತ್ಯೆಗೊಳಗಾದ ಪರಮೇಶ ಕುಟುಂಬಕ್ಕೆ ಸರ್ಕಾರ ರೂ. 50 ಲಕ್ಷ ಪರಿಹಾರ ನೀಡಬೇಕು' ಎಂದು ಅವರು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.
ಮಾಜಿ ಶಾಸಕ ಸುನಿಲ ಹೆಗಡೆ, ಪಕ್ಷದ ಜಿಲ್ಲಾಧ್ಯಕ್ಷ ಕೆ.ಜಿ. ನಾಯ್ಕ, ಮುಖಂಡರಾದ ಎಂ.ಜಿ. ನಾಯ್ಕ, ವಿನೋದ ಪ್ರಭು, ಮನೋಜ ಭಟ್ಟ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.