'ಆ. 370, 35 ಎ ಪುನರ್ ಸ್ಥಾಪನೆಯಾಗುವವರೆಗೂ ಚುನಾವಣೆಯಲ್ಲಿ ಸ್ಪರ್ಧಿಸಲ್ಲ': ಮೆಹಬೂಬಾ ಮುಫ್ತಿ
ನವದೆಹಲಿ, ಜೂ.26: ''ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ಮತ್ತು 35 ಎ ಪುನಃ ಸ್ಥಾಪನೆಯಾಗುವವರೆಗೂ ನಾನು ಚುನಾವಣೆಯಲ್ಲಿ ಸ್ಪರ್ಧಿಸಲಾರೆ,'' ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೆ, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ಈ ಬಗ್ಗೆ ಇಂಡಿಯಾ ಟುಡೇ ಯ ರಾಜದೀಪ್ ಸರ್ದೇಸಾಯಿ ಜೊತೆಗಿನ ವಿಶೇಶೇಷ ಸಂದರ್ಶನದಲ್ಲಿ ಮಾತನಾಡಿದ ಪಿಡಿಪಿ ಮುಖಂಡೆ, ''ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ಮತ್ತು 35 ಎ ಪುನಃಸ್ಥಾಪನೆಯಾಗುವವರೆಗೂ 'ಅಧಿಕಾರ ರಾಜಕೀಯ'ದಲ್ಲಿ ಭಾಗವಹಿಸುವುದಿಲ್ಲ ಅಥವಾ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ,'' ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಗೌರವ ಮರಳಿ ಕೊಡಿಸಿ ಎಂದು ಪಾಕಿಸ್ತಾನವನ್ನು ಕೇಳಲೇ?: ಮೆಹಬೂಬಾ
"ಆರ್ಟಿಕಲ್ 370 ಮತ್ತು 35 ಎ ಪುನಃಸ್ಥಾಪನೆಯು ಕೇಂದ್ರವು ಒಂದು ತಟ್ಟೆಯಲ್ಲಿ ನೀಡುವಂತದ್ದು ಅಲ್ಲ ಎಂದು ನನಗೆ ತಿಳಿದಿದೆ. ಆದರೆ ಅದಕ್ಕಾಗಿ ನಾವು ಹೋರಾಡಬೇಕಿದೆ. ಆರ್ಟಿಕಲ್ 370, 35 ಎ ಪುನರ್ ಸ್ಥಾಪನೆಯಾಗುವವರೆಗೂ ಗುಪ್ಕರ್ ಮೈತ್ರಿ ಒಟ್ಟಾಗಿ ಉಳಿಯುತ್ತದೆ," ಎಂದು ತಿಳಿಸಿದ್ದಾರೆ.
"ನಮಗೆ ಭಾರತೀಯ ಸಂವಿಧಾನವು ಏನು ನೀಡಿದೆ ಅದು ನಮಗೆ ಧಕ್ಕಬೇಕು ಎಂದು ನಾವು ಬಯಸುತ್ತೇವೆ. ಅವರು (ಕೇಂದ್ರ ಬಿಜೆಪಿ ಸರ್ಕಾರ) ತಮ್ಮದೇ ಆದ ಚುನಾವಣಾ ಲಾಭಕ್ಕಾಗಿ 370 ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಭಾರತೀಯ ಸಂವಿಧಾನಕ್ಕೆ ಅಪಮಾನ ಮಾಡಿದೆ," ಎಂದು ದೂರಿದ್ದಾರೆ.
ಹಾಗೆಯೇ ನಮ್ಮದು 'ಪ್ರತ್ಯೇಕತಾವಾದಿ' ಬೇಡಿಕೆಯಲ್ಲ ಎಂದು ಕೂಡಾ ಮುಫ್ತಿ ಒತ್ತಿ ಹೇಳಿದ್ದಾರೆ.
ಮೋದಿ ಜತೆ ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಮುಫ್ತಿ, ಫಾರೂಕ್ ಅಬ್ದುಲ್ಲಾ
ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ 370 ಮತ್ತು 35 ಎ ವಿಧಿಗಳನ್ನು 2019 ರಲ್ಲಿ ರದ್ದು ಮಾಡಲಾಗಿದೆ. ಈ ಬೆನ್ನಲ್ಲೇ ಹಲವಾರು ನಾಯಕರನ್ನು ಕೇಂದ್ರ ಸರ್ಕಾರ ಗೃಹ ಬಂಧನದಲ್ಲಿ ಇರಿಸಿತ್ತು. ಅಷ್ಟೇ ಅಲ್ಲದೇ ಜಮ್ಮು ಕಾಶ್ಮೀರದಾದ್ಯಂತ ಅಂತರ್ಜಾಲ ಸ್ಥಗಿತಗೊಳಿಸಿತ್ತು.
ಸುಮಾರು ಎರಡು ವರ್ಷಗಳ ಬಳಿಕ ನವದೆಹಲಿಯಲ್ಲಿ ಜಮ್ಮು ಮತ್ತು ಕಾಶ್ಮೀರ ವಿಚಾರ ಕುರಿತು ಪ್ರಧಾನಿ ಮೋದಿ ಗುರುವಾರ ಸರ್ವಪಕ್ಷ ಸಭೆ ಕರೆದಿದ್ದರು.
(ಒನ್ಇಂಡಿಯಾ ಸುದ್ದಿ)