ಕೃಷಿ ಕಾಯ್ದೆ ಪ್ರತಿಭಟನೆ: ಆಸ್ಟ್ರೇಲಿಯಾದಲ್ಲಿಯೂ ಸಂಘರ್ಷ
ಸಿಡ್ನಿ, ಮಾರ್ಚ್ 4: ಕೃಷಿ ಕಾಯ್ದೆಗಳ ವಿಚಾರವಾಗಿ ಆಸ್ಟ್ರೇಲಿಯಾದಲ್ಲಿನ ಭಾರತದ ಸಮುದಾಯದಲ್ಲಿಯೂ ವೈಷಮ್ಯ ಮೂಡಿದ್ದು, ಭಾನುವಾರ ತಮ್ಮ ಕಾರಿನ ಮೇಲೆ ದಾಳಿ ನಡೆದಿದೆ ಎಂದು ಸಿಡ್ನಿಯಲ್ಲಿನ ಸಿಖ್ ವ್ಯಕ್ತಿಗಳ ಗುಂಪೊಂದು ಆರೋಪಿಸಿದೆ.
ಸಿಡ್ನಿಯ ಪೊಲೀಸ್ ಅಧಿಕಾರಿಗಳ ಪ್ರಕಾರ, ಭಾರತ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಗಡಿಯಲ್ಲಿ ಸಿಖ್ ರೈತರ ನೇತೃತ್ವದ ಪ್ರತಿಭಟನೆಗಳು ತೀವ್ರಗೊಂಡ ಬಳಿಕ ಆಸ್ಟ್ರೇಲಿಯಾದಲ್ಲಿನ ಸಿಖ್ ಸಮುದಾಯ ಹಾಗೂ ಭಾರತ ಸರ್ಕಾರದ ಬೆಂಬಲಿಗರ ನಡುವೆ ಉದ್ವಿಗ್ನತೆ ಹೆಚ್ಚುತ್ತಿದೆ.
ಸಚಿವರ ಮಾತು: ಹೊಸ ಕೃಷಿ ಕಾಯ್ದೆಗಳಿಂದ ದೇಶದ ರೈತರೆಲ್ಲ ಶ್ರೀಮಂತ!
ಕಾರ್ ಒಳಗೆ ಸಿಖ್ ವ್ಯಕ್ತಿಗಳು ಕುಳಿತಿರುವಾಗಲೇ, ಬೇಸ್ಬಾಲ್ ಬ್ಯಾಟ್ಗಳು ಹಾಗೂ ಸುತ್ತಿಗೆಗಳಿಂದ ಅಪರಿಚಿತ ವ್ಯಕ್ತಿಗಳು ಕಾರಿಗೆ ಬಾರಿಸುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಯಾವುದೇ ಗಂಭೀರ ಗಾಯಗಳಿಲ್ಲದೆ ಸಿಖ್ ವ್ಯಕ್ತಿಗಳು ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಕಿಟಕಿಯ ಗಾಜುಗಳು ಸಂಪೂರ್ಣ ಪುಡಿಯಾಗಿವೆ.
ಸಿಡ್ನಿಯ ಪೂರ್ವ ಭಾಗದ ಹ್ಯಾರಿಸ್ ಪಾರ್ಕ್ನಲ್ಲಿ ಈ ಘಟನೆ ನಡೆದಿದ್ದು, ದೇಶದಲ್ಲಿ ದ್ವೇಷ ಅಪರಾಧಗಳು ಹೆಚ್ಚುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.
'ಪ್ರತಿ ದಿಕ್ಕಿನಿಂದಲೂ ಅವರು ಕಾರ್ಗೆ ಹೊಡೆದಿದ್ದಾರೆ. ಇದರಿಂದ 10,000 ಡಾಲರ್ ನಷ್ಟವಾಗಿದೆ. ದಾಳಿಯ ಸ್ವರೂಪ ಹೇಗಿತ್ತು ಎಂದರೆ ಯಾರಾದರೂ ಸಾಯಬಹುದಾಗಿತ್ತು' ಎಂದು ದಾಳಿಯಿಂದ ಬಚಾವಾದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.
ಬಿಬಿಸಿ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ತಾಯಿ ವಿರುದ್ಧ ಅವಾಚ್ಯ ಪದಗಳಿಂದ ನಿಂದನೆ
ಈ ರಾಜಕೀಯ ಸಂಘರ್ಷದ ನಡುವೆ ತಾವು ಸಿಲುಕಿಕೊಂಡಿರುವುದಾಗಿ ಸಿಡ್ನಿಯ ಪೂರ್ವ ಭಾಗದ ಅನೇಕ ಹೋಟೆಲ್ಗಳು ಮತ್ತು ದೇವಸ್ಥಾನಗಳು ಆರೋಪಿಸಿವೆ. ಹಿಂಸಾಚಾರ ಮತ್ತು ಧ್ವಂಸ ಪ್ರಕರಣಗಳು ಹೆಚ್ಚುತ್ತಿವೆ. ಎರಡು ಗುಂಪುಗಳ ನಡುವೆ ಶಾಂತಿ ಮೂಡಿಸಲು ಸಂಧಾನ ಮಾತುಕತೆ ನಡೆಸುವಂತೆ ಸಮುದಾಯಗಳ ಮುಖಂಡರನ್ನು ಸ್ಥಳೀಯ ಅಧಿಕಾರಿಗಳು ಸಂಪರ್ಕಿಸಿದ್ದಾರೆ.