ಯಶವಂತ ಸಿನ್ಹಾ ಶ್ರೀನಗರ ಪ್ರವೇಶಕ್ಕೆ ನಿರಾಕರಣೆ, ದೆಹಲಿಗೆ ವಾಪಸ್
ಶ್ರೀನಗರ, ಸೆಪ್ಟೆಂಬರ್ 17: ಮಾಜಿ ಬಿಜೆಪಿ ಸಚಿವ ಯಶವಂತ ಸಿನ್ಹಾ ಮತ್ತು ಸಂಗಡಿಗರನ್ನು ಪೊಲೀಸರು ಶ್ರೀನಗರ ಪ್ರವೇಶಿಸದಂತೆ ವಿಮಾನ ನಿಲ್ದಾಣದಲ್ಲಿ ತಡೆ ಹಿಡಿದರು.
ಇಂದು ಮಧ್ಯಾಹ್ನ ಯಶವಂತ ಸಿನ್ಹಾ, ನಿವೃತ್ತ ಏರ್ ಮಾರ್ಷಲ್ ಕಪಿಲ್ ಕಕ್ ಮತ್ತು ಸಾಮಾಜಿಕ ಹೋರಾಟಗಾರ್ತಿ ಸುಶೋಭಾ ಭಾವೆ ಅವರು ಬೆಳಿಗ್ಗೆ 11:30 ರ ಸುಮಾರಿಗೆ ಶ್ರೀನಗರ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಆದರೆ ಅವರನ್ನು ಅಲ್ಲಿಯೇ ತಡೆದ ವಿಮಾನ ನಿಲ್ದಾಣ ಅಧಿಕಾರಿಗಳು ಮತ್ತು ಪೊಲೀಸರು ಅವರನ್ನು ನಗರದ ಒಳಗೆ ಹೋಗಲು ಬಿಡಲಿಲ್ಲ.
ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಫಾರೂಕ್ ಅಬ್ದುಲ್ಲಾ ಗೃಹಬಂಧನ
ಆದರೆ ಯಶವಂತ ಸಿನ್ಹಾ ಮತ್ತು ಸಂಗಡಿಗರು ತಾವು ನಗರದ ಒಳಕ್ಕೆ ಹೋಗಿಯೇ ಸಿದ್ಧ ಎಂದ ಹಠ ಹಿಡಿದು ಕೂತರು. ಯಶವಂತ ಸಿನ್ಹಾ ಅವರು ಎನ್ಜಿಒ ದ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ಶ್ರೀನಗರಕ್ಕೆ ತೆರಳಿದ್ದರು.
ಯಶವಂತ ಸಿನ್ಹಾ ಅವರು ಕಾಶ್ಮೀರಕ್ಕೆ ಭೇಟಿ ನೀಡುತ್ತಾರೆಂಬ ಗುಮಾನಿಯ ಮೇಲೆ ಅವರನ್ನು ತಡೆ ಹಿಡಿದಿದ್ದಾಗಿ ಪೊಲೀಸರು ಹೇಳಿದ್ದಾರೆ. ಯಶವಂತ ಸಿನ್ಹಾ ಅವರನ್ನು ಮರಳಿ ದೆಹಲಿಗೆ ಕಳುಹಿಸಲು ಹರಸಾಹಸ ಪಟ್ಟಿದ್ದಾರೆ.
ಅಂತಿಮವಾಗಿ ಯಶವಂತ ಸಿನ್ಹಾ ಅವರನ್ನು ಮಾತ್ರವೇ ದೆಹಲಿಗೆ ವಾಪಸ್ ಕಳುಹಿಸಿರುವ ಪೊಲೀಸರು, ಅವರ ಜೊತೆಗಿದ್ದ ಇಬ್ಬರನ್ನು ನಗರದ ಒಳಕ್ಕೆ ಪ್ರವೇಶಿಸಲು ಬಿಟ್ಟಿದ್ದಾರೆ.
ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನ-ಮಾನ ನೀಡಿದ್ದ ಆರ್ಟಿಕಲ್ 370 ಅನ್ನು ಕೇಂದ್ರ ಸರ್ಕಾರ ರದ್ದು ಮಾಡಿದ್ದು, ಆಗಿನಿಂದಲೂ ವಿಪಕ್ಷದ ಯಾವ ರಾಜಕೀಯ ಮುಖಂಡರನ್ನು ಜಮ್ಮು ಕಾಶ್ಮೀರದ ಒಳಗೆ ಬಿಟ್ಟಿಲ್ಲ. ರಾಹುಲ್ ಗಾಂಧಿ ಸಹ ಹೋಗಿ ವಾಪಸ್ ಬಂದರು.